ಈತ ಜಮ್ಮು ಕಾಶ್ಮೀರದ ಸರಕಾರಿ ನೌಕರ
ಶ್ರೀನಗರ: ಜಮ್ಮುವಿನ ನರ್ವಾಲ್ನಲ್ಲಿ ಜನವರಿ 21ರಂದು ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಸರ್ಕಾರಿ ಉದ್ಯೋಗಿಯಾಗಿರುವ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನನ್ನು ಗುರುವಾರ ಬಂಧಿಸಿದ್ದಾರೆ. ಈ ಮೂಲಕ ಕೃತ್ಯದ ತನಿಖೆಯಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದ್ದಾರೆ.
ಇದೇ ಮೊದಲ ಬಾರಿಗೆ "ಪರ್ಫ್ಯೂಮ್ IED" ಎಂದು ಕರೆಯಲಾಗುವ ಸ್ಫೋಟಕವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಜಮ್ಮುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಮ್ಮು ಪೊಲೀಸರ 11 ದಿನಗಳ ಕಠಿಣ ಪರಿಶ್ರಮದ ನಂತರ ಜಮ್ಮುವಿನ ರಿಯಾಸಿ ಜಿಲ್ಲೆಯ ನಿವಾಸಿ ಆರಿಫ್ ಅಹ್ಮದ್ ಎಂಬಾತನನ್ನು ಬಂಧಿಸುವ ಮೂಲಕ ದೊಡ್ಡ ಯಶಸ್ಸು ಸಾಧಿಸಲಾಗಿದೆ ಎಂದು ಹೇಳಿದರು.
ಆರಿಫ್ ಸರ್ಕಾರಿ ನೌಕರನಾಗಿದ್ದು, ಲಷ್ಕರ್-ಎ-ತೊಯ್ಬಾ ಸಂಘಟನೆಯ ಸಕ್ರಿಯ ಭಯೋತ್ಪಾದಕನಾಗಿದ್ದಾನೆ. ಅವರು ರಿಯಾಸಿ ನಿವಾಸಿ ಖಾಸಿಮ್ ಮತ್ತು ಆತನ ಸಂಬಂಧಿ ಕಮರ್ದಿನ್ ಎಂಬಾತನ ಆದೇಶದ ಮೇರೆಗೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಆ ಭಯೋತ್ಪಾದಕರಿಬ್ಬರೂ ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿಯಾಗಿದ್ದಾರೆ, ಅವರು ಎಲ್ಇಟಿ ಸದಸ್ಯರು ಎಂದು ಡಿಜಿಪಿ ತಿಳಿಸಿದರು.
ಜನವರಿ 21 ರಂದು ಜಮ್ಮುವಿನ ನರ್ವಾಲ್ನಲ್ಲಿ ನಡೆದ ಘಟನೆ ಮತ್ತು ಕತ್ರಾದ ಶಾಸ್ತ್ರಿ ನಗರದಲ್ಲಿ ಮೂರು ಐಇಡಿ ಸ್ಫೋಟದ ಘಟನೆಗಳಲ್ಲಿ ಆರಿಫ್ ಭಾಗಿಯಾಗಿದ್ದ.
ಸ್ಫೋಟಕ ವಸ್ತುಗಳು, ಅಂಟಿಕೊಳ್ಳುವ ಬಾಂಬ್ಗಳು ಮತ್ತು ಟೈಮರ್-ಅಳವಡಿಕೆಯ ಐಇಡಿಗಳನ್ನು ಹೊಂದಿರುವ ಐಇಡಿಗಳನ್ನು ನಾವು ಈವರೆಗೆ ನೋಡಿದ್ದೇವೆ; ಆದರೆ ಆರಿಫ್ನಿಂದ ಹೊಸ ರೀತಿಯ ಐಇಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಅದು ಸುಗಂಧ ದ್ರವ್ಯ ಐಇಡಿ ಎಂದು ಡಿಜಿಪಿ ಹೇಳಿದರು.
ಈ ಐಇಡಿ ಬಾಟಲ್ ರೂಪದಲ್ಲಿದ್ದು ಸುಗಂಧ ದ್ರವ್ಯದ ಬಾಟಲಿಯಂತೆ ತೋರುತ್ತದೆ. ಆದರೆ ಸ್ಫೋಟಕ ವಸ್ತುಗಳನ್ನು ಒಳಗೊಂಡಿದೆ ಎಂದು ಡಿಜಿಪಿ ಹೇಳಿದರು, ಐಇಡಿ ನಮಗೆ ಹೊಸದಾಗಿರುವುದರಿಂದ, ಅದು ಎಷ್ಟು ಹಾನಿಕಾರಕ ಮತ್ತು ಎಷ್ಟು ಶಕ್ತಿಯುತವಾಗಿದೆ ಎಂಬುದನ್ನು ತಜ್ಞರು ಪರೀಕ್ಷಿಸಿ ನೋಡುತ್ತಾರೆ ಎಂದು ತಿಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ