ಮಂಗಳೂರು: 'ಆಧುನಿಕ ವಿದ್ಯಾಭ್ಯಾಸ ಕೇವಲ ಓದು ಬರಹ ಲೆಕ್ಕಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂದಿನ ಸಾಮಾಜಿಕ ಸ್ಥಿಂತ್ಯಂತರಗಳ ನಡುವೆ ವಿಶಾಲ ಮನೋಭಾವವುಳ್ಳ ವ್ಯಕ್ತಿಗಳನ್ನು ರೂಪಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ಅದಕ್ಕಾಗಿ ಜೀವನ ಕೌಶಲ್ಯಗಳೊಂದಿಗೆ ಸಾಮರಸ್ಯದ ಬದುಕಿಗೆ ಪೂರಕವಾದ ಪಾಠ ಪ್ರವಚನಗಳು ಶಾಲೆಯಿಂದಲೇ ಆರಂಭವಾಗಬೇಕಿದೆ' ಎಂದು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಅಸೈಗೋಳಿ ಬಳಿಯ ನಾಟೆಕಲ್ ನಿಸರ್ಗ ಪೂರ್ವ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಆಹಾರ ಜಾಗೃತಿ ಮಂಡಳಿಯ ಮಾಜಿ ಸದಸ್ಯ ಹಾಜಿ ಟಿ.ಎಸ್. ಅಬ್ದುಲ್ಲ ಸಾಮಣಿಗೆ ಅವರು 'ಹೆತ್ತವರು ಮತ್ತು ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಮನೆಯಿಂದಲೇ ತೊಡಗಬೇಕು. ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವದೊಂದಿಗೆ ಆಚಾರ ವಿಚಾರಗಳಿಗೆ ಆದ್ಯತೆ ನೀಡುವ ಗುಣವನ್ನು ತುಂಬಬೇಕಾದ ಅಗತ್ಯವಿದೆ' ಎಂದರು. ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿಶ್ವನಾಥ ಕೆ., ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ಬಾಸ್ ಮಡಪಾಡಿ, ಕೊಣಾಜೆ ಠಾಣಾಧಿಕಾರಿ ಶರಣಪ್ಪ, ಉದ್ಯಮಿ ಇಕ್ಬಾಲ್ ಹುಬ್ಬಳ್ಳಿ; ಸ್ಥಳೀಯರಾದ ಹುಸೈನ್ ಮತ್ತು ನೌಷದ್ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ಅನ್ಸಾರ್ ಕೆ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆಯಾದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ