ವಿದ್ವಾನ್ ಆರ್.ಕೆ. ಪ್ರಸನ್ನಕುಮಾರ್ ರವರಿಗೆ ಶ್ರೀನಿಧಿ ಸಂಗೀತ ಕಲಾನಿಧಿ ಬಿರುದು ಪ್ರದಾನ ನಾಳೆ

Upayuktha
0

ಬೆಂಗಳೂರು: ಗಾಯನ ಪ್ರವೀಣ ವಿದ್ವಾನ್ ಆರ್.ಕೆ. ಪ್ರಸನ್ನಕುಮಾರ್ ರವರಿಗೆ ಶ್ರೀನಿಧಿ ಸಂಗೀತ ಕಲಾನಿಧಿ ಬಿರುದು ಪ್ರದಾನ ಕಾರ್ಯಕ್ರಮ ಬುಧವಾರ ಶರನ್ನವರಾತ್ರಿ ಪ್ರಯುಕ್ತ ಕೋಣನಕುಂಟೆಯ ಶ್ರೀನಿಧಿ ಶ್ರೀನಿವಾಸ ದೇವಾಲಯದಲ್ಲಿ ಸೆ.28 ರಂದು ಬುಧವಾರ ನಡೆಯಲಿದೆ.


ಹಾಸನ ಜಿಲ್ಲೆ ಸಂಗೀತದ ತವರೂರಾದ, ಸಂಗೀತ ಗ್ರಾಮವೆಂದೇ ಪ್ರಸಿದ್ಧಿ ಪಡೆದಿರುವ ರುದ್ರಪಟ್ಟಣದ ಪ್ರಸಿದ್ಧ ಸಂಗೀತ ಮನೆತನದಿಂದ ಬಂದಿರುವ ವಿದ್ವಾನ್ ಶ್ರೀ ಆರ್.ಕೆ.ಪ್ರಸನ್ನ ಕುಮಾರ್‍ರವರು ಪ್ರಖ್ಯಾತ ವೀಣಾವಾದಕ, 24 ತಂತಿಗಳ ವೀಣೆ ರಚಿಸಿದ್ದ “ವೈಣಿಕ ಪ್ರವೀಣ” ಶ್ರೀ ಆರ್.ಎಸ್.ಕೇಶವಮೂರ್ತಿರವರ ಸುಪುತ್ರರು. ಅನೇಕ ತಲೆಮಾರುಗಳಿಂದ ಸಂಗೀತಗಾರರ ವಂಶದಿಂದ ಬಂದವರು. ಸಮೃದ್ಧವಾದ ಪ್ರತಿಭೆಯನ್ನು ಹೊಂದಿರುವ ಶ್ರೀಯುತರು ತಮ್ಮ ಅದ್ಭುತ ಸಾಧನೆಯ ಮೂಲಕ ಉತ್ತಮ ಗಾಯಕರಲ್ಲೊಬ್ಬರೆಂದು ಪ್ರಸಿದ್ಧಿಯಾಗಿ, ಮೃದಂಗವನ್ನು ನುಡಿಸುವುದರಲ್ಲೂ ಪ್ರಾವೀಣ್ಯತೆ ಹೊಂದಿದ್ದಾರೆ. 


ಪುಟ್ಟಪರ್ತಿಯ ಪ್ರಶಾಂತಿ ನಿಲಯಂನಲ್ಲಿ 30,000 ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ಸತ್ಯಸಾಯಿಬಾಬಾರವರು ಗಾಯನ ಕಾರ್ಯಕ್ರಮವನ್ನು ಆನಂದದಿಂದ ಆಲಿಸಿ ಚಿನ್ನದ ಸರವನ್ನು ನೀಡಿ ಆಶೀರ್ವದಿಸಿರುವುದು ಇವರ ವಿದ್ವತ್ತಿಗೆ ಸಾಕ್ಷಿ. ಶ್ರೀ ಆರ್.ಕೆ. ಪ್ರಸನ್ನಕುಮಾರ್ ರವರು ಶ್ರೀನಿಧಿ ಶ್ರೀನಿವಾಸ ದೇವಾಸ್ಥಾನದಲ್ಲಿ ನಿರಂತರ 23 ವರ್ಷಗಳಿಂದ ವೈಕುಂಠ ಏಕಾದಶಿಯಂದು ಸಂಗೀತ ಸೇವೆ ನಡೆಸುತ್ತಿರುವುದು ಒಂದು ಹೆಗ್ಗಳಿಕೆಯೇ ಸರಿ.


ಪತ್ನಿ ಶ್ರೀಮತಿ ಪೂರ್ಣಿಮ ಪ್ರಸನ್ನಕುಮಾರ್ ಹಾಗೂ ಪುತ್ರರತ್ನರಾದ ‘ರುದ್ರಪಟ್ಟಣ ವೀಣಾ ಬ್ರದರ್ಸ್’ ಎಂದೇ ಪ್ರಸಿದ್ಧರಾಗಿರುವ ಆರ್.ಪಿ. ಪ್ರಶಾಂತ್ ಮತ್ತು ಆರ್.ಪಿ.ಪ್ರಮೋದ್‍ರವರುಗಳ ಸಂಗೀತಮಯ ಕಲಾ ಕುಟುಂಬ. ಭಾರತದಾದ್ಯಂತವಲ್ಲದೆ ಯು.ಎಸ್.ಎ., ಯು.ಕೆ. ಮೊದಲಾದ ವಿದೇಶಗಳಲ್ಲೂ ತಮ್ಮ ಗಾಯನ ಕಾರ್ಯಕ್ರಮ ನೀಡಿ ಜನಮೆಚ್ಚುಗೆಗೆ ಪಾತ್ರರಾಗಿರುವ ಹೆಮ್ಮೆಯ ಕಲಾವಿದ.


ಇವರ  ಅಪ್ರತಿಮ ಕಲಾಕೈಂಕರ್ಯಕ್ಕೆ ಒಲಿದ ಪ್ರಶಸ್ತಿಗಳ ಸರಮಾಲೆ ಬಹಳಷ್ಟಿವೆ. ವಿವಿಧ ಮಠ-ಮಂದಿರಗಳಿಂದ ಸುವರ್ಣ ಕರ್ನಾಟಕ ಚೇತನ, ಲಯವಾದ್ಯ ಗಂಭೀರ, ಮೃದಂಗವಾದನ ಚತುರ, ರಾಗಸುಧಾಲಯ ಪುರಸ್ಕಾರ, ಗಾನಕಲಾ ಭಾಸ್ಕರ ಮತ್ತು ಶ್ರೀ ಕಂಚಿ ಕಾಮಕೋಟಿ ಪೀಠಂನ ಆಸ್ಥಾನ ವಿದ್ವಾನ್ ಗೌರವಕ್ಕೆ ಪಾತ್ರರಾಗಿದ್ದಾರೆ. 


ಇವರ ಮುಕುಟಕ್ಕೆ ಮತ್ತೊಂದು ಹೊನ್ನಗರಿಯಾಗಿ ಕೋಣಕುಂಟೆ ಚುಂಚಘಟ್ಟ ಮುಖ್ಯ ರಸ್ತೆಯಲ್ಲಿರುವ ಶ್ರೀನಿಧಿ ಶ್ರೀನಿವಾಸ ದೇವಾಸ್ಥಾನದಲ್ಲಿ ತಿರುಮಲಾಧೀಶ ಶ್ರೀ ಶ್ರೀನಿಧಿ ಶ್ರೀನಿವಾಸ, ಶ್ರೀ ಭೂವರಾಹ, ಶ್ರೀ ಹಯಗ್ರೀವ, ಶ್ರೀ ಮಹಾಲಕ್ಷ್ಮೀ ಹಾಗೂ 18 ಅಡಿ ಎತ್ತರದ ಭವ್ಯವಾದ ಶ್ರೀ ಮುಖ್ಯಪ್ರಾಣ ದೇವರ (ಆಂಜನೇಯ) ದಿವ್ಯ ಸನ್ನಿಧಾನದಲ್ಲಿ ಶ್ರೀ ಶರನ್ನವರಾತ್ರಿ  ಮಹೋತ್ಸವದ ಶುಭ ಸಂದರ್ಭದಲ್ಲಿ ಭಕ್ತ-ವಿದ್ವಜ್ಜನರ ಸಮಕ್ಷಮದಲ್ಲಿ ಶ್ರೀ ಶ್ರೀನಿಧಿ ಶ್ರೀನಿವಾಸ ದೇವಸ್ಥಾನದ ವತಿಯಿಂದ ‘ಶ್ರೀ ಶ್ರೀನಿಧಿ ಸಂಗೀತ ಕಲಾನಿಧಿ’ ಎಂಬ ಬಿರುದು ನೀಡಿ ಗೌರವಿಸುವ ಸಮಾರಂಭವನ್ನು ಇದೇ ಸೆ. 28 ಬುಧವಾರ ಸಂಜೆ 6.00 ಗಂಟೆಗೆ ಏರ್ಪಡಿಸಲಾಗಿದೆ. ಮುಖ್ಯ ಅಥಿಗಳಾಗಿ ಕೋಣನಕುಂಟೆ ಶ್ರೀ ಗುರುರಾಘವೇಂದ್ರ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ವೇದಮೂರ್ತಿ || ಪಿ.ಎನ್. ಫಣಿಕುಮಾರ್ ಆಗಮಿಸಿಲಿದ್ದಾರೆ ಎಂದು ದೇವಸ್ಥಾನದ  ಧರ್ಮದರ್ಶಿ ಡಾ.ಕೆ.ಎಸ್.ಸಮೀರ ಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top