ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿ ನವೆಂಬರ್ 19ರಿಂದ 25ರ ತನಕ ರಾಷ್ಟ್ರೀಯ ಐಕ್ಯತಾ ಸಪ್ತಾಹವನ್ನು ಆಚರಿಸಲಾಯಿತು. ಸಪ್ತಾಹಕ್ಕೆ ಚಾಲನೆಯಿತ್ತ ಪ್ರಾಂಶುಪಾಲರಾದ ಡಾ. ಸುರೇಶ್ ರೈ.ಕೆ ವಿಶ್ವದಲ್ಲೇ ವೈವಿಧ್ಯತೆಯಲ್ಲಿ ಮುಂಚೂಣಿಯಲ್ಲಿರುವ ಭಾರತದಲ್ಲಿ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ರಾಷ್ಟ್ರೀಯ ಐಕ್ಯತಾ ಭಾವನೆಯನ್ನು ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣದಲ್ಲೂ ಸಹಕರಿಸುವುದು ನಾಗರಿಕ ಜವಾಬ್ದಾರಿ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ನಾಗರಾಜ್ ಐಕ್ಯತೆ - ಸಾಮರಸ್ಯ - ಸೌಹಾರ್ದತೆಯ ಶಾಂತಿಯುತ ಸಮಾಜ ರಾಷ್ಟ್ರೀಯ ಪ್ರಗತಿಗೆ ಮತ್ತು ಬಲವರ್ಧನೆಗೆ ಸಹಕಾರಿ ಅವಶ್ಯವೆಂದರು ನಂತರದಲ್ಲಿ ಸಪ್ತಾಹದ ಅಂಗವಾಗಿ ವಿವಿಧ ಉಪನ್ಯಾಸ ಮಾಲಿಕೆಯನ್ನು ನಡೆಸಲಾಯಿತು.
ಭಾಷಾ ಸೌಹಾರ್ದತೆ ದಿನಾಚರಣೆ ಅಂಗವಾಗಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ರಾಧಾಕೃಷ್ಣ ಭಾಷೆ ಕೇವಲ ವ್ಯವಹರಿಸುವ ಮಾಧ್ಯಮವಷ್ಟೇ ಆಗಿರದೆ ನಮ್ಮ ಆಚಾರ – ವಿಚಾರಗಳ ಜೊತೆಗೆ ಬೇರೆ ಭಾಷೆಗಳ - ಸಂಸ್ಕೃತಿಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದ್ದು ಮಾತೃ ಭಾಷೆ ಪ್ರೀತಿ ಜೊತೆಗೆ ಇತರ ಭಾಷೆಗಳ ಬಗ್ಗೆ ಗೌರವವನ್ನು ಬೆಳೆಸಿಕೊಳ್ಳಬೇಕೆಂದರು.
ಅಲ್ಪಸಂಖ್ಯಾತರ ದಿನದ ಅಂಗವಾಗಿ ನಡೆಸಲಾದ ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಹಾಗೂ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ ಭಾಷೆ ಮತ್ತು ಮತಧರ್ಮಗಳಲ್ಲಿ ಸಾಕಷ್ಟು ವೈವಿಧ್ಯತೆಯಿದ್ದರೂ ನಾವೆಲ್ಲಾ ಭಾರತೀಯರು ಎಂಬ ರಾಷ್ಟ್ರೀಯ ಭಾವನೆ ನಮ್ಮಲ್ಲಿ ವೈವಿಧ್ಯತೆಯ ಜೊತೆಗೆ ಐಕ್ಯತೆಯನ್ನು ಮೂಡಿಸುತ್ತದೆಂದು ತಿಳಿಸಿದರು.
ದುರ್ಬಲವರ್ಗಗಳ ದಿನಾಚರಣೆಯಲ್ಲಿ ಸಂಪನ್ಮೂಲ ಭಾಷಣ ಮಾಡಿದ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್ ಶತಕೋಟಿಗೂ ಮಿಕ್ಕ ಜನಸಂಖ್ಯೆಯಲ್ಲಿ ದುರ್ಬಲವರ್ಗಗಳಿಗೆ ಸೇರಿದ ಜನರೇ ಹೆಚ್ಚಿರುವ ದೇಶದಲ್ಲಿ ದುರ್ಬಲವರ್ಗಗಳ ಜನರನ್ನು ಮುಖ್ಯವಾಹಿನಿಗೆ ತಂದಾಗ ಮಾತ್ರ ರಾಷ್ಟ್ರ ನಿರ್ಮಾಣ ಕಾರ್ಯಪೂರ್ಣಗೊಳ್ಳಬಲ್ಲದು ಮತ್ತೆ ಅದು ಸಂವಿಧಾನದ ಆಶಯವೂ ಹೌದು ಎಂದು ತಿಳಿಸಿದರೆ ಸಾಂಸ್ಕೃತಿಕ ಐಕ್ಯತಾ ದಿನದಂದು ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಗಾಂವ್ಕರ್ ಸಾಂಸ್ಕೃತಿಕ ವೈವಿಧ್ಯತೆ ಇಡೀ ಜಗತ್ತಿನ ಗಮನ ಭಾರತದತ್ತ ಸೆಳೆಯುವಂತೆ ಮಾಡಿದ್ದು ರಾಷ್ಟಾçಭಿಮಾನವನ್ನು ಹೆಚ್ಚಿಸಿದೆ.
ಮಹಿಳಾ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು ಇಲ್ಲಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಹೇಮಾ ಕೊಡದ ಮಹಿಳಾ ಸಬಲೀಕರಣ ಮತ್ತು ಸಮಾನತೆ ಬಗ್ಗೆ ಮಾತನಾಡಿದರು. ಪರಿಸರ ಜಾಗೃತಿ ದಿನದ ಸಂಪನ್ಮೂಲ ವ್ಯಕ್ತಿ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ರಾಘವ ನಾಯ್ಕ್ ಪರಿಸರ ಸ್ವಚ್ಛ - ಶುದ್ಧವಿದ್ದಲ್ಲಿ ಮಾತ್ರ ಮನುಷ್ಯನ ಬದುಕು ಸಂಪನ್ನಗೊಳ್ಳಲು ಸಾಧ್ಯ ಮತ್ತು ಪರಿಸರ ಕಾಳಜಿಯನ್ನು ಪ್ರತಿಯೊಬ್ಬ ವ್ಯಕ್ತಿ ಹೊಂದಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಯುವಜನತೆ ಪರಿಸರ ಜಾಗೃತಿ ಬೆಳೆಸುವಲ್ಲಿ ಶ್ರಮಿಸಬೇಕೆಂದು ಕರೆಯಿತ್ತರು.
ಕಾಲೇಜಿನ ಗ್ರಂಥಪಾಲಕ ಕೃಷ್ಣ ಸಾಸ್ತಾನ ಐಕ್ಯತಾ ಸಪ್ತಾಹವನ್ನು ಸಂಘಟಿಸಿದರೆ ಡಾ. ಮಮತ ಎಲ್, ಡಾ. ಉದಯಶೆಟ್ಟಿ, ಸುಷ್ಮಾ.ಟಿ, ಪ್ರಶಾಂತ ಎನ್, ವೆಂಕಟೇಶ್ ಹೆಚ್, ಆಶೋಕ್ ಬೋಧಕೇತರ ವೃಂದದವರು ಸಹಕರಿಸಿದರು. ಇದೇ ಸಂಧರ್ಭದಲ್ಲಿ ಪ್ರಾಂಶುಪಾಲರು ಐಕ್ಯತಾ ಪ್ರತಿಜ್ಞಾ ವಿಧಿಯನ್ನು ಬೋಧಕ ಬೋಧಕೇತರರಿಗೂ ಹಾಗೂ ವಿದ್ಯಾರ್ಥಿಗಳಿಗೆ ಬೋಧಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ