
ಈಗಾಗಲೇ ನನ್ನ ತಂದೆಯವರು ಅರಮನೆಯ ಶ್ಯಾನುಭೋಗರಾಗಿ ಕೆಲಸ ಮಾಡುತ್ತಿದ್ದಿದ್ಧುದು. ಕುಂಬಳೆ ಸೀಮೆಯಲ್ಲಿ ಮಿಲಿಟರಿ ಕ್ಯಾಂಪ್ ಹಾಗೂ ಬ್ಲಾಕ್ ಬಂದುದರ ಬಗ್ಗೆ ಬರೆದಿದ್ದೇನೆ. ಅನಂತಪುರಕ್ಕೆ ಮೊಸಳೆ ಬಂದ ಬಗ್ಗೆಯೂ ತಿಳಿಸಿದ್ದೇನೆ. ಹಾಗೆಯೇ ಬ್ರಿಟಿಷ್ ಬ್ಲೋಕ್ ಕೇಂಪಿನ ಅಧಿಕಾರಿಯೊಬ್ಬ ಬಬಿಯ ಮೊಸಳೆಯನ್ನು ಗುಂಡಿಟ್ಟು ಕೊಂದ ಬಗೆಯನ್ನೂ ತಿಳಿಸಿದ್ದೇನೆ. ಇದರಿಂದಲಾಗಿ ಪದ್ಮನಾಭ ಸ್ವಾಮಿ ಅವನಿಗೆ ವಿಧಿಸಿದ ಶಿಕ್ಷೆಯ ಬಗ್ಗೆಯೂ ತಿಳಿಸಿದ್ದೇನೆ. ಇನ್ನು ಮುಂದಿನ ಭಾಗದೆಡೆಗೆ ಹೋಗೋಣ.
"ಬಂದೆಯಾ ಬಬಿಯ ಪುನ: ಅವತಾರ ತಾಳಿ?" ಎಂಬುದೇ ಇಂದಿನ ವಿಷಯ.
ಪದ್ಮನಾಭಸ್ವಾಮಿಯ ಭಂಡಾರದಲ್ಲಿ ಎಂದೂ ಯಾವುದೂ ಕಡಿಮೆಯಿಲ್ಲ. ಆದರೆ ಪಡಕೊಳ್ಳುವವನ ಯೋಗ್ಯತೆಯನ್ನನುಸರಿಸಿ ಎಲ್ಲಿ ಯಾವಾಗ ಹೇಗೆ ಕೊಡಬೇಕೆಂದು ನಿಶ್ಚಯಿಸುತ್ತಾನೋ ಅಲ್ಲೇ ಹಾಗೇ ಕೊಡುವವ ಅವ. ಈ ಲೇಖಕನೇ ಇದಕ್ಕೆ ಉದಾಹರಣೆ. ಅನಂತಪುರ ಕ್ಷೇತ್ರ ಪರಿಧಿಯಿಂದ ತಿರುವನಂತಪುರಂ ಕ್ಷೇತ್ರದ ವ್ಯಾಪ್ತಿಗೆ ಬರಿಸಿ ನಿನ್ನ ಕಾರ್ಯಕ್ಷೇತ್ರ ಅನಂತಪುರ ಕ್ಷೇತ್ರದ ಪರಿಧಿಯೆ ಆದರೆ ಆ ಕಾರ್ಯ ನಡೆಸಲು ನಿನಗೆ ಬೇಕಾದ ಪರವಾನಿಗೆ ನಾನು ನನ್ನ ಕ್ಷೇತ್ರದೊಳಗಿನಿಂದಲೇ ಕೊಡಿಸುತ್ತೇನೆಂದು ನನಗೆ ಜೀವನ ನಡೆಸಲು ಇರುವ ವೃತ್ತಿಗೆ ಅವಶ್ಯವಿರುವ ಪರವಾನಿಗೆ ಕೊಡಿಸಿ ಜೀವನದ ದಾರಿ ತೋರಿಸಿದ್ದ. ಹಾಗಿರುವಾಗ ತನ್ನ ಕ್ಷೇತ್ರದ ಪ್ರತಿಷ್ಟೆಯಾದ ಬಬಿಯ ಇಲ್ಲದಾದಾಗ ಆ ಸ್ಥಾನವನ್ನು ಶೂನ್ಯವಾಗಲು ಬಿಡುವನೇ? ಖಂಡಿತಾ ಇಲ್ಲ. ಅಂದೂ ಬಿಡಲಿಲ್ಲ ಇಂದೂ ಬಿಡಲಾರ ಮುಂದೆಯೂ ಬಿಡಲಾರ ಎಂಬುದೇ ನನ್ನ ನಂಬಿಕೆ.
ಖಂಡಿತಾ ಬಬಿಯನ ಮೂರನೇ ಅವತಾರ ಬೇಗನೇ ಕ್ಷೇತ್ರ ಸರೋವರದಲ್ಲಿ ಕಾಣಬಹುದು. ಸಂಯಮವಿರಲಿ. ಕಾಯಲೇ ಬೇಕು. ಒಳ್ಳೆಯದು ಸಿಗಲು ಕಾಯಲೇ ಬೇಕಂತೆ. ಇದು ಭಗವಂತನ ನಿಯಮ. ಮೂರನೇ ಬಬಿಯನನ್ನು ಕಾಣುವ ಭಾಗ್ಯ ಇರುವವರಿಗೆ ಅವ ಕಾಣಲು ಸಿಕ್ಕಿಯೇ ಸಿಗುತ್ತಾನೆ. ಆ ಭಾಗ್ಯ ನಮಗೂ ಸಿಗಲಿ ಎಂದಷ್ಟೇ ಪ್ರಾರ್ಥಿಸೋಣ.
ಈಗ ಬಬಿಯನ ಎರಡನೇ ಅವತಾರ ಮಾಯಿಪ್ಪಾಡಿ ಅರಮನೆಯವರ ಗಮನಕ್ಕೆ ಬಂದ ಬಗ್ಗೆ ತಿಳಿಸುತ್ತಾ ಮುಂದುವರಿಯುತ್ತೇನೆ.
1954- 56 ಇರ ಬಹುದೆಂದು ಅನ್ನಿಸುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬರುವುದರೊಂದಿಗೆ ಮಾಯಿಪ್ಪಾಡಿ ಅರಮನೆಯಲ್ಲೂ ಸೊತ್ತುಗಳ ವಿಭಾಗವಾಗ ಬೇಕೆಂಬ ಕೂಗು ಸುರುವಾಗುತ್ತದೆ. ಅರಮನೆಯಲ್ಲಿ ಭೂಮಿಯ ವಿಭಾಗ ಆಗಬೇಕೆಂಬ ಕೂಗು ಬಲವಾದಾಗ ರಾಜರು ಎಲ್ಲಾ ಸೊತ್ತಿನ ಲೆಕ್ಕಾಚಾರ ಮಾಡಿ ಅವರವರ ಯೋಗ್ಯತಾನುಸಾರ (ಇಲ್ಲಿ ಯೋಗ್ಯತೆ ಎಂದುದು ಯಾರು ಯಾರಿಗೆ ಎಷ್ಟು ಅಂಶ ಹಕ್ಕು ಬರುತ್ತದೆ ಎಂಬುದರ ಬಗ್ಗೆ. ಅಳಿಯ ಕಟ್ಟು ನಿಯಮದಂತೆ ಆಗ ಅರಮನೆಯಲ್ಲಿ ಹಕ್ಕು ಇರುತ್ತಿತ್ತು. ಇದರಲ್ಲಿ ಪ್ರತಿಯೊಬ್ಬನೂ ಎಷ್ಟು ಅಂಶಕ್ಕೆ ಹಕ್ಕುದಾರ ಎಂಬುದನ್ನು ನಿರ್ಣಯ ಮಾಡಬೇಕಿತ್ತು.) ಪಾಲು ಮಾಡಿ ಕೊಡುವ ನಿರ್ಧಾರಕ್ಕೆ ಬರುತ್ತಾರೆ. ನ್ಯಾಯಕ್ಕೆ ಚ್ಯುತಿ ಬಾರದಂತೆ ಈ ಪಾಲು ವ್ಯವಹಾರ ನಡೆಸುವ ಎಲ್ಲಾ ಜವಾಬ್ದಾರಿಯನ್ನು ನನ್ನ ತಂದೆಯವರಿಗೇ ಒಪ್ಪಿಸುತ್ತಾರೆ. ಇದರಿಂದ ನನ್ನ ತಂದೆಯವರು ಬಿಡುವಿಲ್ಲದೆ ದುಡಿಯ ಬೇಕಾಗುತ್ತದೆ. ಹದಿನಾರು ಗ್ರಾಮಗಳಲ್ಲಿ ಹಂಚಿ ಹೋಗಿದ್ದ ಭೂಮಿಯನ್ನು ಆ ಭೂಮಿಯ ಗುಣ ಮಟ್ಟವನ್ನನುಸರಿಸಿ ಮೌಲ್ಯ ನಿರ್ಣಯ ಮಾಡಬೇಕಿತ್ತು. ಕಾನೂನಾತ್ಮಕ ಸಮಸ್ಯೆಗಳಿಗೆ ವಕೀಲರ ಸಲಹೆ ಪಡೆಯ ಬೇಕಿತ್ತು. ಅರಮನೆಯ ಭೂಮಿಯಲ್ಲಿ ಹಕ್ಕು ಹೊಂದಿದ್ದ ನೂರಕ್ಕೂ ಹೆಚ್ಚು ಕುಟುಂಬಸ್ಥರಿಗೆ ಅವರ ಸ್ಥಾನಕ್ಕನುಸರಿಸಿ ವಿಭಾಗ ಮಾಡ ಬೇಕಿತ್ತು. ಇದೆಲ್ಲಾ ನಿಶ್ಚಿತ ಸಮಯದೊಳಗೆ ಮುಗಿಯಲೂ ಬೇಕಿತ್ತು. ಇದಲ್ಲದೆ ಅರಮನೆಯ ಆಡಳಿತದೊಳಗಿದ್ದ ಪ್ರತಿ ದೇವ ಹಾಗೂ ದೈವಸ್ಥಾನಗಳ ಯೋಗ್ಯತೆಗನುಸರಿಸಿ ಖರ್ಚಿಗಿರುವ ವ್ಯವಸ್ಥೆಗಳನ್ನು ನಿರ್ಣಯ ಮಾಡ ಬೇಕಿತ್ತು. ಇದರಿಂದ ತಂದೆಯವರಿಗೆ ದೇವಸ್ಥಾನ ದೈವಸ್ಥಾನಗಳ ದೈನಂದಿನ ವ್ಯವಹಾರಗಳ ಬಗ್ಗೆ ಪ್ರತ್ಯೇಕವಾದ ಗಮನ ಹರಿಸಲು ಸಮಯ ಸಿಗುತ್ತಿರಲಿಲ್ಲ. ಆದರೆ ಸಾಮಾನ್ಯವಾಗಿ ನಡೆಯುವಂತೆ ಅದು ನಡೆದುಕೊಂಡು ಹೋಗುತ್ತಿತ್ತು. ಅಲ್ಲಿ ವ್ಯವಸ್ಥೆ ನೋಡುವವರು ಸಲಹೆ ಬೇಕಾದಾಗ ಮಾತ್ರ ನಮ್ಮ ಮನೆಗೇ ಬಂದು ಅಪ್ಪನಿಂದ ಸಲಹೆ ಪಡೆದು ಹೋಗುತ್ತಿದ್ದರು. ನಡೆದೇ ಹೋಗ ಬೇಕಿದ್ದ ಆ ಕಾಲದಲ್ಲಿ ಇದು ಸಣ್ಣ ಕೆಲಸವೇನೂ ಆಗಿರಲಿಲ್ಲ.
ಅದೊಂದು ದಿನ ಮುಂಜಾನೆ ನಾವಿನ್ನೂ ಎದ್ಧು ಹೊರ ಬರುತ್ತಿದ್ದಂತೆ ನಮ್ಮ ಕೆಲಸದವನೊಬ್ಬ ಓಡಿ ಬಂದು ಅನಂತಪುರದಲ್ಲಿ ಮೊಸಳೆ ಬಂದಿದೆಯಂತೆ. ಸಣ್ಣ ಕರುವೊಂದರ ಕಾಲು ಹಿಡಿದಿತ್ತಂತೆ. ಕರು ಗಾಯಗಳೊಂದಿಗೆ ಹೇಗೋ ತಪ್ಪಿಸಿ ಬಂದಿದೆಯಂತೆ ಎಂಬ ಸುದ್ಧಿ ಹೇಳುತ್ತಾನೆ. ವಿಶೇಷ ಸುದ್ಧಿ ಕೇಳಿದ ಅಪ್ಪ ಆಗಲೇ ಅರಮನೆಗೆ ಹೋಗಿ ರಾಜರಿಗೆ ವಿಷಯ ತಿಳಿಸಿ ಅಲ್ಲಿಂದ ಅನಂತಪುರ ಕ್ಷೇತ್ರಕ್ಕೆ ಹೋಗುತ್ತಾರೆ. ಅಲ್ಲಿ ಸರೋವರದಲ್ಲಿ ಆರಾಮದಲ್ಲಿ ಈಜಾಡುತ್ತಿರುವ ಮೊಸಳೆ ಕಾಣ ಸಿಗುತ್ತದೆ. ಅನಿರೀಕ್ಷಿತವಾಗಿ ಅಪ್ಪನ ಬಾಯಲ್ಲಿ "ಒಬ್ಬ ಬಬಿಯನ ಸ್ಥಾನಕ್ಕೆ ಇನ್ನೊಬ್ಬ ಬಬಿಯ ಬಂದಿದ್ದಾನೆ" ಎಂಬ ಉದ್ಘಾರ ಬರುತ್ತದೆ. ಅಲ್ಲಿ ಸೇರಿದ್ದ ಜನ ಸಮೂಹವೂ ಸೈ ಅನ್ನುತ್ತಾರೆ. ಪೂಜೆಯವರು ಕೂಡ ಹೌದು ಇನ್ನು ಇವನನ್ನೂ ಬಬಿಯಾ ಎಂದೇ ಕರೆಯೋಣ ಎನ್ನುತ್ತಾರೆ.
ಅಲ್ಲಿಂದ ಸುರುವಾಯಿತು ಎರಡನೇ ಬಬಿಯನ ವಾಸ ಅನಂತಪುರದ ಪುಣ್ಯ ಕ್ಷೇತ್ರದಲ್ಲಿ. ಜನಗಳಿಗೆ ಕಾಣ ಸಿಗುವಾಗ ಅವನಿಗೆ ಹತ್ತರಿಂದ ಹನ್ನೆರಡು ವರ್ಷ ಇದ್ದಿರಬಹುದೆಂದಿದ್ದರಂತೆ ಅನುಭವಿಗಳು. ಅದೂ ಒಂದನೇ ಬಬಿಯನ ಸಾವಿನಿಂದ ಲೆಕ್ಕ ಹಿಡಿದರೆ ಅಂದಿನಿಂದಲೇ ಈ ಎರಡನೇ ಬಬಿಯ ಅನಂತಪುರದ ಸರೋವರದಲ್ಲಿ ಪ್ರವೇಶಿಸಿರಬಹುದೆಂದು ಅಂದಾಜು ಮಾಡಬಹುದು. ಅಂತೂ ಪದ್ಮನಾಭ ಸ್ವಾಮಿ ಬಿಲ್ವಮಂಗಲ ಸ್ವಾಮಿಗಳಿಗೆ ಕೊಟ್ಟ ಮಾತಿನಂತೆ ತನ್ನ ಶಕ್ತಿಯದೇ ಒಂದು ಭಾಗವನ್ನು ಅನಂತಪುರದ ಸರೋವರದಲ್ಲಿ ಪುನ: ಉದಯವಾಗುವಂತೆ ಮಾಡಿದ್ದರು.
ಮುಂದೆ ಹೋಗುವುದಕ್ಕೆ ಮೊದಲು ಒಂದೆರಡು ಮಾತು ಮೊಸಳೆಯ ಬಗ್ಗೆಯೆ. ಮೊಸಳೆಗಳು ಮಾಂಸಾಹಾರಿಗಳು ಎಂಬುದರಲ್ಲಿ ಸಂದೇಹವೇ ಇಲ್ಲ. ಹಾಗೆಯೇ ಈ ಬಬಿಯ ಶುದ್ಧ ಸಸ್ಯಾಹಾರಿ ಆಗಿದ್ದ ಎಂದರೆ ಅದಕ್ಕಿಂತ ದೊಡ್ಡ ಮೂರ್ಖತನವೂ ಇಲ್ಲ. ಈ ಬಬಿಯನನ್ನು ಹತ್ತಿರದಿಂದಲೇ ಕಂಡವ ನಾನು. ಹಿಂದಿನ ಬಬಿಯನ ಬಗ್ಗೆ ವರ್ಣರಂಜಿತ ಕತೆಗಳಿದ್ಧುವು; ಆದ್ದರಿಂದ ಅವನ ಬಗ್ಗೆ ನಾನು ಹೇಳಲಾರೆ. ಆದರೆ ಇಲ್ಲಿ ವಿಶೇಷತೆ ಏನೆಂದರೆ ಸಾಮಾನ್ಯವಾಗಿ ನಾನು ತಿಳಿದಂತೆ ಮೊಸಳೆಗಳು ಅನ್ನವನ್ನು ತಿನ್ನುವುದಿಲ್ಲ. ಆದರೆ ಬಬಿಯ ಆರಾಮವಾಗಿ ಹಾಕಿದಷ್ಟೂ ಅನ್ನ ತಿನ್ನುತ್ತಿತ್ತು. ಬಬಿಯ ನೈವೇಧ್ಯದ ಅನ್ನ ತಿನ್ನುವುದನ್ನು ಕಣ್ಣಾರೆ ಕಂಡವ ನಾನು. ಇನ್ನು ನನಗೆ ತಿಳುವಳಿಕೆ ಬರುವ ಕಾಲಕ್ಕೆ ಅನಂತಪುರದ ಸರೋವರದಲ್ಲಿ ದೊಡ್ಡ ದೊಡ್ಡ ಮೀನುಗಳು ಇದ್ಧುವು. ಶೃಂಗೇರಿಗೆ ಹೋದವರಿಗೆ ತುಂಗಭದ್ರೆಯಲ್ಲಿ ಕಾಣುವ ಮೀನುಗಳನ್ನು ನೋಡಿ ಗೊತ್ತಿರ ಬಹುದು. ಅದೇ ಆಕಾರದ ದೊಡ್ಡ ಮೀನುಗಳು ಇಲ್ಲೂ ಇದ್ಧುವು. ಆದ್ದರಿಂದ ಅದನ್ನು ಬಬಿಯ ತಿನ್ನದೆ ಬರೇ ಅನ್ನ ತಿಂದು ಬದುಕಿದ್ದ ಎಂದರೆ ಅದನ್ನು ನಂಬಲು ಕಷ್ಟವಲ್ಲವೇ?
ಈ ಬಬಿಯನ ಆಹಾರ ಅಲ್ಲಿ ನಡೆದ ಆಹಾರಕ್ರಮದ ವ್ಯತ್ಯಾಸಗಳ ಬಗ್ಗೆ ನನಗೆ ತಿಳಿದ ವಿಷಯಗಳನ್ನು ನನ್ನ ಲೇಖನ ಮಾಲೆಯ ಕೊನೆಯಲ್ಲಿ ಸವಿವರವಾಗಿ ಬರೆಯುತ್ತೇನೆ. ಲೇಖನ ಮಾಲೆಯ ಕೊನೆಯವರೆಗೆ ಸ್ವಲ್ಪ ಸಂಯಮ ವಹಿಸಬೇಕಾಗಿ ಎಲ್ಲಾ ಓದುಗರಲ್ಲೂ ಕೇಳಿಕೆ.
ಇಷ್ಟೆಲ್ಲಾ ಯಾಕೆ ಬರೆಯ ಬೇಕಾಯಿತೆಂದರೆ ಮಾಯಿಪ್ಪಾಡಿ ಅರಮನೆಗೆ ಅಧಿಕೃತವಾಗಿ ಬಬಿಯ ಬಂದ ಸುದ್ಧಿ ತಿಳಿದುದು ಅದು ಕರುವೊಂದರ ಮೇಲೆ ಆಕ್ರಮಣಕ್ಕೆ ಯತ್ನಿಸಿದಾಗಲೆ. ಇನ್ನೀಗ ಮಾಂಸಾಹಾರ ಸಸ್ಯಾಹಾರದ ಚರ್ಚೆ ಬಾರದಂತೆ ಮೊದಲಾಗಿಯೇ ಈ ವಿಷಯ ತಿಳಿಸಿದ್ದೇನೆ. ದೇವರು ಕೂಡಾ ತನ್ನ ಅವತಾರದಲ್ಲಿ ಯಾವ ರೂಪ ತಾಳುತ್ತಾನೋ ಅದಕ್ಕೆ ಸಹಜವಾಗಿಯೇ ಬದುಕಿ ತೋರಿಸುವವನು. ಪುರಾಣಗಳು ಚರಿತ್ರೆಗಳು ಎಲ್ಲಾ ಇದನ್ನು ತೋರಿಸಿ ಕೊಟ್ಟಿದೆ. ಆದ್ದರಿಂದ ಎಲ್ಲೂ ಉತ್ಪ್ರೇಕ್ಷೆ ಬೇಡ ಸಹಜವಾಗಿ ಇದ್ಧುದನ್ನು ಸಹಜವಾಗಿಯೇ ಒಪ್ಪಿಕೊಳ್ಳೋಣ.
1955- 56ರಲ್ಲಿ ಅರಮನೆಯಲ್ಲಿ ಪಾಲು ಪ್ರಕ್ರಿಯೆಗಳು ಪೂರ್ಣ ಗೊಳ್ಳುವುದರೊಂದಿಗೆ ನನ್ನ ತಂದೆಯವರ ಅವಶ್ಯ ಅಲ್ಲಿ ಇಲ್ಲದಾಗುತ್ತದೆ. 1956 ರಲ್ಲಿ ಕೇರಳದಲ್ಲಿ ಬಂದ ಕಮ್ಯೂನಿಸ್ಟ್ ಸರ್ಕಾರ ಉಳುವವನೇ ಹೊಲದೊಡೆಯ ಎಂಬ ಕಾನೂನು ತರುತ್ತದೆ. ಇದರೊಂದಿಗೆ ಅರಮನೆ ಹಾಗೂ ರಾಜರ ಕುಟುಂಬಕ್ಕೆ ಸೇರಿದವರ ಜಮೀನೆಲ್ಲಾ ಪರಾಭಾರೆಯಾಗುತ್ತದೆ. ಉತ್ಪಾದನೆ ಇಲ್ಲದಿದ್ದರೂ ದೇವಸ್ಥಾನ ದೈವಸ್ಥಾನಗಳಲ್ಲಿ ನಡೆಯ ಬೇಕಾದ ಕಾರ್ಯಗಳು ನಡೆಯಲೇ ಬೇಕಿತ್ತು. ಅದನ್ನೆಲ್ಲಾ ಸಂಭಾಳಿಸಲು ರಾಜರು ಎಷ್ಟು ಕಷ್ಟಪಟ್ಟರೋ ಅವರಿಗೆ ಎಷ್ಟು ಸಾಧ್ಯವಾಯಿತೋ ನನಗೆ ತಿಳಿಯದು. ಮುಂದೆ ಸೇವಾ ಸಮಿತಿಗಳು ಎಲ್ಲಾ ಊರಲ್ಲಿಯೂ ದೇವಾಲಯದ ಜೀರ್ಣೋದ್ಧಾರ ಹಾಗೂ ನಿತ್ಯನೈಮಿತ್ಯ ಕಾರ್ಯಗಳನ್ನು ನಡೆಸ ತೊಡಗಿದ ಮೇಲೆ ವ್ಯವಸ್ಥೆಗಳು ಒಂದು ರೀತಿ ಸರಿಯಾಗಿ ನಡೆಯ ತೊಡಗಿದೆ.
ಅನಂತಪುರದ ದೈನಂದಿನ ಆಡಳಿತೆ ಮೊದಲ ಜೀರ್ಣೋದ್ಧಾರ ಬ್ರಹ್ಮಕಲಶದ ವರೆಗೆ ಯಾವ ರೀತಿ ನಡೆಯುತ್ತಿತ್ತೆಂಬ ಬಗ್ಗೆ ನನಗಂತೂ ತಿಳಿದಿಲ್ಲ.
ಆದರೆ ಪದ್ಮನಾಭ ಅನಂತಪುರದೊಂದಿಗಿನ ನನ್ನ ನಂಟು ಉಳಿಸಿಕೊಳ್ಳಲು ಬಯಸಿದ್ದ. ಆ ವಿಷಯವೇ ನಮ್ಮ ಮುಂದಿನ ಭಾಗ. ಅನಂತ ಪದ್ಮನಾಭನಿಗೆ ಬ್ರಹ್ಮಕಲಶೋತ್ಸವದ ಸಂಭ್ರಮ. ಈ ಲೇಖಕನಿಗೆ ಬಬಿಯನ ಒಡನಾಟದ ಸವಿರುಚಿ.
-ಎಡನಾಡು ಕೃಷ್ಣ ಮೋಹನ ಭಟ್ಟ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ