ಸಕಲ ಕಲೆಗಳಿಗೂ ಮಾತೃ ಸದೃಶವಾಗಿದೆ ಗಮಕ ಕಲೆ: ವಿಶಾಲಾಕ್ಷ ಪುತ್ರಕಳ

Upayuktha
0

ಕುಂಬಳೆ: "ಪ್ರಾಚೀನ ಕಲೆಗಳಿಗೆಲ್ಲ ಮಾತೃಸದೃಶವಾಗಿರುವ ಗಮಕ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ಕಾರ್ಯವನ್ನು ಗಮಕ ಕಲಾಪರಿಷತ್ತಿನ ಕೇರಳ ಗಡಿನಾಡ ಘಟಕವು ನಿರಂತರವಾಗಿ ಮಾಡುತ್ತಲೇ ಇದೆ" ಎಂಬುದಾಗಿ ನಿವೃತ್ತ ಶಿಕ್ಷಕ ಶ್ರೀ ವಿಶಾಲಾಕ್ಷ ಪುತ್ರಕಳ ಅಭಿಪ್ರಾಯ ಪಟ್ಟರು.  


ಆದಿ ಗಮಕಿಗಳಾದ ಕುಶ ಲವರ ಜನ್ಮ ಮಾಸವಾಗಿರುವ ಶ್ರಾವಣ ಮಾಸದಲ್ಲಿ ಕರ್ನಾಟಕ ಗಮಕ ಕಲಾಪರಿಷತ್ತು (ರಿ) ಮತ್ತು ಸಿರಿಗನ್ನಡ ವೇದಿಕೆ (ರಿ) ಎಂಬ ಉಭಯ ಸಂಸ್ಥೆಗಳ ಕೇರಳ ಗಡಿನಾಡ ಘಟಕಗಳ ಆಶ್ರಯದಲ್ಲಿ ಕಾಸರಗೋಡಿನ ವಿವಿಧ ಕೇಂದ್ರಗಳಲ್ಲಿ ರಾಮಾಯಣ ಕಾವ್ಯದ ವಾಚನ-ವ್ಯಾಖ್ಯಾನಗಳ ಸರಣಿ ಕಾರ್ಯಕ್ರಮಗಳನ್ನು ದಶಕಗಳಿಂದ ನಡೆಸಿಕೊಂಡು ಬರುತ್ತಿರುವುದು ಸಂಪ್ರದಾಯವಾಗಿದೆ.  


ಇತ್ತೀಚೆಗೆ ಕುಂಬಳೆ ಸಮೀಪದ ನಾರಾಯಣಮಂಗಲದಲ್ಲಿ ಶಿಕ್ಷಣತಜ್ಞ, ಸಾಹಿತಿ ವಿ.ಬಿ. ಕುಳಮರ್ವ ಅವರ "ಶ್ರೀನಿಧಿ" ಮನೆಯಲ್ಲಿ ಜರಗಿದ ಈ ವರ್ಷದ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಾ ಅವರು ಈ ರೀತಿ ಅಭಿಪ್ರಾಯ ಪಟ್ಟರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಸರಗೋಡಿನ 'ಸೀತಮ್ಮ ಪುರುಷ ಕನ್ನಡ ಭವನ ಮತ್ತು ಗ್ರಂಥಾಲಯ'ದ ಸ್ಥಾಪಕಾಧ್ಯಕ್ಷರಾದ ಶ್ರೀ ವಾಮನ ರಾವ್ ಬೇಕಲ್ ಅವರು "ವಿ.ಬಿ.ಕುಳಮರ್ವ ಅವರ ಮನೆಯೇ ಒಂದು ಸಾಹಿತ್ಯ ಕೇಂದ್ರ.ಅಲ್ಲಿ ಜರಗುವ ಯಾವುದೇ ಕಾರ್ಯಕ್ರಮವಾದರೂ ಸಮಾಜಕ್ಕೆ ಮಾದರಿಯಾಗಿರುತ್ತದೆ" ಎಂದು ಅಭಿಪ್ರಾಯ ಪಟ್ಟರು.


ಸಮಾರಂಭದ ಪ್ರಾಯೋಜಕರಾದ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಶ್ರೀಮತಿ ಲಲಿತಾಲಕ್ಷ್ಮೀ ಕುಳಮರ್ವ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.  


ಈ ಸಂದರ್ಭದಲ್ಲಿ ಜೈಮಿನಿ ಭಾರತ ಮಹಾಕಾವ್ಯದಿಂದಾಯ್ದ "ಸೀತಾ ಪರಿತ್ಯಾಗ ಮತ್ತು ಕುಶಲವರ ಜನನ" ಎಂಬ ಭಾಗವನ್ನು ಮಾದರಿ ಕೃಷಿಕ ಗಮಕಿ ಶ್ರೀ ಗೋಪಾಲಕೃಷ್ಣ ಭಟ್ ಕೊಚ್ಚಿ ಅವರು ಸುಶ್ರಾವ್ಯವಾಗಿ ವಾಚನ ಗೈದರು. ನಿವೃತ್ತ ಶಿಕ್ಷಕ ,ಸಾಹಿತಿ ಶ್ರೀ ಶ್ರೀಹರಿ ಭಟ್ ಪೆಲ್ತಾಜೆ  ಅವರು ಮನೋಜ್ಞವಾಗಿ ವ್ಯಾಖ್ಯಾನ ಗೈದರು. 


ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಶ್ರೀ ವಿ.ಬಿ.ಕುಳಮರ್ವ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸುತ್ತಾ "ಗಮಕ ಶ್ರಾವಣ" ಸರಣಿ ಕಾರ್ಯಕ್ರಮದ ಔಚಿತ್ಯವನ್ನು ವಿಶದಪಡಿಸಿದರು. ಗಮಕ ಪರಿಷತ್ತಿನ ಅಧ್ಯಕ್ಷ ಶ್ರೀ ತೆಕ್ಕೆಕೆರೆ ಶಂಕರನಾರಾಯಣ ಭಟ್ಟರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಒಕ್ಟೋಬರ್ ತಿಂಗಳ 8 ಮತ್ತು 9 ರಂದು ಕಾಸರಗೋಡಿನ ಹವ್ಯಕ ಸಭಾಭವನದಲ್ಲಿ ಜರಗಲಿರುವ ಮಹತ್ವಪೂರ್ಣವಾದ "ಕಲೋಪಾಸನಾ ಸಮ್ಮೇಳನದ" ಕುರಿತು ಮಾಹಿತಿಯನ್ನಿತ್ತರು.


ಕುಮಾರಿ ಶ್ರದ್ಧಾ ಭಟ್ ನಾಯರ್ಪಳ್ಳ ಅವರು ಶ್ರೀ ವಿ.ಬಿ.ಕುಳಮರ್ವ ವಿರಚಿತ ಗಮಕ ಗೀತೆಯನ್ನು ಹಾಡುವ ಮೂಲಕ ಪ್ರಾರ್ಥನೆ ಗೈದರು. ಗಮಕ ಕಲಾ ಪರಿಷತ್ತಿನ ಜತೆ ಕಾರ್ಯದರ್ಶಿ ಶ್ರೀ ಪಿ.ವಿ. ಶಿವರಾಮ ಚಿತ್ತಾರಿ ಅವರು ವಂದನಾರ್ಪಣೆ ಗೈದರು. ಶ್ರೀ ಶಶಾಂಕ ಕುಳಮರ್ವ ನಿರ್ವಹಣೆಗೈದರು. ಶ್ರೀ ವಿ.ಬಿ. ಕುಳಮರ್ವ  ಅವರು ಅತಿಥಿಗಳಿಗೆ ಪುಸ್ತಕಗಳನ್ನು ಸಮರ್ಪಿಸಿ ಕಲಾವಿದರಿಗೆ ಶಾಲು ಹೊದೆಸಿ ಗೌರವಿಸಿದರು.  


ಕಣ್ಣೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಬಿ.ಎ. ಹಾಗೂ ಎಂ.ಎ. ತರಗತಿಗಳಲ್ಲಿ ಪ್ರಥಮ ರೇಂಕ್ ಗಳಿಸಿದ ಬಹುಮುಖ ಪ್ರತಿಭಾವಂತೆ "ಗಮಕ ಕಲಾಧರೆ" ಕುಮಾರಿ ಶ್ರದ್ಧಾ ಭಟ್ ನಾಯರ್ಪಳ್ಳ ಅವರನ್ನು ವಿ.ಬಿ.ಕುಳಮರ್ವ ದಂಪತಿ ಚಿನ್ನದ ಬೆಂಡೋಲೆಗಳನ್ನಿತ್ತು ಗೌರವಿಸಿ ಅಭಿನಂದಿಸಿ ಉಜ್ವಲ ಭವಿಷ್ಯವನ್ನು ಹಾರೈಸಿದರು. 

ಮನೆಯಲ್ಲಿ ಜರಗಿದ ಈ ಸಮಾರಂಭದಲ್ಲಿ  ಗಣ್ಯರೂ ಕಲಾವಿದರೂ ಗಮಕ ಕಲಾಸಕ್ತರೂ ನೂರಾರು ಸಂಖ್ಯೆಯಲ್ಲಿ  ಭಾಗವಹಿಸಿದುದು ಇತಿಹಾಸವೇ ಸರಿ.  

ವರದಿ:- ಶ್ರೀ ತೆಕ್ಕೆಕೆರೆ ಶಂಕರನಾರಾಯಣ ಭಟ್


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top