ದಶಸ್ತಂಭಗಳ ವಿಶೇಷ ಹಿನ್ನಲೆ, ವಿಶಾಲವಾದ ವೇದಿಕೆ. ಎರಡು ದೀಪಸ್ತಂಭಗಳ ವಿನ್ಯಾಸದೊಡನೆ ಮಾಲೆಯನ್ನು ಧರಿಸಿದ ಕೃಷ್ಣಮೂರ್ತಿ ಶ್ರೀನಿವಾಸ ವರಖೇಡಿಯವರ ಸುಪುತ್ರಿಯಾದ ಮೇಧಾ ಅವರ ರಂಗಪ್ರವೇಶ ಅದ್ದೂರಿಯಿಂದ ಆರಂಭವಾಯಿತು. ಸಂಗೀತದ ಕಲಾವಿದರಿಗೂ ವಿಶೇಷವಾದ ಕಲ್ಲಿನಿಂದ ಕಟ್ಟಿದ್ದಾರೇನೋ ಎಂದೆನಿಸುವ ವೇದಿಕೆ ಚೆನ್ನಾಗಿತ್ತು.
ಗಣೇಶ ಪಂಚಕವನ್ನು ಹಲವಾರು ಬಾರಿ ಕಲಾವಿದರು ನೆರವೇರಿಸಿದ್ದನ್ನ ನೋಡಿದ್ದೇನೆ. ಅಮೃತವರ್ಷಿಣಿಯ ಕೊಳಲಿನ ಆಲಾಪದಿಂದ ವಕ್ರತುಂಡನ ಸ್ತುತಿಯೊಂದಿಗೆ ಆರಂಭವಾಗಿ, ದಶಸ್ತಂಭಗಳಲ್ಲಿ ನಡೆದು ಮಾಡಿದ ಭಂಗಿಗಳಿಂದಲೇ ಇಂದಿನ ಕಾರ್ಯಕ್ರಮ ಯಶಸ್ವಿಯಾಗುವ ಭರವಸೆಕೊಟ್ಟಿತು. 'ತ್ತ ತ್ತ ಝಂ' ಎಂದಾಗ ಹಿಂದಿನ ಪರದೆಯು 3 ಡಿ ಏನೋ ಎಂಬಂತೆ ಇನ್ನಷ್ಟು ಸಂಧ್ಯೆಯ ಅಸ್ತಮಯ ರಂಗನ್ನು ತೋರುವ ಸ್ತಂಭಗಳ ಹಿನ್ನಲೆ ಕಣ್ಣಿಗೆ ಮುದ ನೀಡಿತು. ನೀರಿನ ಹರಿಯವಿಕೆಯೇನೋ ಎಂಬಂತಹ ನೃತ್ಯ. ಸಂಭ್ರಮದ ಹಿನ್ನಲೆಯಲ್ಲಿ 'ಮುದಾಕರಾತ್ತ ಮೋದಕಂ' ಅದ್ಭುತವಾಗಿ ಮೂಡಿ ಬೀದಿಯ ತೋರಣ, ತೇರನ್ನು ತೋರುವಾಗ ಹಿನ್ನೆಲೆಗೆ ಸಂವಾದಿಯಾಗಿ ಪಟಾಕಿ, ವಾದ್ಯ, ತೆಂಗಿನಕಾಯಿ ಒಡೆದ, ಉಪ್ಪರಿಗೆಯ ಗೃಹಿಣಿಯರ ನಿತ್ಯದ ಕೆಲಸವನ್ನ ಮೀರಿ ಸಂಭ್ರಮದಲ್ಲಿ ಮೈಮರೆರತದ್ದು ಬಹಳ ಚೆನ್ನಾಗಿ ಮೂಡಿತು. ಲೋಕಧರ್ಮಿಯ ಸಂಭ್ರಮ ಮತ್ತು ಭಕ್ತಿಯ ಹೊಯ್ದಾಟ ಯಾವುದು ಮೇಲುಗೈ ಎಂಬ ಅವಿನಾಭಾವ ಸಂಬಂಧದ ತೋರಿಕೆ.
'ಬೃಂದಾವನ ನಿಲಯೇ' ರೀತಿಗೌಳದ ವೀಣೆಯ ಮತ್ತು ಕೊಳಲಿನ ಆಲಾಪದೊಂದಿಗೆ, ಯಮುನಾತಟದ ಹಿನ್ನಲೆಯೊಯೊಂದಿಗೆ ನಾಟ್ಯದ ಅತ್ಯುತ್ತಮಚಾರಿಗಳು ಕರಣಗಳು, ಯಮುನೆಯ ಹರಿಯುವಿಕೆಯ ಲೀಲೆಯನ್ನೇ ಬಿಂಬಿಸುವಂತೆ ಅಂತೆಯೇ ರಾಧೆಯ ಮನಸ್ಥಿತಿಯ ತುಮುಲವನ್ನೇ ತೋರುವಂತೆ ಮೂಡಿತು. ಹೇಗೆ ಸಿಂಗರಿಸಲಿ, ಹೇಗೆ ಕೃಷ್ಣನನ್ನು ಬರಮಾಡಿಕೊಳಲಿ, ಅವನ ಅಂದವನ್ನು ಯಾವ ಉಪಮೆಗಳಿಂದ ಬಣ್ಣಿಸಲಿ, ಉಯ್ಯಾಲೆಯಾಟ, ಸರಸ-ವಿರಸದೊಡನೆ ಮೂಡಿತು. ಬೇರೆಬೇರೆ ನಟುವಾಂಗದ ನಡೆಗಳಿಗೆ ಕಾಳಿಂಗಮರ್ಧನವು ಬಹಳ ಚೆನ್ನಾಗಿ ಮೂಡಿತು.
ವಿಲಂಬ ಕಾಲದ ಕೃತಿಯಿಂದ ಆರಂಭವಾಗಿ ವಿಪ್ರಲಂಬನಾಯಿಕೆಯ ಭಾವನೆಗಳನ್ನು ಹಿಡಿದಿಟ್ಟುತೋರಿದ, 'ಯಾದವಕುಲತಿಲಕಾ' ಸಿಂಗಾರದ ಉತ್ಸಾಹದಿಂದ ತಾನು ಕಾದರೂ ತನ್ನ ಅಲಕ್ಷ್ಯೆ ನ್ಯಾಯವೇ ಎಂದು ಮುಳಿದು ಎಲ್ಲಾ ಏರ್ಪಾಟನ್ನು ನಾಶಮಾಡುವ ಹಿಂಸೆಯ ಕೊರಗು ರಾಧೆಯಲ್ಲಿ ಚೆನ್ನಾಗಿ ಮೂಡಿತು. ಕೃಷ್ಣನಿಗಾಗಿ ಸಿಂಗರಿಸುವಲ್ಲಿ, ಹೂವನ್ನು ಕೀಳುವಾಗ ಮುಳ್ಳು ಕುಟುಕಿದರೂ ಗಮನಿಸದೆ ಒಪ್ಪಮಾಡಿದ ಅಭಿನಯ, ಸಂಚಾರಿಗಳಲ್ಲಿ ಕಂಸವಧೆ, ಕಾಳಿಂಗಮರ್ಧನದಿಂದ, ಅಥವಾ ಗೋಪಿಕೆಯರಿಂದ ಅನ್ಯಮನಸ್ಕನಾದೆಯೇ?, ನನ್ನಲ್ಲಿ ಗಮನವಿಲ್ಲವೇ ಎಂಬ ಚಾರುಕೇಶಿಯ ಅಳಲು ಅದೇ ಗಿಳಿಯ ಹಸುರು ಮತ್ತು ಕೊಕ್ಕಿನ ಕೆಂಪನ್ನು ತೋರುವ ಉಡಿಗೆಯಲ್ಲಿ ಬಹಳ ಚೆನ್ನಾಗಿ ಮೂಡಿತು.
ಆಗ ನಟುವಾಂಗದಲ್ಲಿ ಎರಡು ಕಾಲಗಳಲ್ಲಿ ತೋರಿದ ಸಖಿಯ ಕೃಷ್ಣನನ್ನು ನೋಡುವಲ್ಲಿ ಕರೆದೊಯ್ಯುವ ವೇಗದ ಭಾವ, ರಾಧೆಯ ಸಂಕೋಚದ ವಿಲಂಬ ಮನಮುಟ್ಟಿತು.
ವರ್ಣದಷ್ಟು ಹೊತ್ತಿಗೆ ಒಂದುವರೆ ಗಂಟೆಗಳ ಕಾಲದ ಅಭಿನಯ, ಒಬ್ಬರೇ ವೇದಿಕೆಯನ್ನು ನಿರ್ವಹಿಸುವ ಶ್ರಮ, ಅಂತೆಯೇ ವರ್ಣದ ಹಲವಾರು ವಿಭಾಗಗಳ ನಿಭಾಯಿಸುವ ದಕ್ಷತೆಗೆ ಕೊಡಬೇಕಾದ ಶ್ರಮದ ಸುಂಕ. ಆದರೆ ಮೇಧಾವಿನಿಯ ಉತ್ಸಾಹ ಉಲ್ಲಾಸಾಧಿಕ್ಯವೇ, ಉತ್ಕೃಷ್ಟ ಅಭಿನಯವೇ ಶ್ರಮವನ್ನು ಮೀರಿ ನಿಂತ ಪ್ರದರ್ಶನ ವಿಶೇಷ. ಚಾರುಕೇಶಿಯ ಶ್ರೀರಘುರಾಮರ ಗಾಯನವಂತೂ ಆರ್ದ್ರತೆಯಿಂದ ಕಣ್ಣನ್ನು ಒದ್ದೆಯಾಗಿಸಿತು.
ಭಾವಕ್ಕೆ ಜತಿಗೆ ಸಂಬಂಧವಿಲ್ಲದ ಕೃತಿಯೇಕೆ ಎಂಬ ಶತಾವಧಾನಿ ಗಣೇಶರ ಆಕ್ಷೇಪವನ್ನು ಪೂರಯಿಸಿದ ವರ್ಣದ ಬಗ್ಗೆ ಮಾತನಾಡಿದ ಪದ್ಮಾಸುಬ್ರಹ್ಮಣ್ಯಂ ಅವರ ಮಾತುಗಳು, ಅವರು ಹಂಚಿಕೊಂಡ ಲಾಲ್ಗುಡಿಯವರಿಗೆ ಕೊಟ್ಟ ಚಿನ್ನದ ಸರದ ಆಭರಣದ ಉಡುಗೊರೆ ಅತಿಶಯವಲ್ಲವೆನಿಸಿತು. ವಿಳಂಬ ವರ್ಣದ ಉತ್ತರಾರ್ಧದಲ್ಲಿ ಧೃತಗತಿಯ ಅವಶ್ಯಕತೆಯ ಬಗ್ಗೆ ಹಂಚಿಕೊಂಡದ್ದು ಮತ್ತು ಅದರ ಅವಶ್ಯಕತೆ ಆಪ್ಯಾಯಮಾನವಾಗಿತ್ತು. ಶತಾವಧಾನಿಗಳ ವರಖೇಡಿಯವರ ಸಜ್ಜನಿಕೆ ಸ್ನೇಹ, ಸಾತ್ತ್ವಿಕತೆಯನ್ನು ಹೊಗಳಿ, ವರ್ಣದಲ್ಲಿ ಸ್ಥಾಯಿಭಾವವನ್ನ ಎತ್ತಿಹಿಡಿದಿದ್ದನ್ನು ಸ್ವತಃ ಶತಾವಧಾನಿಗಳೇ ಎತ್ತಿಹಿಡಿದ ಮೇಲೆ ಅಭಿನಯದ ಉತ್ಕೃಷ್ಟತೆ ಶತಸ್ಸಿದ್ಧ. ನಾಗವಲ್ಲಿ ಮೇಡಂ ಅವರ ಕೃಷ್ಣಕರ್ಣಾಮೃತದ ರಾಗಮಾಲಿಕೆಯ ಆಶೀರ್ವಾದ. ಡಾ. ಸಂಧ್ಯಾ ಪುರೇಚಾ ಅವರ ಶಾಸ್ತ್ರ, ಪರಂಪರೆ, ಗುರು ಅನುಗ್ರಹವನ್ನು ಪಡೆದರೆ ಮಾತ್ರ ಮೇಧಾವಿನಿಗೆ ಈ ರೀತಿಯ ನೃತ್ಯಾಭಿನಯ ಸಾಧ್ಯವೆಂದದ್ದು ಆಪ್ಯಾಯಮಾನವಾಗಿತ್ತು. ರಮಾ ಭಾರದ್ವಾಜ್ ಅವರ ಷಡ್ರಸೋಪೇತವಾದ ಸಂತರ್ಪಣೆಗೆ ಉಪಮೆಯಾಗಿಸಿದ ರಂಗಪ್ರವೇಶವು ಭಾವಗಳನ್ನೊಳಗೊಂಡು ಮೆರೆಯಿತು, ಬಹದವಾಯಿತು. ಕೊಂಚ ಉಪ್ಪಿನ ರುಚಿಯಂತೆ ಇರಬೇಕಾದ ಹದದಿಂದ ಗಣೇಶ ಪಂಚರತ್ನ ಕೀರ್ತನೆಯಲ್ಲಿ ಹಾಸ್ಯದ ಹದವಾಯಿತು ಎಂಬ ಆಶೀರ್ವಾದ ಮೇಧಾವಿನಿಯ ಮೊದಲ ಗುರುಗಳ ಮತ್ತು ಶ್ರೀ ಸ್ವಾತಿಯವರ ಆಶೀರ್ವಾದ, ಶ್ರೀ ಮಲ್ಲೇಪುರಂ ವೆಂಕಟೇಶರ ಪುಟವಿಟ್ಟ ಬಂಗಾರದ ಹಾಗಿತ್ತು ಮೇಧಾವಿನಿಯ ಕಾರ್ಯಕ್ರಮ ಎಂಬುದು ಸತ್ಯವಾಗಿತ್ತು. ಶ್ರೀ ಶ್ರೀನಿವಾಸ್ ಲಕ್ಷ್ಮೀಯವರ, ನಿರುಪಮಾ ರಾಜೇಂದ್ರ ಅವರ ಮತ್ತು ವರಖೇಡಿಯವರ ಬಾಂಧವ್ಯ ಮನಮುಟ್ಟಿತು.
ಜಗದೋದ್ಧಾರನ ಕೃತಿಯಲ್ಲಿ ಯಶೋಧೆಯ ಕೈಗೆ ಸಿಲುಕದ ಕೃಷ್ಣ, ಯಶೋಧೆಯ ನಿತ್ಯಕಾರ್ಯಗಳಲ್ಲಿ ಮುದ್ದಾಗಿ ಅಡ್ಡಿಮಾಡುವ ಕೃಷ್ಣ, ಕಾಳಿಂಗ ಮರ್ಧನದ ಸಂದರ್ಭದಲ್ಲಿ ಯಶೋಧೆಯ ಆತಂಕ, ನಂತರ ಅವನ ಸಾಧನೆಗೆ ತಾಯಿಯ ಹೆಮ್ಮೆಯ ಭಾವ, ಕೊಳಲೂದುವ ಕೃಷ್ಣನಿಗೆ, ಊದು ಕೊಳವೆಕೊಟ್ಟು ಒಲೆ ಊದು ಎನ್ನುವ ಹಾಸ್ಯದ ಮಮತೆ. ಪದ್ಯಬರೆಯಲು ಹೋದ ಪುರಂದರದಾಸರೇ ಕೃಷ್ಣಮೂರ್ತಿಯಲ್ಲಿ ಮೈಮರೆತು ಎಚ್ಚೆತ್ತದ್ದಂತೂ ಅತಿ ಸುಂದರ ದೋಹದದ ಹೂಗಳ ತಿಲ್ಲಾನದ ವಂಸಂತಾಗಮನದಲ್ಲಿ ಗಣೇಶರ ಸಾಹಿತ್ಯ ವಸಂತದಲ್ಲಿ ಮೆರೆಯಿತು. ಮೇಧಾವಿನಿಯ ಎರಡನೇಯ ವಸ್ತ್ರಾಲಂಕಾರವೂ ವೈವಿಧ್ಯಮಯವಾಗಿ ಚೆನ್ನಾಗಿತ್ತು. ಪುಷ್ಪಗಳು ಅರಳುವ ದೋಹದದ ವಿವಿಧ ಪರಿಗಳನ್ನು ಕಾರ್ಯಕ್ರಮಾರಂಭದ ಪುಷ್ಪಾಂಜಲಿಯೇನೋ ಎಂಬಂತೆ ಅಷ್ಟೇ ಊರ್ಜೆ ಮುಖಭಾವ, ಸಂಚಾರಗಳಿಂದ ನಡೆಸಲಾಯಿತು. ಜಿಂಕೆಯ ಹಾಗೆ ನೆಗೆದು ಮಾಡುವ ಭಂಗಿಗಳಿರಬಹುದು ನಿರಾಯಾಸವಾಗಿ ಮತ್ತು ದೋಹದದ ಮಾರ್ದವವಿರಬಹುದು ಸುಂದರವಾಗಿ ಮೂಡಿತು.
ಶ್ರೀ ವರಖೇಡಿಯವರ ಮನೆಯ ಸಂಸ್ಕೃತ ಸಂಸ್ಕೃತಿಯ ಬೆಂಬಲ, ನಿರುಪಮಾ-ರಾಜೇಂದ್ರರ ತಪಸ್ಸಿನಲ್ಲಿ ಮೇಧಾವಿನಿಯ ಅಭಿನಯ ಮೆರೆಯಿತು.
ಮೇಧಾ-ಪೂರ್ಣರಿಗೆ ಹೃತ್ಪೂರ್ವಕ ಅಭಿನಂದನೆಗಳು.
- ಸೋಮಶೇಖರ ಶರ್ಮ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


