ನಿಟ್ಟೆ: 'ಪ್ರತಿಯೋರ್ವನ ಜೀವನಾನುಭವವೂ ಇನ್ನೋರ್ವನಿಗೆ ಕಲಿಕೆಯ ಪಾಠವಾಗಬಹುದು. ಜೀವನದ ಕಲಿಕೆಯನ್ನು ನಮ್ಮ ನೆನಪಿನ ಹೊತ್ತಗೆಯನ್ನಾಗಿಸುವುದು ಸುಲಭದ ಕೆಲಸವಲ್ಲ' ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್ ಎನ್ ಚಿಪ್ಳೂಣ್ಕರ್ ಅಭಿಪ್ರಾಯಪಟ್ಟರು.
ವಿವಿಧ ಕಾರ್ಫೋರೇಟ್ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಕೆಮ್ಮಣ್ಣು ಬಾಲಕೃಷ್ಣ ರಾವ್ ಅವರು ಬರೆದ 'ಇನ್ವೆಸ್ಟ್ ಇನ್ ಯುವರ್ಸೆಲ್ಫ್' ಎಂಬ ಪುಸ್ತಕವನ್ನು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಸೆ.೧೨ ರಂದು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 'ಬಾಲಕೃಷ್ಣ ರಾವ್ ಅವರ ವೃತ್ತಿ ಜೀವನದ ಹಲವು ಮಜಲುಗಳ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಅಣಿಮಾಡುವ ಒಂದು ಉತ್ತಮ ವೇದಿಕೆಯನ್ನು ಒದಗಿಸಲು ಕಾಲೇಜು ಉತ್ಸುಕವಾಗಿದೆ' ಎಂದರು.
ಜಸ್ಟೀಸ್ ಕೆ.ಎಸ್. ಹೆಗ್ಡೆ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರೊಫೆಸರ್ ಡಾ. ಸುಧೀರ್ ರಾಜ್ ಕೆ ಅವರು ಬಿಡುಗಡೆಗೊಂಡ ಪುಸ್ತಕದ ಬಗೆಗೆ ಹಾಗೂ ಲೇಖಕರ ಆಶಯವನ್ನು ವಿವರಿಸಿದರು.
ಕೆಮ್ಮಣ್ಣು ಬಾಲಕೃಷ್ಣ ರಾವ್ ಅವರು ತಮ್ಮ ವೃತ್ತಿ ಬದುಕಿನ ಬಗೆಗೆ ಹಾಗೂ ಅದರಲ್ಲಿ ಬಂದ ಕೆಲವಾರು ಸವಾಲುಗಳ ಬಗೆಗೆ ಮಾತನಾಡಿದರು. ತಮ್ಮ ವೃತ್ತಿ ಜೀವನದ ಕೆಲವಾರು ಘಟನೆಗಳು ತಮ್ಮನ್ನ ಈ ಪುಸ್ತಕ/ ಜೀವನಾನುಭವವನ್ನು ಮುದ್ರಿಸುವಂತೆ ಪ್ರೇರೇಪಿಸಿತು ಎಂದರು.
ವೇದಿಕೆಯಲ್ಲಿ ನಿಟ್ಟೆ ಕ್ಯಾಂಪಸ್ ನ ಮೈಂಟೆನೆನ್ಸ್ & ಡೆವಲ್ಮೆಂಟ್ ನ ನಿರ್ದೇಶಕ ಶ್ರೀ ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು.
ಲೇಖಕರ ಸಹೋದರ ಶ್ರೀ ಸತೀಶ್ ಕುಮಾರ್ ಕೆಮ್ಮಣ್ಣು ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ರಘನಂದನ್ ಕೆ ಆರ್ ಲೇಖಕರನ್ನು ಪರಿಚಯಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಗ್ರಂಥಾಲಯ ವಿಭಾಗದ ಸತೀಶ್ ವಂದಿಸಿದರು. ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ಕುಮಾರ್ ಕೆ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ