ಉಜಿರೆ: ಧರ್ಮಸ್ಥಳ ಅಂದು ಎಂದಿನಂತಿರಲಿಲ್ಲ ಅಲ್ಲಿ ಕಲೆಯದ್ದೇ ವೈಭವ. ಕಲಾವಿದರು, ವಿಧ ವಿಧವಾದ ಕಲಾ ಪ್ರಕಾರಗಳಿಂದ ನೆರೆದಿರುವ ಅನೇಕ ಕಲಾ ಪ್ರೇಮಿಗಳಿಗೆ ವೈವಿಧ್ಯಮಯ ಕಲಾಪ್ರದರ್ಶನ ನೀಡಿ ಗಮನ ಸೆಳೆದರು. ನೃತ್ಯ ರೂಪಕದ ಮೂಲಕ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸುವಲ್ಲಿ ಆರಾಧನಾ ನೃತ್ಯ ತಂಡ ಯಶಸ್ವಿಯಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸಮಿತಿಯು, ಶನಿವಾರ ವಸ್ತುಪ್ರದರ್ಶನ ಮಂಟಪದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.
ಕರ್ನಾಟಕ ಕಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್ ನಾಗಭೂಷಣ ಅವರ ತಂಡದಿಂದ ನೃತ್ಯ ರೂಪಕ ಕಾರ್ಯಕ್ರಮ ನಡೆಯಿತು. ವಿದುಷಿ ಹರ್ಷಿತಾ ಸುಧೇಶ್ ನೇತೃತ್ವದ ಒಟ್ಟು 16 ಕಲಾವಿದರ ತಂಡವು, ಪುರಾಣದ ಅನೇಕ ಸನ್ನಿವೇಶಗಳನ್ನು ಭರತನಾಟ್ಯದ ಮೂಲಕ ವಿನೂತನವಾಗಿ ಪ್ರಸ್ತುತ ಪಡಿಸಿದರು. ನೃತ್ಯಕ್ಕೆ ಹಿನ್ನೆಲೆಯಾಗಿ ಗಾಯನ ಮತ್ತು ನಟ್ವಾಂಗದಲ್ಲಿ, ವಿದ್ವಾನ ನಾಗಭೂಷಣ, ಮೃದಂಗದಲ್ಲಿ ನಾಗರಾಜ, ವಯೋಲಿನ್ನಲ್ಲಿ ಹೊಸಳ್ ವೆಂಕಟರಮಣ ಮತ್ತು ಕೊಳಲಿನಲ್ಲಿ ರಾಹುಲ್ ಸಾಥ್ ನೀಡಿದರು.
ಶ್ರೀ ಗಣೇಶ ಸ್ತುತಿಯೊಂದಿಗೆ ಪ್ರಾರಂಭಿಸಿ, ಮೋಹನರಾಗದಲ್ಲಿ ನಮ್ಮಮ್ಮ ಶಾರದೆ, ರೇವತಿ ರಾಗದಲ್ಲಿ ಶಿವಶಂಭೂಲ ನೃತ್ಯ ರೂಪಕ ಸಾದರ ಪಡಿಸಿದರು. ನಾಗಮಾಲಿಕ ರಾಗದ ಸಮುದ್ರ ಮಥನ ಮತ್ತು ಮಧ್ಯಮಾವತಿ ರಾಗದ ಶಿವದರ್ಶನ ರೂಪಕವು ಕಲಾಭಿಮಾನಿಗಳಿಗೆ ಮುದ ನೀಡಿತು.
ವಿದುಷಿ ಹರ್ಷಿತಾ ಸುಧೇಶ್ರವರ ಏಕವ್ಯಕ್ತಿ ನೃತ್ಯ ರೂಪಕದಲ್ಲಿ ಮೂಡಿಬಂದ ಶ್ರೀಕೃಷ್ಣ ಲೀಲೆಯು ಅವರ ವಿಶೇಷ ಅಭಿನಯ ಮತ್ತು ಹಾವ - ಭಾವಗಳಿಂದ ಕಲಾ ಆರಾಧಕರನ್ನು ಮಂತ್ರಮುಗ್ಧರನ್ನಾಗಿಸಿತು.
ವರದಿ: ಭಾರತಿ ಹೆಗಡೆ
ದ್ವಿತೀಯ ಎಂ.ಸಿ.ಜೆ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ.ಸಿ ಉಜಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ