ಮಂಗಳೂರು ವಿ.ವಿ ಯ ಪರೀಕ್ಷೆಗಳು ಇಂದು (ಸೋಮವಾರ) ಪ್ರಾರಂಭವಾಗಿದ್ದು, ಬಿಬಿಎ ದ್ವಿತೀಯ ಸೆಮಿಸ್ಟರ್ ಕನ್ನಡ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ನೀಡದೆ, ಒಂದನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆಯನ್ನು ನೀಡಿ, ನಿರ್ಲಕ್ಷ್ಯವಾಗಿ ವರ್ತಿಸಿರುವ ಮಂಗಳೂರು ವಿ.ವಿಯ ನಡೆಯನ್ನು ಖಂಡಿಸುತ್ತಾ, ತಪ್ಪಿತಸ್ಥರನ್ನು ಈ ಕೂಡಲೇ ಅಮಾನತುಗೊಳಿಸಿ, ತನಿಖೆ ನಡೆಸಬೇಕಾಗಿ ಅ.ಭಾ.ವಿ.ಪ ಆಗ್ರಹಿಸುತ್ತದೆ.
ಮಂಗಳೂರು ವಿ.ವಿ ಯ ಪರೀಕ್ಷೆಗಳು ಇಂದು ಪ್ರಾರಂಭವಾಗಿದ್ದು, ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ 2 ನೇ ಸೆಮಿಸ್ಟರ್ ನ ಕನ್ನಡ ಪರೀಕ್ಷೆಯು ವಿ.ವಿ ನೀಡಿದ ವೇಳಾಪಟ್ಟಿಯ ರೀತಿಯಾಗಿ ನಡೆಯಬೇಕಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ನಿರಂತವಾದ ಪರಿಶ್ರಮದಿಂದ ಇಂದಿನ ಪರೀಕ್ಷೆಗೆ ತಯಾರಾಗಿ ಬಂದಿದ್ದರು. ಆದರೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪರೀಕ್ಷಾಂಗ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರ ನಿರ್ಲಕ್ಷ್ಯದಿಂದಾಗಿ ಒಂದನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆಯನ್ನು ನೀಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯಲು ತಿಳಿಸಿ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ. ನಂತರ ವಿದ್ಯಾರ್ಥಿಗಳು ತಪ್ಪು ಪ್ರಶ್ನೆ ಪತ್ರಿಕೆಯನ್ನು ನೀಡಿರುವುದನ್ನು ಗುರುತಿಸಿ ದೂರು ನೀಡಿದ ನಂತರ, ಈ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮಂಗಳೂರು ವಿ.ವಿ ಯಿಂದ ಆದೇಶಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯವು ತನ್ನದೇ ಆದ ಘನತೆ ಗೌರವವನ್ನು ಹೊಂದಿದ್ದು, ದೇಶ ವಿದೇಶದಿಂದ ಸಾವಿರಾರು ವಿದ್ಯಾರ್ಥಿಗಳು ಈ ವಿಶ್ವ ವಿದ್ಯಾನಿಲಯಕ್ಕೆ ವಿದ್ಯಾಭ್ಯಾಸ ನಡೆಸಲು ಬರುತ್ತಿದ್ದಾರೆ. ಆದರೆ ವಿಶ್ವ ವಿದ್ಯಾನಿಲಯವು ಭ್ರಷ್ಟಾಚಾರದ ವಿಚಾರ, ಲೈಂಗಿಕ ದೌರ್ಜನ್ಯದ ವಿಚಾರ, ಮೌಲ್ಯ ಮಾಪನದಲ್ಲಿ ವಿಳಂಬ ಈ ರೀತಿಯ ವಿಚಾರಗಳಿಗೆ ಹೆಸರಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಈ ರೀತಿಯಾಗಿ ಪರೀಕ್ಷೆಯ ವಿಚಾರದಲ್ಲು ನಿರ್ಲಕ್ಷ್ಯವಾಗಿ ವರ್ತಿಸಿರುವುದನ್ನು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವುದನ್ನು ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ವಿಶ್ವ ವಿದ್ಯಾನಿಲಯವು ಈ ರೀತಿಯ ನಿರ್ಲಕ್ಷ್ಯತನವನ್ನು ತೋರಿರುವ ವ್ಯಕ್ತಿಗಳನ್ನು ಈ ಕೂಡಲೇ ಅಮಾನತುಗೊಳಿಸಿ, ತನಿಖೆಗೆ ಒಳಪಡಿಸ ಬೇಕಾಗಿ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.
-ಮಣಿಕಂಠ ಕಳಸ
ರಾಜ್ಯ ಕಾರ್ಯದರ್ಶಿ, ಅ.ಭಾ.ವಿ.ಪ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ