ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎಂಬ ಮಾತು ಯಾವತ್ತಿಗೂ ಸತ್ಯ. ಹೀಗೆ ಗುರಿಯಿದ್ದವರಿಗೆ ಗುರುವಾಗಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ನಮ್ಮೂರು, ಅಂದರೆ ಸಾಲೆತ್ತೂರಿನಲ್ಲಿದ್ದಾರೆ. ತನ್ನ ಅದೆಷ್ಟೋ ವಿದ್ಯಾರ್ಥಿಗಳಿಗೆ ಸಾಧನೆಯ ಶಿಖರವನ್ನೇರಲು ಸಹಾಯ ಮಾಡುವ, ಶಿಕ್ಷಕನಾದರೂ ಎಲ್ಲರ ಉತ್ತಮ ಸ್ನೇಹಿತ ರಾಘವೇಂದ್ರ ಕುಂದಾಪುರ ಅವರಂತಹ ನಿಷ್ಕಲ್ಮಷ ಮನಸ್ಸಿನ ಗುರುವನ್ನು ನಾನು ಕಂಡಿಲ್ಲ.
ಕಳೆದ ವರ್ಷ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ರಾಘವೇಂದ್ರ ಅವರನ್ನು ನಾನು ಮೊದಲು ನೋಡಿದ್ದು ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸಾಲೆತ್ತೂರಿನಲ್ಲಿ 2008 ರಲ್ಲಿ, ನಾನು 2 ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ! ನಮಗೆ ಅವರ ಕ್ಲಾಸ್ ಇಲ್ಲ ದಿದ್ದರೂ ಅಣ್ಣನಂತೆ ಕಾಳಜಿ ವಹಿಸಿಕೊಳ್ತಾ ಇದ್ರು. ಒಮ್ಮೆ ನಾನು ಅಚಾನಕ್ ಅಗಿ ಬಿದ್ದು ಕೈ ಮುರಿತಕ್ಕೊಳಗಾದಾಗ ಬ್ಯಾಂಡೇಜ್ ಹಾಕಿದ್ದರು. ಈ ಸಮಯದಲ್ಲಿ ಬ್ಯಾಂಡೇಜ್ ಮೇಲೆ ತಮ್ಮ ಸಹಿ ಹಾಕುತ್ತಿದ್ದರು. ಇದೇನಪ್ಪ ಹೀಗೆ ಅಂತ ಕಾರಣ ಕೇಳಿದರೆ ಸೂಗಸಾಗಿ ವಿವರಿಸಿದ್ರು... ಅವರ ಊರು ಕಡೆ ಮುರಿದ ಕೈಮೇಲೆ ಸಹಿ ಹಾಕುವುದು ಅಥವಾ ಚಿತ್ರಗಳನ್ನು ಬಿಡಿಸಿದರೆ ಕೈ ಬೇಗ ಮೊದಲಿನ ಹಾಗೆ ಆಗುತ್ತದೆ ಎಂಬ ನಂಬಿಕೆ ಯಂತೆ. ಹೀಗೆ ನೋವನ್ನು ಮರೆಸಿ ಮುಖದಲ್ಲಿ ನಗು ಮೂಡಿಸ್ತಾ ಇದ್ದವರು.
ವಿದ್ಯಾರ್ಥಿಗಳ ಗುರುವಾಗಿ.. ಪ್ರೋತ್ಸಾಹದಲ್ಲಿ ತಂದೆಯಾಗಿ.. ಕಾಳಜಿಯಲ್ಲಿ ತಾಯಿಯಾಗಿ.. ಜೀವನದ ಮೌಲ್ಯ ತಿಳಿ ಹೇಳಿದವರೇ ರಾಘವೇಂದ್ರ ಕುಂದಾ ಪುರ. ಇವರು ಬರೋಬ್ಬರಿ 15 ವರ್ಷಗಳಿಂದ ನಮ್ಮ ಊರಿನ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಾ ಇದ್ದಾರೆ. ಮೂಲತಃ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಕಂಡ್ಲೂರುನ ಗೋಪಾಲ್- ರುಕ್ಮಿಣಿ ದಂಪತಿಯ ಮಗನಾದ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ನೇತಾಜಿ ಹಿರಿಯ ಪ್ರಾಥಮಿಕ ಶಾಲೆ ಕಂಡ್ಲೂರು ಹಾಗೂ ಪೌಢ ಶಾಲಾ ಶಿಕ್ಷಣವನ್ನು ರಾಮ್ಸನ್ ಸರಕಾರಿ ಪೌಢ ಶಾಲೆ ಕಂಡ್ಲುರೂರಿನಲ್ಲಿ, ಪದವಿಪೂರ್ವ ಪದವಿ ಶಿಕ್ಷಣವನ್ನು ಶಾರದಾ ಕಾಲೆಜು ಬಸ್ರೂರುನಲ್ಲಿ ಪಡೆದಿದ್ದಾರೆ. ಮುಂದೆ ಬಿಪಿಎಡ್ ಪದವಿಯನ್ನು ಆಳ್ವಾಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮೂಡಬಿದ್ರೆ ಮತ್ತು ಎಂ ಎಡ್ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿದ್ದಾರೆ.
ಇವರ ಸಾಧನೆಗಳ ಪಟ್ಟಿ ಬಹು ದೊಡ್ಡದು. ವಿದ್ಯಾರ್ಥಿ ದಿಸೆಯಿಂದಲೇ ರಾಜ್ಯ ಮಟ್ಟದ ವಾಲಿಬಾಲ್, ಅಂತರ್ ಕಾಲೇಜು ಮಟ್ಟದ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಡನ್ ಸಾಪ್ಟ್ ಬಾಲ್, ಕೆಟಲ್ ಬೆಲ್ ಲಿಫ್ಟಿಂಗ್ ಮತ್ತು ಹ್ಯಾಂಡ್ ಬಾಲ್ ಸ್ಪರ್ದೆಗಳಲ್ಲಿ ಭಾಗವಹಿಸಿ ದ್ದಾರೆ. ಎನ್ಸಿಸಿ ಯಲ್ಲಿ ಸಕ್ರಿಯರಾಗಿದ್ದು, ಹಲವಾರು ರಾಷ್ಟ್ರಮಟ್ಟದ ಶಿಬಿರಗಳಲ್ಲಿ ಭಾಗಿಯಾಗಿದ್ದಾರೆ. ಅಖಿಲ ಭಾರತೀಯ ಅಂತರ್ ವಿಶ್ವವಿದ್ಯಾನಿಲಯದ ಕ್ರೀಡಾ ಕೂಟದಲ್ಲಿ ನಾಲ್ಕು ಬಾರಿ ಕ್ರೀಡಾಧಿಕಾರಿ ಯಾಗಿ, ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾ ನಿಲಯದ ಬಾಲ್ ಬ್ಯಾಡ್ಮಿಂಟನ್, ಖೋ ಖೋ ಮತ್ತು ವಾಲಿಬಾಲ್ ಪಂದ್ಯಾಟಗಳಲ್ಲಿ ಕ್ರೀಡಾ ಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಸಿಕ್ ನಲ್ಲಿ ನಡೆದ ರಾಷ್ಟçಮಟ್ಟದ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿರುತ್ತಾರೆ.
ಇನ್ನು ಕರಾಟೆ,, ಸೇವಾದಳ, ಯೋಗ ತರಬೇತಿಗಳನ್ನು ಪಡೆದುಕೊಂಡು ಶಾಲೆಯಲ್ಲಿ ಪರಿಣಾಮಕಾರಿಯಾಗಿ ತರಗತಿಗಳನ್ನು ನಡೆಸಿಕೊಂಡು ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಿಕ್ಸ್ ‘ಎ’ ಸೈಡ್ ಕ್ರಿಕೆಟ್ ಅಸೋಸಿಯೇಶನ್(ರಿ), ಭಾರತೀಯ ಟಾರ್ಗೆಟ್ ಬಾಲ್ ಅಸೋಸಿ ಯೇಶನ್, ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ಗಳ ಪದಾಧಿಕಾರಿಯಾಗಿ, ಕನ್ನಿಕಾ ಫ್ರೆಂಡ್ಸ್ ಎಂಬ ಸಂಘಟನೆಯ ಮೂಲಕ ಸಾಮಾಜಿಕ ಗಣೇಶೋತ್ಸವ ಸಮಿತಿಗಳ ಕ್ರೀಡಾ ಕಾರ್ಯದರ್ಶಿಯಾಗಿಯೂ ಪ್ರಸ್ತುತ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಇನ್ನು ಶಾಲೆಯಲ್ಲಿ ಕ್ರೀಡಾಂಗಣದ ಕೊರತೆಯಿಂದಾಗಿ ಒಳಾಂಗಣ ಕ್ರೀಡೆಯ ಬಗ್ಗೆ ಹೆಚ್ಚು ಗಮನ ಹರಿಸಿದ್ದು ಇರುವ ಅವಕಾಶಗಳನ್ನು ಬಳಸಿಕೊಂಡು ಶಾಲೆಯ ವಿದ್ಯಾರ್ಥಿಗಳಿಗೆ ಅನೇಕ ಕ್ರೀಡೆಗಳಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಇನ್ನು ಜಗತ್ತಿನಾದ್ಯಂತ ಎಲ್ಲರನ್ನ ಕಾಡಿದ ಕೋರೊನಾ ಸಂದರ್ಭದಲ್ಲಿ ಜನತೆಯ ಜೊತೆಯಾಗಿ ನಿಂತು ಧೈರ್ಯ ತುಂಬಿದ್ದು, ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯನಾಗಿ ಹಾಗೂ ರಾಜ್ಯದ ಗಡಿ ಪ್ರದೇಶದಲ್ಲಿ ಕೋವಿಡ್ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಇಷ್ಟೆಲ್ಲಾ ಸಾಧನೆ ಮಾಡಿದ ಇವರು 2022ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಸದಾ ವಿದ್ಯಾರ್ಥಿಗಳ ಬೆನ್ನುಲುಬಾಗಿ ನಿಂತು ಹುರಿದುಂಬಿಸುವ ರಾಘವೇಂದ್ರ ಕುಂದಾಪುರ ಸರ್ ಇಂದಿಗೂ ಅದೆಷ್ಟೋ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರು. ಇವರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳ ಕಥೆ ಒಂದು ಕಡೆಯಾದ್ರೆ, ದೂರದಿಂದ ನಿಂತು ಇವರ ಗುಣಮೆಚ್ಚಿ ಇವರೊಂದಿಗೆ ಬೆರೆತು ಸ್ನೇಹ ಸಂಪಾದಿಸಿದ ನೂರಾರು ವಿದ್ಯಾರ್ಥಿಗಳು ಇಂದಿಗೂ ಇವರನ್ನ ಅಪರಂಚಿಯಂತೆ ಕಾಣುತ್ತಿದ್ದಾರೆ. ಹೆಗಲಿಗೆ ಕೈ ಇಟ್ಟು ಮಾತನಾಡೋ ಮಟ್ಟಿಗಿನ ಸಲುಗೆಯ, ಅಪರೂಪದ ಸ್ನೇಹ ಇವರದ್ದು. ಕಿಂಚಿತ್ತೂ ಸ್ವಾರ್ಥವಿಲ್ಲದೆ ಎಲ್ಲರ ಮೊಗದಲ್ಲಿ ನಗು ಮೂಡಿಸಿ, ನೆಮ್ಮದಿ ಬಯಸುವ ರಾಘವೇಂದ್ರ ಕುಂದಾಪುರ ಸರ್ ಗೆ ದೇವರ ಆಶೀರ್ವಾದ ಸದಾ ಇರಲಿ, ನಿಮ್ಮ ಜೀವನ ಹಸನಾಗಿರಲಿ ಅನ್ನೋದೇ ನಿಮ್ಮ ವಿದ್ಯಾರ್ಥಿಗಳ ಆಶಯ..
- ಅಖಿಲಾ ರಾಜೇಶ್, ಸಾಲೆತ್ತೂರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ