ಮಂಗಳೂರು : ಜೀವನದಲ್ಲಿ ಸಾಧನೆ ಮಾಡುವ ಕನಸು ಹೊಂದಿರುವ ವಿದ್ಯಾರ್ಥಿಗಳು ದೂರದೃಷ್ಠಿ ಮತ್ತು ದೀರ್ಘಕಾಲೀನ ಗುರಿ ಹೊಂದಿರಬೇಕು ಎಂದು ಕರ್ನಾಟಕ ಸ್ಟೇಟ್ ಕೌನ್ಸಿಲ್ನ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಅಧ್ಯಕ್ಷ ಉಲ್ಲಾಸ್ ಕಾಮತ್ ಹೇಳಿದರು.
ವಳಚ್ಚಿಲ್ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಎಕ್ಸ್ಪರ್ಟ್ನ ೩೭ನೇ ವಾರ್ಷಿಕ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಸಾಧನೆಯ ಜತೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಸ್ತು, ಗುಣ, ಮೌಲ್ಯಗಳಿಂದ ಸಂಪನ್ನರಾಗಬೇಕು ಎಂದರು.
ಭಾರತ ಮುಂಚೂಣಿಗೆ:
ಪ್ರಸ್ತುತ ಶೇ.೩೦ರಷ್ಟು ಭಾರತೀಯ ಸಿಇಒಗಳು ವಿಶ್ವದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದುದರಿಂದ ಭವಿಷ್ಯದ ೨೫ ವರ್ಷಗಳು ಭಾರತಕ್ಕೆ ಸೇರಿದ್ದು, ದೇಶವು ಜಗತ್ತಿನಲ್ಲಿ ಮುಂಚೂಣಿಗೆ ಬರಲಿದೆ. ಇದು ಪ್ರಸ್ತುತ ಪೀಳಿಗೆಯ ವಿದ್ಯಾರ್ಥಿಗಳ ಅದೃಷ್ಟವಾಗಿದೆ ಎಂದವರು ವಿವರಿಸಿದರು.
ಅಧ್ಯಕ್ಷ ಭಾಷಣ ಮಾಡಿದ ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅವರು, ಅಧ್ಯಾಪಕರ ಸಂಘಟಿತ ಕಾರ್ಯ ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಫಲವಾಗಿ ಎಕ್ಸ್ಪರ್ಟ್ ಯಶಸ್ಸಿನ ಮೆಟ್ಟಿಲೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್ ಅವರು, ಎಕ್ಸ್ಪರ್ಟ್ ಸಂಸ್ಥೆಯ ಸಾಧನೆಯ ಹಿಂದೆ ಅಸಾಧಾರಣ ಶ್ರಮವಿದೆ. ಈ ಯಶಸ್ಸಿಗೆ ಪ್ರತಿಯೊಬ್ಬ ವ್ಯಕ್ತಿಯ ಕೊಡುಗೆಯೂ ಸ್ಮರಣೀಯ ಎಂದರು.
ಉಪಪ್ರಾಂಶುಪಾಲ(ಆಡಳಿತ) ಸುಬ್ರಹ್ಮಣ್ಯ ಉಡುಪ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಕಳೆದ ಶೈಕ್ಷಣಿಕ ಸಾಲಿನಲ್ಲಿ ರಾಂಕ್ ವಿಜೇತರಾದವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಆಶಯ ಗೀತೆ ಪರಿಷ್ಕರಿಸಿದ ಸಂಗೀತ ನಿರ್ದೇಶಕ ಉಸ್ತಾದ್ ರಫೀಕ್ ಖಾನ್ ಮತ್ತು ನೃತ್ಯ ಸಂಯೋಜಕಿ ಚೈತ್ರಾ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟಿಗಳಾದ ಉಸ್ತಾದ್ ರಫೀಕ್ ಖಾನ್, ಸಿ.ಎ. ಎಸ್.ಎಸ್. ನಾಯಕ್, ಸಿ.ಎ.ಜಗನ್ನಾಥ ಕಾಮತ್, ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್.ನಾಯಕ್, ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ. ನಾಯಕ್, ಕೊಡಿಯಾಲ್ಬೈಲ್ ಎಕ್ಸ್ಪರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್, ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷ ಆಯುಷ್ ಎಸ್.ಎನ್, ಪ್ರಧಾನ ಕಾರ್ಯದರ್ಶಿ ವೈಷ್ಣವಿ ಕುಲಕರ್ಣಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಸ್ವಾಗತಿಸಿ, ಕಾರ್ಯಕ್ರಮ ನಿರ್ದೇಶಕಿ ಧೃತಿ ವಿ.ಹೆಗ್ಡೆ ವಂದಿಸಿದರು. ವಿದ್ಯಾರ್ಥಿಗಳಾದ ಶ್ರೀಕೃಷ್ಣ ಮತ್ತು ಮಿಸ್ತಿ ನಂಜಪ್ಪ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ