ವಾಸ್ತವ: ಅವರ್ಯಾರು ಅಕ್ಷರವನ್ನು ಮಾರಿಕೊಂಡು ಬದುಕಲಿಲ್ಲ...

Upayuktha
0

**********

ಪತ್ರಿಕೋದ್ಯಮದ ಸ್ಥಿತಿಗತಿ, ಪತ್ರಕರ್ತರು ವೃತ್ತಿ ಬಿಟ್ಟರಾ? ವಲಸೆ ಹೋದರಾ? ಎಂಬೆಲ್ಲ ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರವೆಂಬಂತೆ ಡಿಜಿಟಲ್‌ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಪತ್ರಕರ್ತ ರಾಜೀವ್ ಹೆಗಡೆ ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹಂಚಿಕೊಂಡ ಬರಹವಿದು. ಮಾಧ್ಯಮ ಕ್ಷೇತ್ರದಲ್ಲಿ ದುಡಿದವರು, ದುಡಿಯುತ್ತಿರುವವರು, ಮುಂದೆ ಆ ಕ್ಷೇತ್ರಕ್ಕೆ ಬರಲು ಉತ್ಸಾಹವುಳ್ಳವರು ಅಷ್ಟೇ ಅಲ್ಲ, ಸಾಮಾನ್ಯ ಓದುಗರಿಗೂ ಆಪ್ತವಾಗಬಲ್ಲ ಬರಹವಿದು.

ಉಪಯುಕ್ತ ನ್ಯೂಸ್‌ ಓದುಗರಿಗಾಗಿ ಇದನ್ನು ನಾವು ಪ್ರಕಟಿಸುತ್ತಿದ್ದೇವೆ.

- ಸಂಪಾದಕರು

********


ಸುಮಾರು 13 ವರ್ಷಗಳ ಹಿಂದಿನ ಮಾತು. ಟ್ರೇನಿ ರಿಪೋರ್ಟರ್‌ ಆಗಿ ಕೆಲಸಕ್ಕೆ ಸೇರಿದ ದಿನಗಳವು. ನನಗೆ ಅಂದು ಸಿಗುತ್ತಿದ್ದ ಸಂಬಳವು ಶೈಕ್ಷಣಿಕ ಸಾಲ, ಮನೆ ಬಾಡಿಗೆ, ಊಟಕ್ಕೆ ಸರಿ ಹೊಂದುತ್ತಿತ್ತು. ಕೆಲವೊಮ್ಮೆ ತಿಂಗಳಿನಲ್ಲಿ 31 ದಿನ ಬಂದಾಗ ಊಟ, ತಿಂಡಿಯು ಬಾಳೆ ಹಣ್ಣು, ಬನ್‌ನಲ್ಲಿ ಮುಗಿಯುತ್ತಿತ್ತು. ವರದಿಗಾರಿಕೆಗೆ ಹೋಗುವ ಅರ್ಧ ದೂರವನ್ನು ನಡೆದುಕೊಂಡು ಹೋದರೆ ಬಸ್‌ ಟಿಕೆಟ್‌ ಹಣ ಉಳಿಸಬಹುದೆಂಬ ಲೆಕ್ಕಾಚಾರವೂ ಇರುತ್ತಿತ್ತು. ಆದರೆ ಮಾಧ್ಯಮದ ಮೇಲಿನ ಪ್ರೀತಿ ಹಾಗೂ ಹೊಟ್ಟೆಪಾಡಿನ ಅನಿವಾರ್ಯತೆಯು ದಿನಗಳನ್ನು ದೂಡಿಸಿಕೊಂಡು ಹೋಗುತ್ತಿದ್ದವು. 


ಅದೃಷ್ಟವಶಾತ್‌ ನಾನು ಕೆಲಸ ಮಾಡಿದ ಸಂಸ್ಥೆಗಳು ಯಾವುದೇ ತಪ್ಪಿಲ್ಲದೇ ತಿಂಗಳ ಕೊನೆಯ ದಿನ ಸಂಬಳವನ್ನು ನೀಡುತ್ತಿದ್ದವು. ಆದರೆ ಕೆಲ ಸಂಸ್ಥೆಗಳಲ್ಲಿ ಒಂದು ವಾರ, ಒಂದು ತಿಂಗಳು, ಮೂರು ತಿಂಗಳವರೆಗೆ ಸಂಬಳ ನೀಡದಿರುವ ಉದಾಹರಣೆಗಳೂ ಇದ್ದವು. ಕುಟುಂಬ ಸದಸ್ಯರನ್ನು ಊರಿಗೆ ಕಳುಹಿಸಿ, ಪತ್ರಿಕಾಗೋಷ್ಠಿಯಲ್ಲಿ ಅರೆಬರೆ ಹೊಟ್ಟೆ ತುಂಬಿಸಿಕೊಂಡು ಕಣ್ಣೀರು ಹಾಕಿದವರಿದ್ದಾರೆ. ಆದರೆ ಅವರ್ಯಾರು ಅಕ್ಷರವನ್ನು ಮಾರಿಕೊಂಡು ಬದುಕಲಿಲ್ಲ. ನಂಬಿದವರು ಕೈಕೊಟ್ಟಾಗ ದಿನದೂಡಿದರಷ್ಟೆ.


ಇಂತಹ ನೈಜ ಕಥೆಗಳಿಗೆ ದಶಕದ ಇತಿಹಾಸವಿದೆ. ಈಗ ಡಿಜಿಟಲ್‌ ಯುಗಕ್ಕೆ ಮಾಧ್ಯಮ ತೆರೆದುಕೊಳ್ಳುತ್ತಿದೆ. ಆದರೆ ಕೆಲ ಹಳೆಯ ಮಾಧ್ಯಮಗಳು ಇನ್ನೂ ಬದಲಾಗಿಲ್ಲ ಒಂದು ದಶಕದ ಹಣದುಬ್ಬರವನ್ನು ಗಮನಿಸಿದಾಗ ನಾನು ಅಂದು ಪಡೆಯುತ್ತಿದ್ದ ಆರಂಭಿಕ ಸಂಬಳ ಹಾಗೂ ಇಂದು ಕೊಡುತ್ತಿರುವುದಕ್ಕೆ ಅಂತಹ ಯಾವುದೇ ವ್ಯತ್ಯಾಸವಿಲ್ಲ. ಪತ್ರಕರ್ತರ ನೋವಿನಲ್ಲಿ ಬದಲಾಗಿಲ್ಲ. ಪತ್ರಿಕಾ ಕಚೇರಿ ಕೊಡುವ ಸಂಬಳ ಮಾತ್ರ ನಂಬಿಕೊಂಡು ಬದುಕುವುದು ಸುಲಭವಿಲ್ಲ. ಅದಕ್ಕಾಗಿಯೇ ಮಧ್ಯರಾತ್ರಿವರೆಗೆ ಭಾಷಾಂತರ, ವೆಬ್‌ ಕಂಟೆಂಟ್‌ ಸೇರಿ ಇತರ ಹೊರಗುತ್ತಿಗೆ ಕೆಲಸಗಳನ್ನು ಅದೆಷ್ಟೋ ಪತ್ರಕರ್ತರು ಮಾಡುತ್ತಿದ್ದಾರೆ. ದಿನದ 15-16 ತಾಸುಗಳನ್ನು ಕಂಪ್ಯೂಟರ್‌ ಮುಂದೆ ಕಳೆಯುತ್ತಿದ್ದಾರೆ. ಯಾವುದೇ ಕ್ರಿಯೇಟಿವ್‌ ಕೆಲಸಕ್ಕೆ ಸಿಗುವ ಅರ್ಧದಷ್ಟು ಹಣವೂ ಪತ್ರಕರ್ತರಿಗೆ ಸಿಗುವುದಿಲ್ಲ.


ಪರಿಸ್ಥಿತಿ ಹೀಗಿರುವಾಗ ತಾನು ನಂಬಿರುವ ಕುಟುಂಬ ಸದಸ್ಯರಿಗೆ ಮೂರು ಹೊತ್ತು ಅನ್ನ ಹಾಕಲು, ಹಂತ ಹಂತವಾಗಿ ಸ್ವಂತ ಬೆವರಿನ ದುಡ್ಡಿನಲ್ಲೇ ಸ್ವಂತ ಮನೆ ಕಟ್ಟಲು, ಸ್ವಂತ ಕಾರು/ವಾಹನ ಇರಿಸಿಕೊಳ್ಳಲು ಸಾವಿರ, ಲಕ್ಷದ ಹೈಕ್‌ ನೋಡಿಕೊಂಡು ಜಂಪ್‌ ಮಾಡಲೇಬೇಕು. ಇಲ್ಲವಾದಲ್ಲಿ ಹತ್ತು ವರ್ಷ ಕಳೆದರೂ ಮುದ್ರಣ ಮಾಧ್ಯಮದಲ್ಲಿನ ಒಬ್ಬ ಸಾಮಾನ್ಯ ಪತ್ರಕರ್ತನ ಸಂಬಳ 50 ಸಾವಿರ ರೂಪಾಯಿ ದಾಟುವುದಿಲ್ಲ. ಇವೆಲ್ಲ ಅನಿಶ್ಚಿತತೆ ನಡುವೆ ಏನಾದರೂ ಅನಾರೋಗ್ಯ ಬಂದರೆ ಅವರ ಕತೆ ಮುಗಿಯಿತು. ಆಸ್ಪತ್ರೆಯಿಂದ ವ್ಯಕ್ತಿ ಹೊರಬಂದರೂ ಆರ್ಥಿಕವಾಗಿ ವರ್ಷಗಟ್ಟಲೇ ಪತ್ರಕರ್ತ ಐಸಿಯುನಲ್ಲೇ ಇರಬೇಕಾಗುತ್ತದೆ.


ಮಾಧ್ಯಮದಲ್ಲಿದ್ದವರು ಎಂದರೆ ಬಿಡಿಎಯಿಂದ ನಿವೇಶನ ಪಡೆಯುತ್ತಾರೆ, ರಾಜಕಾರಣಿಗಳು, ಉದ್ಯಮಿಗಳಿಂದ ಕಾರು ಪಡೆಯುತ್ತಾರೆ, ವಿದೇಶ ಪ್ರವಾಸಕ್ಕೆ ಭಕ್ಷೀಸು ಪಡೆಯುತ್ತಾರೆ ಎನ್ನುವ ಕೆಲ ಸಾರ್ವಕಾಲಿಕ ಭ್ರಮೆಯಿದೆ. ಆದರೆ ಬಹುತೇಕ ಪ್ರಾಮಾಣಿಕ, ನಿಷ್ಠುರ ಪತ್ರಕರ್ತರು ಇಂತಹ ಹೇಸಿಗೆಗಳತ್ತ ತಲೆ ಹಾಕಿ ಕೂಡ ನೋಡುವುದಿಲ್ಲ. ಕಷ್ಟದ ಸಂದರ್ಭದಲ್ಲಿ ಸ್ನೇಹಿತರತ್ತ ಕೈಸಾಲ, ಚೀಟಿ ಮಾಡಿಕೊಂಡು ದಿನ ಕಳೆಯುತ್ತಿದ್ದಾರೆ. ಸುಮ್ಮನೇ ಯಾರ್ಯಾರದ್ದೋ ರಂಗುರಂಗಿನ ಮಾತು ಕೇಳಿ ಮರುಳಾಗಬೇಡಿ.


ಮಾಧ್ಯಮ ಜಗತ್ತಿನಲ್ಲಿನ ನನ್ನ ಆರಂಭಿಕ ದಿನಗಳಲ್ಲಿ ಸಂಬಳ‌ ಕಡಿಮೆ ಇದ್ದರೂ ಕೆಲಸದ ಮೇಲಿನ ಪ್ರೀತಿ ಹಾಗೂ ಸಾರ್ವಜನಿಕ ನೆರವಿನ ಆತ್ಮ ತೃಪ್ತಿ ಇರುತ್ತಿತ್ತು. ಎಲ್ಲ ಕೊರತೆಯನ್ನು ಒಂದು ಉತ್ತಮ ತನಿಖಾ ವರದಿ ಹೋಗಿಸುತ್ತಿತ್ತು. ಒಂದಿಷ್ಟು ಜನರಿಗೆ ನೆರವಾಗುವ ಕೆಲಸ ಖುಷಿ ನೀಡುತ್ತಿತ್ತು. ಆದರೆ ಇಂದು ವ್ಯವಸ್ಥೆಯ ವಿರುದ್ಧ ಬರೆಯುವ ಸ್ವಾತಂತ್ರ್ಯವು ಎಲ್ಲ ಮಾಧ್ಯಮಗಳಲ್ಲಿ ದೊರೆಯುತ್ತಿಲ್ಲ. ಒಬ್ಬ ಸಚಿವ ಅಥವಾ ದೊಡ್ಡ ರಾಜಕೀಯ ಮುಖಂಡರ ಅಕ್ರಮಗಳನ್ನು ಬಯಲಿಗೆಳೆಯಲು ಅವಕಾಶ ನೀಡಲಾಗುತ್ತಿಲ್ಲ. ಒಂದೊಮ್ಮೆ ಬಯಲು ಮಾಡಿದರೆ ಅಂತಹ ವರದಿಗಾರರನ್ನು ರಕ್ಷಿಸುವ ಕೆಲಸವೂ ಆಗುತ್ತಿಲ್ಲ.


ಒಂದು ಕಾಲದಲ್ಲಿ ಮಾಧ್ಯಮ ವೃತ್ತಿ ಎನ್ನುವುದು ಸಾರ್ವಜನಿಕ ಸೇವೆಯ ಭಾಗವಾಗಿತ್ತು. ಆದರೆ ಈಗ ಅದು ಕೂಡ ಒಂದು ಉದ್ಯಮ ಹಾಗೂ ವೃತ್ತಿಯಾಗಿದೆ. ಸಾರ್ವಜನಿಕ ಸೇವೆ ಮರೆತಿರುವಾಗ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭೆಗೆ ತಕ್ಕಂತೆ ಹಣ ಕೊಡದಿದ್ದರೆ ಉತ್ತಮ ಸಂಬಳ ಕೊಡುವರತ್ತ ಮುಖ ಮಾಡುವುದು ಅನಿವಾರ್ಯ. ಹೊಟ್ಟೆ ತುಂಬಿದವರು, ಹತ್ತು ತಲೆಮಾರು ಕರಗಿಸಲಾಗದಷ್ಟು ಆಸ್ತಿ ಹೊಂದಿದವರು ನೈತಿಕತೆ ಬಗ್ಗೆ ಮಾತನಾಡುವ ʼಐಷಾರಾಮಿತನʼವನ್ನು ಹೊಂದಿರುತ್ತಾರೆ. ಆದರೆ ಕೇವಲ ಸಂಬಳ ನಂಬಿಕೊಂಡು ಬದುಕಿರುವರಿಗೆ ಸಣ್ಣ ಹೈಕ್‌ನಲ್ಲಿ ಕೂಡ ಕುಟುಂಬ ಸದಸ್ಯರ ಸಣ್ಣ ಬೇಡಿಕೆ, ಕನಸು ಇರುತ್ತದೆ.


ಇಡೀ ಜಗತ್ತಿಗೆ ನಾವು ಮಾಧ್ಯಮದವರು ಬುದ್ಧಿ ಹೇಳುತ್ತೇವೆ. ಅವ್ಯವಸ್ಥೆ, ಉದ್ಯೋಗ ಭದ್ರತೆ, ವಿಮೆ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಪುಟಗಟ್ಟಲೇ ಬರೆಯುತ್ತೇವೆ. ಆದರೆ ಇದನ್ನು ಬರೆಯುವಾಗ ಸಾಕಷ್ಟು ಪತ್ರಕರ್ತರು ಶಾಪ ಹಾಕಿರುತ್ತಾರೆ. ಏಕೆಂದರೆ ಸಾಕಷ್ಟು ಕಡೆ ಇವೆಲ್ಲ ಅವರಿಗೆ ಮರೀಚಿಕೆಯಷ್ಟೆ. ಹೀಗಾಗಿ ಕಳೆದ ಐದು ವರ್ಷಗಳಲ್ಲಿ ಮಾಧ್ಯಮಕ್ಕೆ ಪ್ರವೇಶ ನೀಡಿದವರು ಪದೇಪದೆ ಹೈಜಂಪ್‌ ಮಾಡುತ್ತಾರೆ. ಅವರ ಆರ್ಥಿಕ ಬದ್ಧತೆ ಹಾಗೂ ಮುಂದಿನ ಯೋಜನೆಗಳಿಗೆ ಇದು ಅನಿವಾರ್ಯ ಕೂಡ. ಇನ್ನೊಂದೆಡೆ ಕೆಲ ಉತ್ತಮ ಡಿಜಿಟಲ್‌ ಮಾಧ್ಯಮಗಳು ಇತರೆ ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಹೆಚ್ಚಿನ ಸಂಬಳ ನೀಡುತ್ತಿವೆ. 


ಹೀಗಾಗಿ ಪತ್ರಕರ್ತರು ಎಲ್ಲಿಯೂ ಹೋಗಿಲ್ಲ, ಕಾಣೆಯಾಗಿಲ್ಲ. ಉತ್ತಮ ಅವಕಾಶಗಳತ್ತ ಹೆಜ್ಜೆ ಹಾಕಿದ್ದಾರೆ. ಇಂದಿನ ಯುವಕರು ಹೆಚ್ಚು ರಿಸ್ಕ್‌ ತೆಗೆದುಕೊಂಡು ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ, ಉತ್ತಮ ಸಂಬಳ ನೀಡುವ ಅವಕಾಶಗಳತ್ತ ಕಣ್ಣಾಯಿಸುತ್ತಿದ್ದಾರೆ. ಸಂಬಳದಿಂದಲೇ ಗೌರವಯುತ ಜೀವನ ಸಾಗಿಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಗಿಂಬಳದತ್ತ ಕಣ್ಣು ಹಾಯಿಸದೇ ಉತ್ತಮ ಸಂಬಳದತ್ತ ಹೋಗುವುದು ನೈತಿಕತೆಯ ಪ್ರಾಮಾಣಿಕ ಮುಖವಾಗಿದೆ. ಇದು ಕೂಡ ಅನೈತಿಕ ಪಟ್ಟಿಗೆ ಸೇರಿದ್ದರೆ ನನಗೆ ಮಾಹಿತಿಯಿಲ್ಲ. ಮಾಹಿತಿ ಇದ್ದವರು ದಯವಿಟ್ಟು ನೀಡಿ.


- ರಾಜೀವ್‌ ಹೆಗಡೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top