ಮಂಗಳೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇದರ 134 ನೇ ಉಪನ್ಯಾಸ ಮಾಲಿಕೆಯಾಗಿ ಲೂಯಿಸ್ ಪಾಶ್ಚರ್ ಅವರ 200 ನೇ ಜನ್ಮ ದಿನೋತ್ಸವದ ಪ್ರಯುಕ್ತ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಆಯೋಜಿಸಲಾಗಿತ್ತು.
ಸಂಪನ್ಮೂಲ
ವ್ಯಕ್ತಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯ್ಕ, ಜಗತ್ತು ಕಂಡ ಮಹಾನ್ ವಿಜ್ಞಾನಿ ಲೂಯಿಸ್ ಪಾಶ್ಚರ್, ಸೂಕ್ಷ್ಮಣುಜೀವಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ ವಿಜ್ಞಾನ, ಭೌತಶಾಸ್ತ್ರ, ಸ್ಫಟಿಕಶಾಸ್ತ್ರ ಹೀಗೆ ವಿವಿಧ ಕ್ಷೇತ್ರಗಳಿಗೆ
ಕೊಡುಗೆ ನೀಡಿದ್ದಾರೆ. ಅದರಲ್ಲಿಯೂ ರೇಬೀಸ್, ಆಂಥ್ರಾಕ್ಸ್ ಮತ್ತು
ಚಿಕನ್ ಕಾಲರಾ ಕಾಯಿಲೆಗಳಿಗೆ ಚುಚ್ಚುಮದ್ದು ಅಭಿವೃದ್ಧಿಪಡಿಸುವಲ್ಲಿ ಅವರು ನೀಡಿದ ಕೊಡುಗೆ
ಅತ್ಯಮೂಲ್ಯ. ಆದುದರಿಂದಲೇ ಅವರನ್ನು ಆಧುನಿಕ ರೋಗನಿರೋಧಕಶಾಸ್ತ್ರದ ಪಿತಾಮಹ ಎಂದೂ
ಗುರುತಿಸಲಾಗುತ್ತದೆ ಎಂದರು.
ರೇಬೀಸ್ ವಿರುದ್ಧದ
ಸಂಶೋಧನೆಯ ವೇಳೆ ಪ್ರಾಣವನ್ನೇ ಪಣಕ್ಕಿಟ್ಟು ಹುಚ್ಚುನಾಯಿಯ ಲಾವಾ ಸಂಗ್ರಹಿಸಿದ್ದರು. ಆಧುನಿಕ
ಉಪಕರಣಗಳು ಇಲ್ಲದಿದ್ದರೂ ಜಗತ್ತನ್ನೇ ಬೆರಗುಗೊಳಿಸುವಂತಹ ಸಂಶೋಧನೆಗಳನ್ನು ಮಾಡಿ ವಿಜ್ಞಾನದ
ಹಲವಾರು ಹೊಸ ಶಾಖೆಗಳಿಗೆ ನಾಂದಿ ಹಾಡಿದರು. ಒಂದಲ್ಲ, ಎರಡು ನೋಬೆಲ್ ಪಾರಿತೋಷಕ ಪಡೆಯುವ ಅವಕಾಶವಿದ್ದರೂ ನೋಬೆಲ್ ಪ್ರಾರಂಭವಾಗುವ ಮೊದಲೇ,
ಅಂದರೆ 28 ಸೆಪ್ಟೆಂಬರ್ 1895 ರಲ್ಲಿ ಪಾಶ್ಚರ್ ಇಹಲೋಕ ತ್ಯಜಿಸಿದ್ದರು. ದೇಹದ
ಒಂದು ಭಾಗಕ್ಕೆ ಪಾರ್ಶ್ವವಾಯು ಹೊಡೆದಿದ್ದರೂ ತಮ್ಮ ಕೊನೆಯ ಉಸಿರು ಇರುವವರೆಗೂ ಮನುಕುಲದ
ಕಲ್ಯಾಣಕ್ಕಾಗಿ ಅವರು ತಮ್ಮ ಸಂಶೋಧನೆಯನ್ನು ಮುಂದುವರೆಸಿದರು. ಅವರಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ
ಜನ ರೋಗಾಣುಗಳಿಗೆ ಬಲಿಯಾಗುವುದನ್ನು ತಡೆಯಲು ಸಾಧ್ಯವಾಗಿದೆ. ಸೂಕ್ಷ್ಮಜೀವಿಗಳ ಅಸ್ತಿತ್ವ ಕಂಡುಹಿಡಿಯುವ ಮೊದಲೇ ಆಹಾರ,
ವೈನ್, ಹಾಲು ಹಾಳಾಗುವಂತೆ ಮಾಡುವ, ರೋಗಗಳನ್ನು ಉಂಟುಮಾಡುವ ರೋಗಾಣುಗಳ ವಿರುದ್ಧ ಲಸಿಕೆಗಳ ಅಭಿವೃದ್ಧಿ ಸೇರಿದಂತೆ ವಿವಿಧ
ಸಂಶೋಧನೆಗಳಲ್ಲಿ ಅವರು ಪ್ರಗತಿ ಸಾಧಿಸಿದ್ದರು. ಶ್ರೇಷ್ಠ ವಿಜ್ಞಾನಿ ಮಾತ್ರವಲ್ಲ ಒಬ್ಬ ಉತ್ತಮ
ಚಿತ್ರ ಕಲಾವಿದ ಕೂಡ ಆಗಿದ್ದ ಅವರು ಬಿಡಿಸಿದ ವರ್ಣಚಿತ್ರಗಳು ಮತ್ತು ಭಾವಚಿತ್ರಗಳನ್ನು ಸಂರಕ್ಷಿಸಲಾಗಿದೆ
ಎಂದರು.
ಭಾರತದಲ್ಲಿಯೂ ತಮಿಳುನಾಡಿನ
ನೀಲ್ಗಿರಿಸ್ ಜಿಲ್ಲೆಯ ಕೂನೂರು ನಗರದಲ್ಲಿ 'ಪಾಶ್ಚರ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ' 1907 ರಿಂದ
ಕಾರ್ಯನಿರ್ವಹಿಸುತ್ತಿದೆ. 1995 ರಲ್ಲಿ ಭಾರತ ಸರ್ಕಾರವು ಅವರ ಮುಖಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿತು.
ಲೂಯಿಸ್ ಪಾಶ್ಚರ್ ಫ್ರಾನ್ಸ್ ದೇಶದವರಾದರೂ ಅವರು ವಿಜ್ಞಾನ ಕ್ಷೇತ್ರ ಮತ್ತು ಮನುಕುಲದ ಒಳಿತಿಗಾಗಿ
ನೀಡಿದ ಮಹೋನ್ನತ ಕೊಡುಗೆಗಾಗಿ ಇಡೀ ಜಗತ್ತು ಅವರನ್ನು ಸ್ಮರಿಸುತ್ತದೆ ಎಂದರು. ರಾಷ್ಟಕವಿ
ಕುವೆಂಪು ಅವರ ʼವಿಶ್ವಮಾನವನಾಗುʼ ಎಂಬ ಸಂದೇಶ ಇರುವ ಕವನಕ್ಕೆ ಲೂಯಿಸ್ ಪಾಶ್ಚರ್ ಒಬ್ಬ
ಉತ್ತಮ ಉದಾಹರಣೆಯಾಗಿದ್ದು ಅವರ ಸಾಧನೆ ಮತ್ತು ಕೊಡುಗೆಗಳ ಮೂಲಕ ವಿಶ್ವಮಾನವರಾಗಿ ಗುರುತಿಸಿಕೊಂಡರು
ಎಂದು ಅವರು ಅಭಿಪ್ರಾಯಪಟ್ಟರು.
ಕರಾವಿಪ ಕಾರ್ಯಕಾರಿ
ಸಮಿತಿ ಸದಸ್ಯ ಫ್ರಾನ್ಸಿಸ್ ಜಿ. ಬೆಂಜಮಿನ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಕರಾವಿಪ ಅಧ್ಯಕ್ಷ
ಗಿರೀಶ ಕಡ್ಲೇವಾಡ, ಗೌರವ
ಕಾರ್ಯದರ್ಶಿ ಕೃಷ್ಣೇಗೌಡ ಸಿ ಇತರ ಪದಾಧಿಕಾರಿಗಳು, ಸದಸ್ಯರು
ಉಪಸ್ಥಿತರಿದ್ದರು. ಆನ್ಲೈನ್ ಮೋಡ್ ನಲ್ಲಿ ಆಯೋಜಿಸಿದ ಈ ಉಪನ್ಯಾಸದಲ್ಲಿ ಕರ್ನಾಟಕದಾದ್ಯಂತ ಅನೇಕ
ವಿದ್ಯಾರ್ಥಿಗಳು ಭಾಗವಹಿಸಿದ್ದರು.