ನಿಟ್ಟೆ: 'ವಿಶ್ವದ ವಿವಿಧ ದೇಶಗಳು ಹಣದುಬ್ಬರ, ಯುದ್ದಗಳು, ದಿವಾಳಿತನ, ಆಂತರಿಕ ವೈಷಮ್ಯ, ಕೊರೋನಾದಂಥ ಕಷ್ಟಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವಿಚಾರಗಳನ್ನು ವಿಮರ್ಷಿಸುವ ಇಂಟರ್ ನ್ಯಾಷನಲ್ ಮೊನಿಟರಿ ಫಂಡ್ (ಐಎಂಎಫ್) ನ ಅಧ್ಯಯನದ ಪ್ರಕಾರ ಭಾರತ ದೇಶವು ಉತ್ತಮ ಭವಿಷ್ಯವನ್ನು ಹೊಂದಿರುವ ದೇಶವಾಗಿದೆ. ನಿರಂತರ ಕಲಿಕೆ ಹಾಗೂ ವಿವಿಧ ವಿಷಯಗಳ ಬಗೆಗೆ ಆಸಕ್ತಿ ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ' ಎಂದು ಫಿಡಿಲಿಟಿ ಇನ್ವೆಸ್ಟ್ಮೆಂಟ್ಸ್ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದ ವಾರ್ಷಿಕ ಎರಡು ದಿನಗಳ ಟೆಕ್ ಉತ್ಸವವಾದ 'ಸೆಮಫೋರ್ 2023'ನ್ನು ಜ.5 ರಂದು ಬೆಳಗ್ಗೆ 9:30ಕ್ಕೆ ಉದ್ಘಾಟಿಸಿ ಅವರು ಮಾತನಾಡಿದರು. 'ಯಾವುದೇ ವೃತ್ತಿಯಲ್ಲಿ ತಾವು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಪಾಲಿಸಬೇಕಾದ ಕೆಲವಾರು ನೀತಿಗಳ ಬಗೆಗೆ ಅರಿತಿರುವುದು ಅತಿಮುಖ್ಯ. ಆರೋಗ್ಯಸೇತುವಿನಂತಹ ಆಪ್ ಮೂಲಕ ಕೋವಿಡ್ ಲಸಿಕೆಯ ಮಾಹಿತಿ ಬಿತ್ತರಿಕೆ ವಿಶ್ವದಲ್ಲೇ ಮೊದಲಪ್ರಯತ್ನವಾಗಿದ್ದು ಇದರ ಯಶಸ್ಸು ಈ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ' ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ 'ನಿಟ್ಟೆ ಸಂಸ್ಥೆಯ ಎಂ.ಸಿ.ಎ ವಿಭಾಗವು ಕಳೆದ ಇಪ್ಪತ್ತು ವರ್ಷಗಳಿಂದ ನಡೆಸುತ್ತಾಬಂದಿರುವ ಈ ಉತ್ಸವವು ಉತ್ತಮವಾಗಿ ಬೆಳೆಯುತ್ತಿದ್ದು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ. ವಿವಿಧ ಮೌಲ್ಯಾಧಾರಿತ, ಹಣಕಾಸಿನ ವಿನಿಯೋಗದ ಜ್ಞಾನವನ್ನು ಹಾಗೂ ತಂತ್ರಾಂಶಗಳ ಬಗೆಗಿನ ಜ್ಞಾನವೃದ್ಧಿಯ ನಿಟ್ಟಿನಲ್ಲಿ ಹಲವಾರು ಸರ್ಟಿಫಿಕೇಟ್ ಕೋರ್ಸ್ ಗಳನ್ನು ಆರಂಭಿಸುವ ಯೋಜನೆ ಸಂಸ್ಥೆಗಿದೆ. ಇನ್ನು ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳು ವಿಫುಲವಾದಂತೆ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ತಯಾರಾಗಿರಬೇಕು' ಎಂದು ಹೇಳಿದರು.
ಸೆಮಫೋರ್ -23 ಟೆಕ್ ಫೆಸ್ಟ್ ಕಾರ್ಯಕ್ರಮದಡಿಯಲ್ಲಿ ನಡೆಸಲಾಗುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ದಕ್ಷಿಣ ಭಾರತದ ಹಲವು ರಾಜ್ಯಗಳ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.
ಕಾಲೇಜಿನ ಎಂ.ಸಿ.ಎ ವಿಭಾಗದ ಮುಖ್ಯಸ್ಥ ಡಾ| ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಸೆಮಫೋರ್ ಸ್ಟಾಫ್ ಕಾರ್ಡಿನೇಟರ್ ಡಾ.ಸ್ಪೂರ್ತಿ ಬಿ ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ಸ್ಯಾಮ್ಕಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋಯೆಲ್ ಜೋಸೆಫ್ ಕಾರ್ಯಕ್ರಮದ ಬಗೆಗೆ ಪ್ರಾಸ್ತಾವಿಸಿದರು. ಸೆಮಫೋರ್ ವಿದ್ಯಾರ್ಥಿ ನಾಯಕ ಸೌರವ್ ಪೂಜಾರಿ ಪ್ರಾಂಶುಪಾಲರನ್ನು ಸಭೆಗೆ ಪರಿಚಯಿಸಿದರು. ಸ್ಯಾಮ್ಕಾ ಕಾರ್ಯದರ್ಶಿ ಶ್ರಾವ್ಯಾ ಎ ಆಚಾರ್ಯ ವಂದಿಸಿದರು. ವಿದ್ಯಾರ್ಥಿನಿ ಮಾನಸ ಮತ್ತು ತಂಡ ಪ್ರಾರ್ಥಿಸಿದರು. ವಿದ್ಯಾರ್ಥಿನಿ ರಶ್ಮೀ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ