ಪುತ್ತೂರು: ವಿಜ್ಞಾನ ನಿಂತ ನೀರು ಅಲ್ಲ, ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗುವ ಒಂದು ಕ್ಷೇತ್ರವೆಂದೇ ಹೇಳಬಹುದು. ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಹೊಸತನವನ್ನು ಕಂಡು ಹಿಡಿಯುವುದೇ ವಿಜ್ಞಾನಿಗಳಿಗೆ ಒಂದು ದೊಡ್ಡ ಸವಾಲಾಗಿರುತ್ತದೆ. ಹಾಗಾಗಿ ಈ ಕ್ಷೇತ್ರವು ಎಲ್ಲಾ ಕ್ಷೇತ್ರಗಳಿಗಿಂತ ತುಂಬಾ ವಿಭಿನ್ನವಾಗಿದೆ ಎಂದು ಪುತ್ತೂರು ವಿವೇಕಾನಂದ (ಸ್ವಾಯತ್ತ) ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಅಭಿಪ್ರಾಯಪಟ್ಟರು.
ಇವರು ಪುತ್ತೂರು ವಿವೇಕಾನಂದ (ಸ್ವಾಯತ್ತ) ಕಾಲೇಜಿನ ವಿಜ್ಞಾನ ವಿಭಾಗ ಹಾಗೂ ಐಕ್ಯುಎಸಿ ಘಟಕದ ಆಶ್ರಯದಲ್ಲಿ ತಾಲೂಕಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗಾಗಿ ನಡೆಸಿದ 'ಇನ್ ಡೆಪ್ತ್' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ ಎಸ್ ಎಲ್ ಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಈ ಕಾರ್ಯಕ್ರಮದಿಂದ ತಿಳಿದುಕೊಳ್ಳಬಹುದು. ನಿಮ್ಮ ಕಲಿಯುವಿಕೆಗೆ ಯಾವ ಕ್ಷೇತ್ರ ಉತ್ತಮ ಎಂದು ನೀವೇ ಆಯ್ಕೆ ಮಾಡಿಕೊಳ್ಳಿ. ಈ ಕಾರ್ಯಕ್ರಮದಿಂದ ಒಂದಿಷ್ಟು ಸಲಹೆ ಸೂಚನೆಗಳನ್ನು ನಿಮ್ಮಲ್ಲಿ ಅಳವಡಿಸಿಕೊಂಡು ಹಾಗೂ ವಿಜ್ಞಾನದ ಬಗೆಗಿನ ಹಲವಾರು ವಿಶ್ಲೇಷಣೆಗಳನ್ನು ಕಲಿಯುವ ಅವಕಾಶ ಇದಾಗಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
2022 ರ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಹರೀಶ್ ಶಾಸ್ತ್ರಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಮತ್ತು ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಶಿವಪ್ರಸಾದ್. ಕೆ. ಎಸ್ ಮಾತನಾಡಿ, ನೀವು ತರಗತಿಗಳಲ್ಲಿ ಕಲಿತಂತಹ ವಿಚಾರಗಳಿಗಿಂತ ಹೆಚ್ಚಿನ ವಿಷಯಗಳನ್ನು ಈ ಕಾರ್ಯಕ್ರಮದ ಮೂಲಕ ತಿಳಿದುಕೊಳ್ಳಬಹುದು. ಇದು ಮುಂದಿನ ಭವಿಷ್ಯಕ್ಕೆ ಬುನಾದಿ ಆಗಬೇಕು ಎಂದು ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ವಿಜ್ಞಾನ ವಿಭಾಗದ ಉಪನ್ಯಾಸಕರು ಹಾಗೂ ವಿವಿಧ ಶಾಲೆಯ ಉಪನ್ಯಾಸಕ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕಿ ಸೌಮ್ಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜ್ಞಾನ ಸಂಘದ ಸಂಯೋಜಕಿ ನಿಶಾ ವಂದಿಸಿ, ವಿದ್ಯಾರ್ಥಿ ಶರಧಿ ಎಸ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ