ಆದರೆ ಇಲ್ಲೊಬ್ಬರು ತನ್ನ ಅಮ್ಮ,ಹೆಣ್ಣು ಕೊಟ್ಟ ಅತ್ತೆ ಮಾವ ಮತ್ತು ತನ್ನ ಹೆಂಡತಿಯನ್ನೇ ಸಂಮಾನಿಸಿ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ಕಾರ್ಕಳದ ಕೃಷಿಕರೂ , ಜಿಲ್ಲಾ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳೂ , ಸಾವಯವ ಕೃಷಿ ಪರಿವಾದ ಸಕ್ರಿಯ ಸದಸ್ಯರೂ , ಕಾಟ್ಯರಿಂಗ್ ಉದ್ಯಮಿಯೂ ಆಗಿರುವ ಇರ್ವತ್ತೂರು ಶ್ರೀನಿವಾಸ ಭಟ್ಟರು ಹೀಗೊಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸಿದ್ದಾರೆ . ಬುಧವಾರ ತನ್ನ ವೈವಾಹಿಕ ಜೀವನದ 25 ನೇ ವರ್ಷವೂ ಆಗಿದ್ದರಿಂದ ಇರ್ವತ್ತೂರಿನ ಹಿತ್ತಿಲು ಮನೆಯಲ್ಲಿ ಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಭಟ್ಟರು ಅದೇ ಸಂದರ್ಭದಲ್ಲಿ ತನಗೆ ಜನ್ಮನೀಡಿ ಬಹಳ ಕಷ್ಟದಿಂದ ಸಾಕಿ ಬೆಳೆಸಿದ್ದು ಮಾತ್ರವಲ್ಲದೇ ಇಂದಿಗೂ ಕೃಷಿ ಕಾರ್ಯ ಮತ್ತು ಮನೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿ ನೆರವಾಗುತ್ತಿರುವ ಅಮ್ಮ ಪ್ರೇಮಾ ಭಟ್ , ಕೃಷಿ ಎಂದರೆ ಮೂಗು ಮುರಿಯುವ ಮತ್ತು ಕೃಷಿಕ ಯುವಕರಿಗೆ ಹೆಣ್ಣುಕೊಡಲು ಹಿಂದು ಮುಂದು ನೋಡುವ ಕಾಲದಲ್ಲಿ ತನಗೆ ಅತ್ಯಂತ ಪ್ರೀತಿಯಿಂದಲೇ ಮಗಳನ್ನು ಕೊಟ್ಟು ಕನ್ಯಾದಾನ ಮಾಡಿದ ಅತ್ತೆ ಮಾವನವರಾದ ಶೃಂಗೇರಿ ಸಮೀಪದ ಅಡ್ಡಗದ್ದೆ ನಿವಾಸಿಗಳಾದ ರಾಮಕೃಷ್ಣಯ್ಯ ಸುನಂದಾ ದಂಪತಿ , ಮತ್ತು ತನ್ನನ್ನು ವರಿಸಿ , ಈ ತನಕದ 25 ವರ್ಷಗಳಲ್ಲಿ ತನ್ನೊಂದಿಗೆ ಅತ್ಯಂತ ಕಷ್ಟಕರವಾದ ಕೃಷಿಗೆ ಭರಪೂರ ನೆರವು , ಕ್ಯಾಟರಿಂಗ್ ಉದ್ಯಮಕ್ಕೆ ಸಹಕಾರ , ತನ್ನ ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ , ಮಕ್ಕಳಿಗೆ ಉತ್ತಮ ಸಂಸ್ಕಾರ , ಹಳ್ಳಿ ಮನೆಯ ಬದುಕಿನ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಹುಟಿ್ಟಿದ ಮನೆ , ಕಾಲಿಟ್ಟ ಮನೆಯ ಕೀರ್ತಿ ಬೆಳಗುತ್ತಿರುವ ಪ್ರೀತಿಯ ಮಡದಿ ಸುಜಾತಾ ಭಟ್ ಅವರನ್ನು ನೂರಾರು ಬಂಧುಗಳ ಉಪಸ್ಥಿತಿಯಲ್ಲಿ ಸಂಮಾನಿಸಿ ಧನ್ಯತೆ ಅನುಭವಿಸಿದ್ದಾರೆ . ಇದರ ಜೊತೆಗೇ ಮನೆಯ ಕುಲಪುರೋಹಿತರಾಗಿ ಎಲ್ಲ ರೀತಿಯ ಮಾರ್ಗದರ್ಶನ ಆಶೀರ್ವಾದ ಮಾಡುತ್ತಿರುವ ವೇದಮೂರ್ತಿ ರೆಂಜಾಳ ಗುರುರಾಜ ಉಪಾಧ್ಯಾಯರನ್ನೂ ಸಂಮಾನಿಸಿದರು .
ಇದೊಂದು ಅರ್ಥಪೂರ್ಣ ಹಾಗೂ ಮಾದರಿ ಕಾರ್ಯಕ್ರಮವಾಗಿ ನಡೆದಿದೆ . ಸಮಾಜದ ಎಲ್ಲೆಲ್ಲೋ ಇರುವ ಸಾಧಕ ಮಹಿಳೆಯರನ್ನು ಸಂಮಾನಿಸುವುದು ಒಂದು ಬಗೆಯಾದರೆ ತನ್ನ ಮನೆ ಬದುಕು ಉದ್ಯಮ ಕೃಷಿಗೆ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಶ್ರಮ ಶ್ರದ್ಧೆಯಿಂದ ಜೀವನ ನಡೆಸುತ್ತಿರುವ ತಾಯಿ , ಹೆಂಡತಿ ,ಮತ್ತು ಕೃಷಿ ಬದುಕು ಅತ್ಯಂತ ಕಷ್ಟವೆಂದು ಗೊತ್ತಿದ್ದರೂ ರೈತ ಯುವಕನಿಗೆ ಹೆಣ್ಣು ಕೊಟ್ಡ ಅತ್ತೆ ಮಾವನನ್ನು ಸಂಮಾನಿಸುವ ಪರಿಪಾಠ ಅತ್ಯಂತ ಶ್ಲಾಘನೀಯ ಎಂದೇ ನೆರೆದ ಬಂಧುಗಳು ಸಂತಸ ಪಟ್ಟರು . ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿ ಪ್ರಸ್ತಾವನೆಗೈದರು . ಶ್ರೀನಿವಾಸ ಭಟ್ ಧನ್ಯವಾದ ಅರ್ಪಿಸಿದರು .ಅವರ ಸಹೋದರರಾದ ಕೃಷ್ಣ ಭಟ್ ಮತ್ತು ವರದರಾಜ ಭಟ್ ಹಾಗೂ ಪುತ್ರರಾದ ಶ್ರೀಶ ಭಟ್ ಶ್ರೀನಿಧಿ ಭಟ್ ಸಹಕರಿಸಿದರು .
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


