ಉಡುಪಿ: ಮಾನವನ ಪ್ರತಿದಿನದ ದಿನಚರಿ ಹಾಗೂ ಜೀವನ ವಿಧಾನ ಯಾವ ರೀತಿ ಇರಬೇಕು ಎಂಬುದನ್ನು ತಿಳಿಸುವ ಆಯುರ್ವೇದ ಪದ್ದತಿಯು ಪ್ರತಿ ದಿನ ಪ್ರತೀ ಮನೆಯಲ್ಲಿಯೂ ಬಳಕೆಯಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಉಡುಪಿ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ತಾಲೂಕು ಇವರ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಧನ್ವಂತರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯೊಂದಿಗೆ ಜೀವನ ನಡೆಸುವ ಮಾನವನ ಜೀವನ ವಿಧಾನವು, ಯಾವ ರೀತಿಯಲ್ಲಿ ಪ್ರಕೃತಿಗೆ ಹತ್ತಿರವಾಗಿ, ಆರೋಗ್ಯಕರವಾಗಿ ಜೀವನ ನಡೆಸಬೇಕು ಎಂಬ ಬಗ್ಗೆ ತಿಳಿಸುವ ಆಯುರ್ವೇದ ಪದ್ದತಿಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು,ಆಧುನಿಕ ವೈದ್ಯಕೀಯ ಪದ್ದತಿಯಲ್ಲಿ ಅನಾರೋಗ್ಯ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತದೆ ಆದರೆ ಆಯುರ್ವೇದವು ಆರೋಗ್ಯಕರ ವ್ಯಕ್ತಿಯು ತಮ್ಮ ಆರೋಗ್ಯವನ್ನು ಪ್ರತಿದಿನದ ತನ್ನ ಜೀವನ ಪದ್ದತಿಯಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸುತ್ತದೆ, ಅಲ್ಲದೇ ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ, ಆಯುರ್ವೇದ ಸೂತ್ರಗಳನ್ನು ಪ್ರತಿದಿನದ ದಿನಚರಿಯಲ್ಲಿ ಪಾಲಿಸಬೇಕು ಎಂದರು.
ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಕೋವಿಡ್ ನಂತರ ಆಯುರ್ವೇದದ ಮಹತ್ವ ಕುರಿತು ಹೆಚ್ಚಿನ ಜಾಗೃತಿ ಮೂಡಿದೆ, ಆಯುಷ್ ಆಸ್ಪತ್ರೆಯಲ್ಲಿ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಸಾರ್ವಜನಿರಿಗೆ ತಿಳಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಅಯುರ್ವೇದ ಬಳಕೆಯಿಂದ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ದೊರೆಯಲಿದ್ದು, ಇಡೀ ವಿಶ್ವವೇ ಇಂದು ಭಾರತದ ಆಯುರ್ವೇದ ಪದ್ದತಿಯನ್ನು ಬೆರಗಿನಿಂದ ನೋಡುತ್ತಿದ್ದು, ಇದು ಜೀವನದಲ್ಲಿ ಪ್ರತಿದಿನ ಬಳಕೆಯಾಗಲಿ ಎಂದರು.
ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ನಾರಾಯಣ ಅಂಚನ್ ಉಪಸ್ಥಿತರಿದ್ದರು. ಆಯುರ್ವೇದದ ಮಹತ್ವ ಕುರಿತು ಉದ್ಯಾವರ ಎಸ್.ಡಿ.ಎಂ ಕಾಲೇಜಿನ ಪ್ರಾಚಾರ್ಯ ಡಾ.ಯೋಗೇಶ್ ಆಚಾರ್ಯ ಉಪನ್ಯಾಸ ನೀಡಿದರು. ಆಯುರ್ವೇದ ಸಸ್ಯಗಳ ವಿತರಣೆ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಸ್ವಾಗತಿಸಿದರು, ಡಾ.ವೀಣಾ ಕಾರಂತ ವಂದಿಸಿದರು, ಡಾ.ಸರ್ವೋತ್ತಮ ಶೆಟ್ಟಿ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ