ಗಿಡ ನೆಟ್ಟು ವಿದ್ಯಾರ್ಥಿಗಳಿಗೆ ನಿರ್ವಹಣೆ ಹೊಣೆ
ಬೆಳ್ತಂಗಡಿ: ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಎರಡನೇ ವರ್ಷದ ನರೇಗಾ ದಿನಾಚರಣೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ವಠಾರದಲ್ಲಿ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಫೆ.2ರಂದು ನಡೆಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಮತ್ತು ನರೇಗಾ ಯೋಜನೆಯ ನೋಡಲ್ ಅಧಿಕಾರಿ ಕೆ.ಆನಂದ ಕುಮಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಸಂಘದ ಕಾರ್ಯವು ಎಲ್ಲರಿಗೂ ಮಾದರಿಯಾಗಿದ್ದು ಮುಂದಿನ ಬಾರಿಗೆ ಸಂಘದಿಂದ ಇದೇ ರೀತಿಯಲ್ಲಿ ಉತ್ತಮ ಸಮಾಜಮುಖಿ ಸೇವೆಗಳು ನಡೆಯಲಿ ಎಂದು ಆಶಿಸಿದರು.
ಜಿಲ್ಲಾ ಯೋಜನಾಧಿಕಾರಿ ಜಯರಾಮ್ ಮಾತನಾಡಿ, ಕೆಲಸದ ಒತ್ತಡದ ನಡುವೆಯೂ ಸಂಘದಿಂದ ನಡೆಯುತ್ತಿರುವ ಕಾರ್ಯ ಅಭಿವೃದ್ಧಿಗೆ ಮುನ್ನುಡಿ ಎಂದರು.
ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್ ಮಾತನಾಡಿ, ನರೇಗಾದಿಂದ ಗ್ರಾಮಗಳ ಅಭಿವೃದ್ಧಿಯಾದರೆ ನೇವಾಕ್ ಜಿಲ್ಲಾ ಸಂಘದಿಂದ ಗಿಡ ನೆಡುವ ಕಾರ್ಯಕ್ರಮದ ವಿಶೇಷವಾಗಿ ಗಿಡದ ಪೋಷಣೆ ಜವಾಬ್ದಾರಿ ವಿದ್ಯಾರ್ಥಿಗಳಿಗೆ ವಹಿಸಿರುವುದು ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಳಿಕ ಶಾಲಾ ಆವರಣದಲ್ಲಿ ಸುಮಾರು 100 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು. ಒಂದೊಂದು ಗಿಡದ ಆರೈಕೆಯ ನಿರ್ವಹಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ವಹಿಸಲಾಯಿತು. ಜಿಲ್ಲಾ ಸಂಘದ ವತಿಯಿಂದ ಶಾಲೆಗೆ ಸ್ಮರಣಿಕೆ ಹಾಗೂ ಕ್ಯಾಲೆಂಡರ್ ಅನ್ನು ವಿತರಿಸಲಾಯಿತು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕರುಣಾಕರ ಆಚಾರ್ಯ, ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಜೈನ್, ಕಲ್ಮಂಜ ಗ್ರಾಪಂ ಪಿಡಿಒ ಇಮ್ತಿಯಾಝ್, ಜಿಲ್ಲಾ ಸಂಘದ ಅಧ್ಯಕ್ಷ ಕಿಶನ್ ರಾವ್, ಜಿಲ್ಲಾ ಸಂಘದ ಉಪಾಧ್ಯಕ್ಷ ರೋಶನ್, ರಾಜ್ಯ ಸಂಘದ ಪ್ರತಿನಿಧಿ ನಿಶಾಂತ್, ಜಿಲ್ಲಾ ಸಂಘದ ಕಾರ್ಯದರ್ಶಿ ನಿತಿನ್, ಜಿಲ್ಲಾ ಸಂಘದ ಖಜಾಂಜಿ ವಿನೋದ್, ಸಂಘದ ಸದಸ್ಯರು, ಶಾಲಾ ಶಿಕ್ಷಕರು, ಮತ್ತಿತರರು ಉಪಸ್ಥಿತರಿದ್ದರು.
"ಸಂಘದಿಂದ ಕಳೆದ ವರ್ಷ ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆದಿದ್ದು, ಈ ಬಾರಿ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಮೂಲಕ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಲು ಸಹಕಾರಿಯಾಗಿದೆ. ಅಲ್ಲದೆ ವಿಶೇಷ ಚೇತನ ಮಕ್ಕಳೊಂದಿಗೆ ನರೇಗಾ ಕೂಟ ಆಚರಿಸಲಾಗಿದೆ. ಪ್ರತಿ ವರ್ಷವೂ ಸಂಘದಿಂದ ಇದೇ ರೀತಿ ಕಾರ್ಯಕ್ರಮಗಳು ನಡೆಯಲಿದೆ."
-ಕಿಶನ್ ರಾವ್, ನೇವಾಕ್ ಜಿಲ್ಲಾ ಸಂಘದ ಅಧ್ಯಕ್ಷ
ವಿಶೇಷಚೇತನ ಮಕ್ಕಳೊಂದಿಗೆ ನರೇಗಾ ಕೂಟ
ನರೇಗಾ ದಿನಾಚರಣೆ ಪ್ರಯುಕ್ತ ಉಜಿರೆ ಸಾನಿಧ್ಯ ವಿಶೇಷಚೇತನರ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಇಲ್ಲಿನ ಮಕ್ಕಳ ಮೂಲಕ ಕೇಕ್ ಕತ್ತರಿಸುವ ನರೇಗಾ ಕೂಟ ಆಚರಿಸಲಾಯಿತು. ಬಳಿಕ ಮಕ್ಕಳಿಗೆ ವಿವಿಧ ಮನೋರಂಜನಾ ಆಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪ ಆರ್.ಶೆಟ್ಟಿ, ತರಬೇತಿ ಸಂಸ್ಥೆ ಯ ಮೇಲ್ವಿಚಾರಕಿ ಮಲ್ಲಿಕಾ, ನೇವಾಕ್ ಸಂಘದ ಅಧ್ಯಕ್ಷ ಕಿಶನ್ ರಾವ್ ಇತರರು ಇದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ