ಬೆಂಗಳೂರು: ತಮ್ಮ ಕ್ಲಿನಿಕ್ ಗೆ ಬರುವಂತಹ ಎಲ್ಲಾ ರೋಗಿಗಳಿಗೆ ಕೇವಲ ಐದೇ ರೂಪಾಯಿ ಶುಲ್ಕವನ್ನು ಪಡೆದು ಚಿಕಿತ್ಸೆಯನ್ನು ನೀಡುತ್ತಾ ಬಂದಿರುವ ಮಂಡ್ಯದ ಖ್ಯಾತ ವೈದ್ಯ ಶಂಕರೇಗೌಡ ಅವರಿಗೆ ಸಿಎನ್ಎನ್ ನ್ಯೂಸ್18 ಸಂಸ್ಥೆಯ ವತಿಯಿಂದ ಪ್ರತೀ ಬಾರಿ ನೀಡಲಾಗುವ 'ಇಂಡಿಯನ್ ಆಫ್ ದಿ ಇಯರ್ - 2022' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಾಮಾಜಿಕ ಬದಲಾವಣೆಯ ವಿಭಾಗದಲ್ಲಿ ಡಾ.ಶಂಕರೇಗೌಡ ಅವರಿಗೆ 'ಇಂಡಿಯನ್ ಆಫ್ ದಿ ಇಯರ್ - 2022' ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಶಸ್ತಿ ನೀಡಿ ಗೌರವಿಸಿದರು.
'ನಾನು 1982ರಿಂದ ಅಭ್ಯಾಸ ಮಾಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೆ ಐದು ರೂಪಾಯಿ ಶುಲ್ಕ ಮಾತ್ರ ಪಡೆಯುತ್ತಿದ್ದೇನೆ. ನಮ್ಮಲ್ಲಿರುವ ಜ್ಞಾನವನ್ನು ಎಲ್ಲರಿಗೂ ಸಮಾನವಾಗಿ ನೀಡಬೇಕು. ಹೀಗಾಗಿ ನನ್ನ ಜ್ಞಾನವನ್ನು ನನ್ನ ಶಿಕ್ಷಣಕ್ಕೆ ಕಾರಣಕರ್ತರಾದ ನನ್ನ ಜನರಿಗೆ ಧಾರೆ ಎರೆಯಬೇಕು ಎಂಬ ಉದ್ದೇಶದಿಂದ, ತಾನು ಪದವಿ ಪಡೆದ ನಂತರ ನನ್ನ ಊರಿನಲ್ಲಿ ಅಭ್ಯಾಸ ಮಾಡಲು ಆರಂಭಿಸಿದೆ' ಎಂದು ಪ್ರಶಸ್ತಿ ಸ್ವೀಕರಿಸಿ ವೈದ್ಯ ಡಾ.ಶಂಕರೇಗೌಡ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, 5 ರೂಪಾಯಿ ಡಾಕ್ಟರ್ ಎಂದೇ ಪ್ರಖ್ಯಾತಿಗಳಿಸಿರುವ ಮಂಡ್ಯದ ವೈದ್ಯ ಶ್ರೀ ಶಂಕರೇಗೌಡ ಅವರಿಗೆ 'ಇಂಡಿಯನ್ ಆಫ್ ದಿ ಇಯರ್-2022' ಪ್ರಶಸ್ತಿ ದೊರಕಿರುವುದು ಅತ್ಯಂತ ಅಭಿನಂದನಾರ್ಹ ಸಂಗತಿ. ಗ್ರಾಮೀಣ ಭಾಗದ ಜನರ ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಅವರ ವ್ಯಕ್ತಿತ್ವವು ಎಲ್ಲರಿಗೂ ಮಾದರಿಯಾಗುವಂತದ್ದು. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಶ್ಲಾಘಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ