ನಂತೂರು: ಸವಾಲುಗಳನ್ನು ಎದುರಿಸಿಕೊಂಡು, ಹೆಜ್ಜೆಹೆಜ್ಜೆಗೂ ಸಾಧನೆಗಳನ್ನು ಮಾಡುತ್ತ ಜೀವನಪರ್ಯಂತ ಸಾಗಿದ ಭಾರತರತ್ನ ಡಾ. ಸರ್ ಎಂ.ವಿಶ್ವೇಶ್ವರಯ್ಯ ಜಗತ್ತಿಗೇ ಆದರ್ಶವಾಗಿದ್ದಾರೆ. ಪ್ರತಿ ಹೆಜ್ಜೆಗಳಲ್ಲಿ ಯಶಸ್ವಿಯಾದ ಅವರು ಕಳಂಕರಹಿತರಾಗಿ ಶುದ್ಧಹಸ್ತರಾಗಿ ಪ್ರಾಮಾಣಿಕರಾಗಿ ಜೀವನ ನಡೆಸಿದ್ದರು. ಅವರನ್ನು ಇಂದಿನ ಮಕ್ಕಳು ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಉದಯಶಂಕರ್ ನೀರ್ಪಾಜೆ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಸಹಯೋಗದಲ್ಲಿ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ನಡೆದ ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಶ್ರೀನಾಥ್ ಎಂ.ಪಿ. ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ವಿಶ್ವೇಶ್ವರಯ್ಯನವರ ಸಾಧನೆ ಮಕ್ಕಳಿಗೆ ದಾರಿದೀಪವಾಗಬೇಕು. ಈ ಕಾರ್ಯಕ್ರಮದ ಫಲವಾಗಿ ವಿದ್ಯಾರ್ಥಿಗಳಲ್ಲಿ ಅವರಂತೆ ಸಾಧನೆ ಮಾಡುವ ತುಡಿತ, ಆಸೆ ಚಿಗುರಲಿ ಎಂದು ಆಶಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಮಂಗಳೂರು ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಕಟೀಲು ಅವರು ಮಾತನಾಡಿ, ವಿಶ್ವೇಶ್ವರಯ್ಯನವರು ದಿವಾನರಾಗಿ, ಎಂಜಿನಿಯರರಾಗಿ, ಕನ್ನಡ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿ, ಮೈಸೂರು ವಿವಿ ಆರಂಭ ಮತ್ತು ಅನೇಕ ಯೋಜನೆಗಳನ್ನು ದೇಶಕ್ಕೆ ಜಗತ್ತಿಗೆ ನೀಡಿದ್ದಾರೆ. ಬಡತನವನ್ನು ಮೆಟ್ಟಿನಿಂದು, ಅಪಾರ ಸಾಧನೆಗಳನ್ನು ಮಾಡಿದ ಅವರು ಮಹಾಪುರುಷರಾಗಿದ್ದಾರೆ ಎಂದು ಹೇಳಿದರು.
ನಂತೂರು ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್ ದಾಸ್ ಎ., ಕಸಾಪ ಕಾರ್ಯದರ್ಶಿ ವಿನಯ ಆಚಾರ್ಯ ಉಪಸ್ಥಿತರಿದ್ದರು.
ನಂತೂರು ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಂಗಾರತ್ನ ಸ್ವಾಗತಿಸಿ, ಪ್ರಸ್ತಾಪಿಸಿದರು. ಉಪನ್ಯಾಸಕ ಕಾರ್ತಿಕ್ ಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ್ ಗಾಂವ್ಕರ್ ಆಶಯಗೀತೆ ಹಾಡಿದರು. ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಗಾಯತ್ರಿ ಶೆಣೈ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ