ಮೂಡುಬಿದಿರೆ : ಸ್ಕೌಟಿಂಗ್ ಯುವಕರಿಗೆ ಉತ್ತಮ ಭವಿಷ್ಯವನ್ನು ರೂಪಿಸುವ ಶಕ್ತಿ, ಸೃಜನಶೀಲತೆ ಮತ್ತು ಮೌಲ್ಯಗಳ ಅಗಾಧ ಮೂಲವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ಡಾ. ವಿನಯ್ ಆಳ್ವ ಹೇಳಿದರು.
ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಯುವ ವೇದಿಕೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಯುವ ವೇದಿಕೆಯ ಮೂಲಕ, ಯುವಜನರು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ರೋವರ್ಸ್ ಮತ್ತು ರೇಂಜರ್ಗಳು ಸಾಂಸ್ಕೃತಿಕ ಪರಂಪರೆ ಮತ್ತು ಸ್ಕೌಟ್ ಮೂವ್ಮೆಂಟ್ನ ತಿಳುವಳಿಕೆಯನ್ನು ಪ್ರೋತ್ಸಾಹಿಸಲು ಇಂಟನ್ರ್ಯಾಷನಲ್ ಕಲ್ಚರಲ್ ಯೂತ್ ಫೋರಮ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸೌಟ್ಸ್-ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂದಿಯಾ, ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಯುವ ವೇದಿಕೆಯು ಯುವಜನರಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಐಕಮತ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿವಿಧ ದೇಶಗಳು, ಸಂಪ್ರದಾಯಗಳು ಮತ್ತು ಜೀವನ ವಿಧಾನಗಳ ವಿಭಿನ್ನ ಆಲೋಚನೆಗಳು ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುವ ಮೂಲಕ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಇದು ಯುವಜನರಿಗೆ ಸಹಾಯ ಮಾಡುತ್ತದೆ. ಯುವ ವೇದಿಕೆಯು ಸಂಸ್ಕೃತಿಯ ಸಂದೇಶವನ್ನು ಹರಡಿ ಯುವಜನರಲ್ಲಿ ಒಗ್ಗಟ್ಟನ್ನು ಬೆಳೆಸುತ್ತದೆ ಎಂದರು.
ಮಲೇಶಿಯಾ ಗರ್ಲ್ ಗೈಡ್ಸ್ ಅಸೋಸಿಯೇಶನ್ನ ಮುಖ್ಯ ಆಯುಕ್ತೆ ಶ್ರೀಮತಿ ಜಯದೇವಿ ಸುಬ್ರಹ್ಮಣ್ಯಂ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ ರಾಷ್ಟ್ರೀಯ ಸಂಯೋಜಕ ಕೋಲ್ಕತ್ತಾದ ರೀತೇಶ್ ಅಗರ್ವಾಲ್, ಮಲೇಶಿಯಾದ ಚಂಪಾ, ಕೊರಿಯಾದ ಡಾ. ಡಯಾನಾ, ಒಂಕಾರ್ ಸಿಂಗ್ ಮೊದಲಾದವರು ಉಪಸ್ಥಿತರಿದ್ದರು. ಯುವ ವೇದಿಕೆಯಲ್ಲಿ ರಾಜ್ಯ, ರಾಷ್ಟ್ರ ಮತ್ತು ವಿದೇಶಗಳಿಂದ ಆಗಮಿಸಿದ 284 ರೋವರ್, ರೇಂಜರ್, ಸ್ಕೌಟ್ಸ್ ಮತ್ತು ಗೈಡ್ಸ್, ದಳ ನಾಯಕರು ಹಾಗೂ ಸಂಘಟಕರು ಈ ಯುವವೇದಿಕೆಯಲ್ಲಿ ಭಾಗವಹಿಸಿದರು. ಉಡುಪಿ ಜಿಲ್ಲಾ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಉಡುಪಿ ಜಿಲ್ಲಾ ಸಂಸ್ಥೆಯ ಸಹಕಾರ್ಯದರ್ಶಿ ಡಾ. ಜಯರಾಮ ಶೆಟ್ಟಿಗಾರ್ ವಂದಿಸಿದರು, ನಿನಾದ ಕೃಷ್ಣ ಸ್ವಾಗತಿಸಿದರು. ಕು. ಧಾತ್ರಿ ಮತ್ತು ಭಾವ್ಜಿತ್ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ