ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಹಾಗು ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನ ಕನ್ನಡ ಸಂಘ ಹಾಗು ಕನ್ನಡ ವಿಭಾಗ ಇದರ ಜಂಟಿ ಆಶ್ರಯದಲ್ಲಿ ʼಪಂಪ ಮತ್ತು ಪರಿಸರʼ ಕೃತಿ ಬಿಡುಗಡೆ ಸಮಾರಂಭ ಶನಿವಾರ ನಡೆಯಿತು.
ಹಂಪಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ ಎ ವಿವೇಕ್ ರೈ ಅವರು ಪುಸ್ತಕ ಬಿಡುಗಡೆ ಮಾಡಿ, ಹುಟ್ಟಿನಿಂದ ಮನುಷ್ಯ ಶ್ರೇಷ್ಠನಾಗುವುದಿಲ್ಲ ಅವನ ಜೀವನ ಅದನ್ನು ನಿರ್ಧರಿಸುತ್ತದೆ. ಲೌಕಿಕ ಸುಖಗಳು ಬೇಕು ಆದರೆ ಅದೇ ಜೀವನವಾಗಬಾರದು, ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ ಎಸ್ ಯಡಪಡಿತ್ತಾಯ, ಪಂಪ ಒಬ್ಬ ಶ್ರೇಷ್ಠ ದಾರ್ಶನಿಕ ಅವನ ʼಮಾನವ ಕುಲ ತಾನೊಂದೆ ವಲಂʼ ಎಂಬ ಮಾತು ಎಲ್ಲರಿಗೂ ಆದರ್ಶವಾಗಬೇಕು. ಏನಾದರು ಆಗು ಮೊದಲು ಮಾನವನಾಗು ಎಂಬುವುದನ್ನು ಪಂಪ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದ, ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ.ಪಿ ಎಸ್ ಯಡಪಡಿತ್ತಾಯ ಅವರನ್ನು ʼಅತ್ಯುತ್ತಮ ಕುಲಪತಿʼ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾರಣಕ್ಕಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾಲೇಜಿಗೆ ವಿದಾಯವನ್ನು ಹೇಳುತ್ತಿರುವ ಅಂತಿಮ ವರ್ಷದ ವಿಧ್ಯಾರ್ಥಿಗಳಿಗೆ ಸವಿನೆನಪಿಗಾಗಿ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಾ.ಅನಸೂಯ ರೈ, ಪ್ರಸಾರಾಂಗದ ನಿರ್ದೇಶಕ ಪ್ರೊ.ಸೋಮಣ್ಣ ಹೊಂಗಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಪಿ ಶ್ರೀನಾಥ್, ವಿವಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ, ವಿವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ರತ್ನಾವತಿ, ಪ್ರಸಾರಾಂಗದ ಸಹಾಯಕ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಹಾಗು ಕೃತಿಯ ಪ್ರಧಾನ ಸಂಪಾದಕ ಹಾಗು ವಿವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮಾಧವ ಎಂ ಕೆ ಮುಂತಾದವರು ಉಪಸ್ಥಿತರಿದ್ದರು.