ವಿವಿ ಕಾಲೇಜು ಮಂಗಳೂರು: ಯುವ ರೆಡ್‌ ಕ್ರಾಸ್‌ ನಿಂದ ಮಾದಕ ವಸ್ತು ಜಾಗೃತಿ ಕಾರ್ಯಕ್ರಮ

Upayuktha
0

ಮಂಗಳೂರು: ನಗರದ ವಿಶ್ವವಿದ್ಯಾನಿಲಯದ ಕಾಲೇಜಿನ ಯುವ ರೆಡ್‌ ಕ್ರಾಸ್‌ ಘಟಕದ ವತಿಯಿಂದ ಮಾದಕ ದ್ರವ್ಯಗಳ ಅಪಾಯದ ಬಗ್ಗೆ ಓರಿಯಂಟೇಶನ್‌ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಆಯೋಜಿಸಲಾಗಿತ್ತು.


ಕಾರ್ಯಕ್ರಮದ ಮುಖ್ಯ ಅತಿಥಿ, ಸಮಾಜ ಸೇವಕ ಗಣೇಶ್‌ ನಾಯಕ್‌ ಮೂಲ್ಕಿ ಮಾತನಾಡಿ, ಮಾದಕ ದ್ರವ್ಯ ನೇರವಾಗಿ ಸೇರಿಸಿದರೆ ಮಾತ್ರ ಆರೋಗ್ಯಕ್ಕೆ ಹಾನಿಯೆಂದೇನಿಲ್ಲ. ಆಧುನಿಕ ಆಹಾರ ಪದ್ಧತಿಯಲ್ಲಿ ಸೇರಿಸುವ ಕೆಲವೊಂದು ರಾಸಾಯನಿಕಗಳೂ ಮಾದಕ ದ್ರವ್ಯಗಳೇ ಆಗಿವೆ, ಎಂದರಲ್ಲದೆ ಮಂಗಳೂರಿನ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಗುರುತಿಸಲ್ಪಡುತ್ತಿರುವುದರ ಬಗ್ಗೆ ಖೇದ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ನೋರ್ವ ಮುಖ್ಯ ಅತಿಥಿ, ಜಿಲ್ಲಾ ಯುವ ರೆಡ್‌ ಕ್ರಾಸ್‌ ಸಮಿತಿ ಅಧ್ಯಕ್ಷ ಸಚೇತ್‌ ಸುವರ್ಣ, ಮಾನವೀಯತೆಯ ಕೆಲಸವೇ ಶತಮಾನದಷ್ಟು ಹಳೆಯದಾದ ರೆಡ್‌ ಕ್ರಾಸ್‌ ಸಂಸ್ಥೆಯ ಧ್ಯೇಯ, ಎಂದರು. “ಅಂಕಗಳಿಗಾಗಿ ಪಡೆಯುವ ಶಿಕ್ಷಣಕ್ಕಿಂತ ಅನುಭವದಿಂದ ಪಡೆಯುವ ಶಿಕ್ಷಣ ಹೆಚ್ಚು ಮೌಲ್ಯಯುತವಾದುದು,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಈ ಕಾರ್ಯಕ್ರಮದಲ್ಲಿ ವಿವಿ ಕಾಲೇಜಿನ ಯುವ ರೆಡ್‌ ಕ್ರಾಸ್‌ ಸಂಯೋಜಕ ಡಾ. ಕುಮಾರಸ್ವಾಮಿ ಎಂ, ಯುವ ರೆಡ್‌ ಕ್ರಾಸ್‌ ಕಾರ್ಯದರ್ಶಿ ಪ್ರಮಿತ್‌ ಎನ್‌, ಜೊತೆ ಕಾರ್ಯದರ್ಶಿ ಭೂಮಿಕಾ ಅಂಚನ್‌ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹರೀಶ ಎ ಅತಿಥಿಗಳನ್ನು ಸ್ವಾಗತಿಸಿದರು. ಯುವ ರೆಡ್‌ ಕ್ರಾಸ್‌ ಸಂಯೋಜಕಿ ಡಾ.ಭಾರತಿ ಪಿಲಾರ್‌ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಕ್ಷಮ್ಯಾ ಅಮೀನ್‌ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top