ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗ, ರೋಟರಿ ಕ್ಲಬ್ ಮಂಗಳೂರು ಸೀಸೈಡ್ ಸಹಯೋಗದೊಂದಿಗೆ ಔದ್ಯೋಗಿಕ ಪ್ರಗತಿಯ ಕುರಿತು ಎರಡು ವಿಶೇಷ ಉಪನ್ಯಾಸಗಳನ್ನು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ಆಯೋಜಿಸಿತ್ತು.
'ಬದುಕಿ, ಬದುಕಲಿ ಬಿಡಿ' ಎಂಬ ವಿಷಯದ ಮೇಲೆ ಮಾತನಾಡಿದ ರೊಟೇರಿಯನ್ ಯಶೋಮತಿ, ಔದ್ಯೋಗಿಕ ಪ್ರಗತಿಗೆ ನೆರವಾಗುವ ಜೀವನ ಕೌಶಲ್ಯಗಳ ಕುರಿತು ಮಾತನಾಡಿದರು. ವೃತ್ತಿ ಜೀವನದ ಯಶಸ್ಸಿನ ಕುರಿತು ಮಾತನಾಡಿದ ರೊಟೇರಿಯನ್ ಸುರೇಶ್ ಎಂ. ಎಸ್, ಯಶಸ್ವೀ ವೃತ್ತಿಜೀವನಕ್ಕೆ ನೆರವಾಗುವ ಪರೀಕ್ಷೆಗಳು ಮತ್ತು ಅವುಗಳಿಗೆ ಮಾಡಬೇಕಾದ ತಯಾರಿಯ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದರು. ಪ್ರಥಮ ವರ್ಷದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ. ಯತೀಶ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಲಕ್ಷ್ಮೀ ಶಿಖಾ ಧನ್ಯವಾದ ಸಮರ್ಪಿಸಿದರು. ಶಿಫಾನಾ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಮತ್ತು ಧನಂಜಯ್ ತಮ್ಮ ಅನಿಸಿಕೆ ಹಂಚಿಕೊಂಡರು. ನಾಗಾಭರಣ ಪ್ರಾರ್ಥಿಸಿದರು. ಉಪನ್ಯಾಸಕರಾದ ಶೀತಲ್ ಮತ್ತು ರಾಜೇಶ್ ಉಪಸ್ಥಿತರಿದ್ದರು.