ಮಂಗಳೂರು: ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಕುರಿತು ತುಳು ಯಕ್ಷಗಾನ ತಾಳಮದ್ದಳೆ 2022 ಅಕ್ಟೋಬರ್ 8 ಮತ್ತು 15 ರಂದು 2 ಕಂತುಗಳಾಗಿ ಬೆಂಗಳೂರು ದೂರದರ್ಶನ 'ಚಂದನ' ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ನೇತೃತ್ವದಲ್ಲಿ ತೆಂಕುತಿಟ್ಟಿನ ಹೆಸರಾಂತ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ.
'ಕಾರ್ನಿಕೊದ ಸ್ವಾಮಿ ಕೊರಗಜ್ಜೆ' ಎಂಬ ಪ್ರಸಂಗ ಶೀರ್ಷಿಕೆಯೊಂದಿಗೆ ಕಿರುತೆರೆಯಲ್ಲಿ ಮೂಡಿ ಬರುವ ತಾಳಮದ್ದಳೆಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ (ಕೊರಗ ತನಿಯೆ), ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು (ಬೈರಕ್ಕೆ), ಪದ್ಮನಾಭ ಮಾಸ್ಟರ್ ತುಂಬೆ (ಈಸರೆ), ವಿಜಯಶಂಕರ ಆಳ್ವ ಮಿತ್ತಳಿಕೆ (ಪಾರೋತಿ), ಉಬರಡ್ಕ ಅವಿನಾಶ್ ಶೆಟ್ಟಿ (ಮೂಲ ಮೈಸಂದಾಯೆ) ಮತ್ತು ಪ್ರಶಾಂತ್ ಸಿ.ಕೆ. (ಚೆನ್ನೆ) ಪಾತ್ರವಹಿಸಿದ್ದಾರೆ. ಪ್ರಸಂಗ ಕರ್ತ ಹರೀಶ್ ಶೆಟ್ಟಿ ಸೂಡಾ ಅವರ ಭಾಗವತಿಕೆಗೆ ಅಕ್ಷಯ ರಾವ್ ವಿಟ್ಲ ಮತ್ತು ಶ್ರೀಶ ರಾವ್ ನೆಡ್ಲೆ ಅವರ ಹಿಮ್ಮೇಳವಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ಪ್ರಸ್ತುತಪಡಿಸುವ ಈ ಕಾರ್ಯಕ್ರಮವನ್ನು ಬೆಂಗಳೂರು ದೂರದರ್ಶನದ ಕಾರ್ಯಕ್ರಮ ಅಧಿಕಾರಿ ಎನ್. ಪಂಕಜ ನಿರ್ಮಿಸಿದ್ದಾರೆ.
ತಾಳಮದ್ದಳೆಯ ಮೊದಲ ಕಂತು ಮುಂದಿನ ಶನಿವಾರ ಬೆಳಿಗ್ಗೆ ಗಂ.9.30 ಕ್ಕೆ ಪ್ರಸಾರವಾಗುವುದು. 2 ನೇ ಕಂತು ಅಕ್ಟೋಬರ್15 ರಂದು ಅದೇ ವೇಳೆಗೆ ಪ್ರಸಾರವಾಗುವುದೆಂದು ಕರ್ನಾಟಕ ಯಕ್ಷ ಭಾರತಿಯ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment