ಮಂಗಳೂರು: ಕೋವಿಡ್ ಸಾಂಕ್ರಾಮಿಕ ಸೃಷ್ಟಿಸಿದ ʼವರ್ಕ್ ಫ್ರಂ ಹೋಮ್ʼ ಪರಿಸ್ಥಿತಿ ಮಹಿಳೆಯರಿಗೆ ಅಪಾರ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಮಹಿಳೆಯರು ಮತ್ತು ಪುರುಷರು ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮಹಿಳೆ ತನ್ನ ದೈಹಿಕ ಸವಾಲುಗಳನ್ನು ಮೆಟ್ಟಿನಿಂತು ಸಮಯದೊಂದಿಗೆ ಹೆಜ್ಜೆಹಾಕಲು ಯಶಸ್ವಿಯಾಗಿದ್ದಾಳೆ, ಎಂದು ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲೆ ಡಾ. ಮಾಲಿನಿ ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ಕಾಲೇಜಿನ ಮಹಿಳಾ ವೇದಿಕೆ, ಮಹಿಳಾ ಕೋಶ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ʼಪ್ರಮೀಳಾ ರಾಜ್ಯʼದ ಅಗತ್ಯವಿಲ್ಲ, ಆದರೆ ಹೆಣ್ಣಿಗೆ ತನ್ನ ಹೆಣ್ತನವನ್ನು ಅನುಭವಿಸುವ, ಪುರುಷರಿಗೆ ಸಮಾನವಾಗಿ ಬದುಕುವ ಹಕ್ಕಿದೆ, ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಮಹಿಳೆ ಮತ್ತು ಪುರುಷರಲ್ಲಿ ಯಾರು ಮೇಲು ಎಂಬ ಚರ್ಚೆ ಅನಗತ್ಯ. ಇಬ್ಬರೂ ಒಂದು ಬಂಡಿಯ ಚಕ್ರಗಳಂತೆ ಸಮಾನವಾಗಿ ಬದುಕಬೇಕು, ಎಂದರು.
ಮಹಿಳಾ ಸಾಧಕಿಯರ ಕುರಿತು ಪ್ರದರ್ಶಿಸಿದ ವೀಡಿಯೋ ಗಮನ ಸೆಳೆಯಿತು. ಮಹಿಳಾ ಕೋಶದ ಸಂಯೋಜಕಿ ಡಾ. ಶೋಭಾ ಅವರ ನೇತೃತ್ವದಲ್ಲಿ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಸಿಬ್ಬಂದಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.ಹೊಸತನದ ಸಂಕೇತವೆಂಬಂತೆ ಹಸಿರು ಉಡುಗೆ ತೊಟ್ಟಿದ್ದ ಮಹಿಳೆಯರು ಗಮನ ಸೆಳೆದರು.
ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಎಲ್. ಲಕ್ಷ್ಮೀದೇವಿ, ಪೂರ್ವತನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ಐಕ್ಯೂಎಸಿ ಸಂಯೋಜಕ ಡಾ. ಸಿದ್ದರಾಜು ಸೇರಿದಂತೆ ಕಾಲೇಜಿನ ಹೆಚ್ಚಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಮಹಿಳಾ ವೇದಿಕೆಯ ಸಂಯೋಜಕಿ ಡಾ. ಭಾರತಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಡಾ. ಗಾಯತ್ರಿ ಎನ್ ಅಥಿತಿಯನ್ನು ಪರಿಚಯಿಸಿದರು. ಉಪನ್ಯಾಸಕಿ ಜಯಶ್ರೀ ಭರತ್ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ