ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಆರೋಗ್ಯ ವಿಮೆಯ ಗಂಭೀರ ಅನಾರೋಗ್ಯ ನಿಧಿ ಕಾರ್ಯಕ್ರಮದ ಉದ್ಘಾಟನೆ

Upayuktha
0

ಕೊಲ್ಕತ್ತಾದ ನೇಶನಲ್ ಇನ್ಸೂರೆನ್ಸ್ ಕಂಪೆನಿಯ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕಿ ಸುಚಿತಾ ಗುಪ್ತ ಆರೋಗ್ಯ ವಿಮೆಯ ಗಂಭೀರ ಆನಾರೋಗ್ಯ ನಿಧಿ ವಿತರಿಸಿದರು.


ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ ಮತ್ತು ಮಾರ್ಗದರ್ಶನದಲ್ಲಿ ಆರೋಗ್ಯ, ಶಿಕ್ಷಣ, ಧಾರ್ಮಿಕ, ಕೃಷಿ, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಆರ್ಥಿಕ ಸಬಲೀಕರಣಕ್ಕಾಗಿ ಮಾಡುತ್ತಿರುವ ಸೇವೆ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಕೊಲ್ಕತ್ತಾದ ನೇಶನಲ್ ಇನ್ಸೂರೆನ್ಸ್ ಕಂಪೆನಿಯ ಅದ್ಯಕ್ಷರು ಮತ್ತು ಆಡಳಿತ ನಿರ್ದೇಶಕಿ ಸುಚಿತಾ ಗುಪ್ತ ಹೇಳಿದರು.


ಅವರು ಗುರುವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಆರೋಗ್ಯ ವಿಮೆಯ ಗಂಭೀರ ಆನಾರೋಗ್ಯ ನಿಧಿ ವಿತರಿಸಿ ಮಾತನಾಡಿದರು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾನವೀಯತೆಯಿಂದ ಮಾಡುತ್ತಿರುವ ಬಹುಮುಖಿ ಸಮಾಜಸೇವೆ ಹಾಗೂ ಧರ್ಮಸ್ಥಳದ ಭವ್ಯ ಇತಿಹಾಸ, ಹಿನ್ನೆಲೆ ಹಾಗೂ ಪರಂಪರೆ ಬಗ್ಯೆ ತಾನು ಕೇಳಿದ್ದರೂ ಸಮಾರಂಭದ ಮೂಲಕ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಯಿತು ಎಂದರು.


ನೇಶನಲ್ ಇನ್ಸೂರೆನ್ಸ್ ಕಂಪೆನಿಯಿಂದ ಆರೋಗ್ಯ ವಿಮೆಗೆ ಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.


ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡ ಹೆಗ್ಗಡೆಯವರನ್ನು ಅವರು ಅಭಿನಂದಿಸಿ ಶುಭ ಹಾರೈಸಿದರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಬೇಕು. ವಿಮಾ ಸೌಲಭ್ಯದ ಬಗ್ಯೆ ಸವಿವರ ಮಾಹಿತಿ, ತಿಳುವಳಿಕೆ ಎಲ್ಲರಿಗೂ ಇಂದು ಅನಿವಾರ್ಯವಾಗಿದೆ.


ಅನಿರೀಕ್ಷಿತ ಆಪತ್ತು ಬಂದಾಗ, ಆರೋಗ್ಯದಲ್ಲಿ ವ್ಯತ್ಯಾಯವಾದಾಗ ವಿಮೆ ನಮಗೆ ರಕ್ಷಣೆ ಮತ್ತು ಭರವಸೆಯನ್ನು ನೀಡುತ್ತದೆ. ಆಧುನಿಕ ವೈದ್ಯಕೀಯ ಸವಲತ್ತುಗಳ ಸದುಪಯೋಗ ಪಡೆದು, ವಿಮೆ ಮಾಡುವುದರ ಮೂಲಕ ನಮ್ಮನ್ನು ರಕ್ಷಣೆ, ಮಾಡಿಕೊಳ್ಳಬಹುದು. ವಿಮೆಯ ವ್ಯವಹಾರದಲ್ಲಿ ಲಾಭ ಮುಖ್ಯ ಅಲ್ಲ ಸೇವಾ ಮನೋಭಾವವೇ ಮುಖ್ಯವಾಗಿದೆ.


ಮಳೆ ಹಾಗೂ ಬಿಸಿಲಿನಿಂದ ಕೊಡೆ ನಮಗೆ ರಕ್ಷಣೆ ನೀಡುವಂತೆ ವಿಮೆ ಕೂಡಾ ಆಪತ್ತು ಬಂದಾಗ, ಅನಾರೋಗ್ಯ ಪೀಡಿತರಾದಾಗ ರಕ್ಷಣೆ ನೀಡುತ್ತದೆ. ಆದುದರಿಂದ ಸಂಕೋಚವಿಲ್ಲದೆ ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಬೇಕು ಎಂದು ಅವರು ಸಲಹೆ ನೀಡಿದರು.


ಕೊರೊನಾ ಸಂದರ್ಭದಲ್ಲಿ ನಾಲ್ಕು ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್ ಮೆಶಿನ್ ನೀಡಿದ್ದು, ಈ ವರ್ಷ ಇನ್ನೂ ಮೂರು ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್ ಮೆಶಿನ್ ನೀಡಲಾಗುವುದು.


ಆರೋಗ್ಯ ವಿಮೆ ಮಾಡಿಸಿದವರಿಗೆ ಉಜಿರೆಯಲ್ಲಿ ಮತ್ತು ಧಾರವಾಡದಲ್ಲಿ ಇರುವ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ 461 ಆಸ್ಪತ್ರೆಗಳಲ್ಲಿ ಆರೋಗ್ಯ ವಿಮೆ ಮಾಡಿಸಿದವರಿಗೆ ಚಿಕಿತ್ಸೆ ಪಡೆಯಲು ಅವಕಾಶವಿದ್ದು 33 ಜಿಲ್ಲೆಗಳಲ್ಲಿ ಆರೋಗ್ಯ ವಿಮೆ ಈಗಾಗಲೆ ಜಾರಿಯಲ್ಲಿದೆ. ಎರಡೂವರೆ ಕೋಟಿ ರೂ. ಮೊತ್ತವನ್ನು ಗಂಭೀರ ಅನಾರೋಗ್ಯ ನಿಧಿಗಾಗಿ ಮೀಸಲಿಡಲಾಗಿದೆ. ಸಂಪೂರ್ಣ ಸುರಕ್ಷಾ ವಿಮೆಗೆ 8,74,130 ಮಂದಿ ಹಾಗೂ ಆರೋಗ್ಯ ವಿಮೆಗೆ 49,25,377 ಮಂದಿ ಸೇರಿದಂತೆ ಒಟ್ಟು 57,99,507 ಮಂದಿ ಸದಸ್ಯರು ಈಗಾಗಲೆ ನೋಂದಾವಣೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.


ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿ, ನೇಶನಲ್ ಇನ್ಸೂರೆನ್ಸ್ ಕಂಪೆನಿ, ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿ ಮತ್ತು ಯೂನಿವರ್ಸಲ್ ಸ್ಯಾಂಪೊ ಇನ್ಸೂರೆನ್ಸ್ ಕಂಪೆನಿ ಎಂಬ ನಾಲ್ಕು ವಿಮಾ ಕಂಪೆಗಳು  ಆರೋಗ್ಯ ವಿಮಗೆ ಸಹಯೋಗ ನೀಡಲಿವೆ ಎಂದು ಅವರು ತಿಳಿಸಿದರು.


ನೇಶನಲ್ ಇನ್ಸೂರೆನ್ಸ್ ಕಂಪೆನಿಯ ಮಹಾಪ್ರಬಂಧಕ ಪೀಟರ್ ಚಿತ್ತರಂಜನ್, ಡಿ.ಜಿ.ಎಂ. ಕೇಶವ ಮೋಹನ್ ಮತ್ತು ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ಪ್ರಬಂಧಕಿ ಪುಷ್ಪಲತಾ, ಕೆ.ಪಿ. ಉಪಸ್ಥಿತರಿದ್ದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಸ್ವಾಗತಿಸಿದರು. ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಪುರುಶೋತ್ತಮ ಪಿ.ಕೆ. ಧನ್ಯವಾದವಿತ್ತರು.


ಮುಖ್ಯಾಂಶಗಳು:

• ಕಳೆದ ವರ್ಷ ನಾಲ್ಕು ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್ ಮೆಶಿನ್ ನೀಡಿದ್ದು, ಈ ವರ್ಷ ಇನ್ನೂ ಮೂರು ಆಸ್ಪತ್ರೆಗಳಿಗೆ ಸಿ.ಟಿ. ಸ್ಕ್ಯಾನ್ ಮೆಶಿನ್ ಕೊಡುಗೆಯಾಗಿ ನೀಡಲಾಗುವುದು.

• ಆಸ್ಪತ್ರೆ ಮತ್ತು ಜೈಲಿನಿಂದ ಹೊರಗೆ ಬಿಡಗಡೆಯಾಗುವವರಿಗೆ “ಹೋಗಿ ಬನ್ನಿ” ಎಂದು ಹೇಳಬಾರದು.

• ಕೊಡೆಯು ನಮಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡುವಂತೆ ಆರೋಗ್ಯ ವಿಮೆಯು ಆರೋಗ್ಯದಲ್ಲಿ ವ್ಯತ್ಯಯವಾದಾಗ ಸುರಕ್ಷೆ ಮತ್ತು ಭದ್ರತೆ ನೀಡುತ್ತದೆ.

-ಡಿ. ವೀರೇಂದ್ರ ಹೆಗ್ಗಡೆ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top