ಹೊಳೆನರಸೀಪುರ: ಸಾಹಿತ್ಯ ಸಾಕ್ಷರತೆಗಾಗಿ ನಾವು ನೀವು ಎಂಬ ಆಶಯದೊಂದಿಗೆ, ಪ್ರಾರಂಭವಾಗಿರುವ ಹೊಳೆನರಸೀಪುರ ತಾಲ್ಲೂಕು ಬರಹಗಾರರ ಸಂಘದ ಕಾರ್ಯಕ್ರಮಗಳು ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಮೂಲಕ ನಾಡುನುಡಿಯ ಸೇವೆಯನ್ನು ಅವಿರತವಾಗಿ ಮಾಡಲಿ ಎಂದು ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಘವೇಂದ್ರಾಚಾರ್ ತಿಳಿಸಿದರು.
ಅವರು ಇಂದು ಸರ್ಕಾರಿ ಕಾನೂನು ಕಾಲೇಜಿನಲ್ಲಿ, ಕರ್ನಾಟಕ ರಾಜ್ಯದ ಬರಹಗಾರರ ಸಂಘ (ರಿ) ಇವರ ಹೊಳೆನರಸೀಪುರ ತಾಲ್ಲೂಕು ಬರಹಗಾರ ಸಂಘದ ಉದ್ಘಾಟನೆ ಮತ್ತು ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವೇದಿಕೆಯ ಗಣ್ಯರೊಂದಿಗೆ, ಗಿಡಕ್ಕೆ ನೀರೆರೆಯುವುದರ ಮೂಲಕ ಚಾಲನೆಯನ್ನು ನೀಡಿ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಜಿಡ್ಡು ಕೃಷ್ಣಮೂರ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಂತಹ ಶ್ರೇಷ್ಠ ದಾರ್ಶನಿಕರ ಕುರಿತು ಅಧ್ಯಯನವನ್ನು ಮಾಡುವ ಮೂಲಕ ಅವರ ಉನ್ನತ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಅತ್ಯುತ್ತಮ ಬರಹಗಾರರಾಗುವ ಮೊದಲು ಉತ್ತಮ ಓದುಗರಾಗಬೇಕು, ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಕಾಳಜಿಯನ್ನು ಹೊಂದಿವುವ ಮೂಲಕ ನಮ್ಮೊಳಗಿನ ಸೃಜನಶೀಲತೆಗೆ ಅಕ್ಷರ ರೂಪವನ್ನು ಕೊಡುವ ಮೂಲಕ ಕನ್ನಡ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭಕ್ಕೆ ಆಗಮಿಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಾಸನ ಜಿಲ್ಲಾ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರಾದ ಗೊರೂರು ಅನಂತರಾಜು ಅವರು,ಸ್ಥಳೀಯ ಮಟ್ಟದಲ್ಲಿ ಬರಹಗಾರರನ್ನು ಗುರುತಿಸಿ ವೇದಿಕೆಯನ್ನು ಕಲ್ಪಿಸಲು ಬರಹಗಾರ ಸಂಘವನ್ನು ಸ್ಥಾಪಿಸಲಾಗಿದ್ದು, ಕಾನೂನನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಮ್ಮ ಇತಿಹಾಸ,ಪರಂಪರೆ ಮತ್ತು ಸಂಸ್ಕೃತಿ,ಸಾಹಿತ್ಯದ ವಿಷಯಗಳ ಬಗ್ಗೆ ಸಹ ಅರಿವನ್ನು ಹೊಂದುವುದು ಅವಶ್ಯಕವಾಗಿದೆ,
ತಾಲ್ಲೂಕು ಸಂಘವು ಹಿರಿಯ ಸಾಹಿತಿ ಗುಂಜೇವು ಅಣ್ಣಾಜಪ್ಪ ಅವರ ಅಧ್ಯಕ್ಷತೆಯಲ್ಲಿ ಸಕ್ರಿಯವಾಗಿ ಕೆಲಸವನ್ನು ನಿರ್ವಹಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಾಡ ಶ್ರೀ ಬಾ.ನಂ. ಲೋಕೇಶ್ ಅವರು ಎಲೆಮರೆ ಕಾಯಂತೆ ಇರುವ ಯುವ ಬರಹಗಾರರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಸಂಘ ಸಂಸ್ಥೆಗಳು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದು ಅತ್ಯಂತ ಪ್ರಶಂಸನೀಯ ಮತ್ತು ಶ್ಲಾಘನೀಯ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಚನ್ನರಾಯಪಟ್ಟಣದ ತಾಲೂಕು ಬರಹಗಾರ ಸಂಘದ ಅಧ್ಯಕ್ಷರಾದ ಡಾ.ಬಾ.ರಾ.ಳು. ಶಿವರಾಮ್ ಅವರು ನೂತನ ತಾಲೂಕು ಬರಹಗಾರರ ಸಂಘದ ಅಧ್ಯಕ್ಷರಾದ ಅಣ್ಣಾಜಪ್ಪ ಗುಂಜೇವು ವಿರಚಿತ ಹೊಳೆನರಸೀಪುರ ತಾಲ್ಲೂಕು ಇತಿಹಾಸ ಮತ್ತು ಜನಾಂಗೀಯ ಅಧ್ಯಯನ ಕೃತಿಯನ್ನು ಪರಿಚಯ ಮಾಡಿಕೊಟ್ಟರು.
ತಾಲ್ಲೂಕು ಬರಹಗಾರರ ಸಂಘದ ನೂತನ ಅಧ್ಯಕ್ಷ ಗುಂಜೇವು ಅಣ್ಣಾಜಪ್ಪಾ ಮಾತನಾಡಿ ಕನ್ನಡಮ್ಮನ ಸೇವೆ ಮಾಡಲು ಬರಹಗಾರರ ವೇದಿಕೆಯು ಎಲ್ಲಾ ವರ್ಗದ ವಯೋಮಾನದ ಬರಹಗಾರರಿಗೆ ಸುವರ್ಣಾವಕಾಶವನ್ನು ಒದಗಿಸುವ ಮೂಲಕ ಅವರಿಗೆ ಸೂಕ್ತವಾದ ವೇದಿಕೆಯನ್ನು, ಬೆಂಬಲವನ್ನು ಮತ್ತು ಅವರ ಪ್ರತಿಭೆಗೆ ಪ್ರೋತ್ಸಾಹವನ್ನು ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ನೂತನ ತಾಲ್ಲೂಕು ಬರಹಗಾರ ಸಂಘದ ಗೌರವಾಧ್ಯಕ್ಷರಾಗಿ ಸಾಮಾಜಿಕ ಸಂತ ಎಂದೇ ಪ್ರಖ್ಯಾತರಾದ ಬಾ.ರಾ.ಸುಬ್ಬರಾಯ, ಕಾರ್ಯದರ್ಶಿಯಾಗಿ ಸ.ಪ್ರ.ದ.ಕಾಲೇಜಿನ ಉಪನ್ಯಾಸಕ ಜಯಣ್ಣ ನಿಡಘಟ್ಟ, ಸಹ ಕಾರ್ಯದರ್ಶಿಯಾಗಿ ಎಸ್.ವಿಶ್ವನಾಥ್ [ವಿಶ್ವಕವಿ], ನಿರ್ದೇಶಕರಾಗಿ ಸಾಹಿತಿ ಶ್ರೀಮತಿ ರೂಪಾ ಮಂಜುನಾಥ್ ಮತ್ತು ಇನ್ನಿತರರು ಆಯ್ಕೆಯಾದರು.
ಸಮಾರಂಭದಲ್ಲಿ ಅರಕಲಗೂಡು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಂದ್ರೇಶ್ ಉಪಸ್ಥಿತರಿದ್ದರು. ಕಾನೂನು ಕಾಲೇಜಿನ ಉಪನ್ಯಾಸಕ ಮಂಜುನಾಥ್, ಉಪನ್ಯಸಕಿ ಶ್ರೀ ಲಕ್ಷ್ಮೀ, ಸಮಾಜ ಸೇವಕ ಮುರಳೀಧರ ಗುಪ್ತ, ಅಶೋಕ್, ಪತ್ರಕರ್ತ ಸ್ಪಿನ್ ಕೃಷ್ಣ, ಇನ್ನಿತರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೊದಲಿಗೆ ಉಪನ್ಯಾಸಕರಾದ ಶ್ರೀ ವತ್ಸ ಅವರು ಪ್ರಾರ್ಥನೆ ನಡೆಸಿಕೊಟ್ಟರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಜಯಣ್ಣ ನಿಡಘಟ್ಟ ನಿರೂಪಿಸಿದರು, ವಿದ್ಯಾರ್ಥಿ ವಿನೋದ್ ಸ್ವಾಗತಿಸಿದರು. ವಿಶ್ವನಾಥ್ ವಂದಿಸಿದರು.
ಸಮಾರಂಭದಲ್ಲಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ವಿಶ್ವಕವಿ ಹೊಳೆನರಸೀಪುರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ