ಮುಳಿಯ ಕೃಷಿಕೋದ್ಯಮ- ವಿಚಾರ ಸಂಕಿರಣ
ಪುತ್ತೂರು: ಕೃಷಿಯನ್ನು ಉದ್ಯಮದಂತೆ ಉದ್ಯಮವನ್ನು ಕೃಷಿಯಂತೆ ನಡೆಸುವಂತಾಗಬೇಕು ಎನ್ನುವುದೇ ಕೃಷಿಕೋದ್ಯಮ ಕಾರ್ಯಕ್ರಮದ ಉದ್ದೇಶ ಎಂದು ಮುಳಿಯ ಪ್ರತಿಷ್ಠಾನದ ಕೇಶವ ಪ್ರಸಾದ್ ಮುಳಿಯ ಹೇಳಿದರು.
ಮುಳಿಯ ಪ್ರತಿಷ್ಠಾನ ಸಹಯೋಗದಲ್ಲಿ ಸೆ. 20ರಂದು ಪುತ್ತೂರು ಮುಳಿಯ ಜ್ಯುವೆಲ್ಸ್ ಶೋರೂಮ್ ಮೇಲ್ಗಡೆಯ ಅಪರಂಜಿ ರೂಫ್ ಗಾರ್ಡನ್ನಲ್ಲಿ ನಡೆದ ಕೃಷಿಕೋದ್ಯಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಗೂ ಉದ್ಯಮಕ್ಕೂ ಎಲ್ಲಿಯ ನಂಟು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ. ಕೃಷಿ ಹಾಗೂ ಉದ್ಯಮ ಎರಡೂ ಪ್ರತ್ಯೇಕ ವಿಷಯ ಎಂದು ಹೇಳಿದರೂ, ಅವರೆಡಕ್ಕೂ ಪರಸ್ಪರ ನಂಟು ಇದೆ. ಕೃಷಿ ಕಾರ್ಯ ನಡೆಸುವಾಗ ಪ್ರತಿ ಗಿಡವನ್ನು ಕಾಳಜಿಯಿಂದ ಸಾಕಬೇಕು. ಅದರಿಂದ ಎಷ್ಟು ಸಾಧ್ಯವೋ ಅಷ್ಟು ಇಳುವರಿಯನ್ನು ಪಡೆದುಕೊಳ್ಳುವತ್ತ ಕೃಷಿಕರು ಗಮನ ಹರಿಸುತ್ತಾರೆ. ಇದೇ ರೀತಿ ಉದ್ಯಮದಲ್ಲಿ ಹೇಳುವುದಾದರೆ, ಪ್ರತಿಯೋರ್ವ ಗ್ರಾಹಕನತ್ತ ನಾವು ಗಮನ ಕೊಡಬೇಕು. ಆತನ ಬೇಡಿಕೆಗಳನ್ನು ಪೂರೈಸುತ್ತ ಚಿತ್ತ ಹರಿಸಬೇಕು. ಆಗ ಮಾತ್ರ ಗ್ರಾಹಕ ಹೆಚ್ಚಿನ ಉತ್ಪನ್ನ ಖರೀದಿಸಲು ಮುಂದಾಗುತ್ತಾನೆ. ಹಾಗಾಗಿ ಕೃಷಿ ಹಾಗೂ ಉದ್ಯಮವನ್ನು ಪರಸ್ಪರ ಬೆಸೆಯುವಂತಾದರೆ, ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಮಾಡಲು ಸಾಧ್ಯ ಎಂದರು.
ಸಾಮಥ್ರ್ಯ ಹಾಗೂ ಅವಕಾಶಗಳನ್ನು ಬಳಸಿಕೊಂಡು ಕೃಷಿ ಹಾಗೂ ಉದ್ಯಮ ಬೆಳೆಯುತ್ತದೆ. ರಾಜ್ಯ ರಾಜಧಾನಿಯಲ್ಲಿ ಹಣಕ್ಕೆ ಹೆಚ್ಚು ಪ್ರಾಶಸ್ತ್ಯ ಇರುವುದರಿಂದ ಅಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಆದರೆ ರಾಜಧಾನಿಯನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಕೃಷಿಯನ್ನು ಹೆಚ್ಚು ಬೆಳೆಸಲು ಅವಕಾಶ ನೀಡಲಾಗುತ್ತಿದೆ. ಇದಕ್ಕೆ ತಕ್ಕನಾಗಿ ಶ್ರಮವನ್ನು ಹಾಕಬೇಕು. ವಾರದ 6 ದಿನವೂ, ಕಚೇರಿಯಲ್ಲಿ ದುಡಿದಂತೆ ತೋಟದಲ್ಲಿ ಕೆಲಸ ಮಾಡಲು ಸಿದ್ಧರಾಗಬೇಕು. ಹಾಗಾದರೆ ಮಾತ್ರ ಕೃಷಿಯಲ್ಲಿ ಬೆಳವಣಿಗೆ ಕಾಣಲು ಸಾಧ್ಯ ಎಂದರು.
ಇ-ಕಾಮರ್ಸ್, ಬ್ರಾಂಡಿಂಗ್ ಅಗತ್ಯ:
ಕಾಸರಗೋಡು ಸಿಪಿಸಿಆರ್ಐನ ಚೀಫ್ ಟೆಕ್ನಿಕಲ್ ಆಫೀಸರ್ ಎಚ್. ಮುರಳೀಕೃಷ್ಣ ಮಾತನಾಡಿ, ಮನೆಮನೆಗಳಲ್ಲಿ ಐಟಿ - ಬಿಟಿ ಕಲಿತ ಯುವಕರಿದ್ದಾರೆ. ಆದರೂ ಕೃಷಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ವಿಫಲರಾಗಿದ್ದೇವೆ. ಭಾರತದ ಅಡಿಕೆಗೆ ಧಾರ್ಮಿಕ ಟಚ್ ನೀಡಿ ಇರಾನ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ದಕ್ಷಿಣ ಭಾರತದ ಅಡಿಕೆಯನ್ನು ಉತ್ತರ ಭಾರತದಲ್ಲಿ ಇಂತಹ ಉತ್ಪನ್ನವಾಗಿ ಮಾರಾಟ ಮಾಡಲು ಯಾಕೆ ಪ್ರಯತ್ನಿಸಬಾರದು? ಪ್ರಸಕ್ತ ಸನ್ನಿವೇಶದಲ್ಲಿ ಇ-ಕಾಮರ್ಸ್, ಬ್ರಾಂಡಿಂಗ್ ಇಂದಿನ ಅಗತ್ಯವಾಗಿದೆ ಇದೆ ಎಂದರು.
ಕೃಷಿ ಸೇರಿದಂತೆ ಯಾವುದೇ ಉದ್ಯಮದಲ್ಲಿ ಸರಿಯಾದ ಗುರಿ ಇಲ್ಲದೇ ಯಶಸ್ಸು ಸಾಧ್ಯವಿಲ್ಲ. ಗುರಿಯೆಡೆಗೆ ನಾವು ಕೇಂದ್ರಿಕೃತರಾಗದೇ ಹೋದರೆ, ಗಮ್ಯ ತಲುಪಲು ಸಾಧ್ಯವಿಲ್ಲ. ಆದ್ದರಿಂದ ಕೃಷಿಯನ್ನು ಉದ್ಯಮವಾಗಿ ಬೆಳೆಸಲು ಬೇಕಾದ ಚಾಕಚಕ್ಯತೆ ಕಡೆಗೆ ಗಮನ ಕೊಡುವುದು ಅಗತ್ಯ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಆರಂಭಿಸಲಾಗಿದೆ. ನಿರ್ವಹಣಾ ವೆಚ್ಚ, ಬೆಲೆ ಏರಿಳಿಕೆ ಎಲ್ಲದರ ಬಗ್ಗೆಯೂ ಇಲ್ಲಿ ಚರ್ಚೆ ನಡೆಸಲಾಗುತ್ತಿದೆ. ಕೃಷಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಆಹಾರ ಜೊತೆಗೆ ಆದಾಯ:
ಕೇಂದ್ರ ಸರಕಾರದ ಚಿಂತನೆಯನ್ನು ಮುಳಿಯ ಪ್ರತಿಷ್ಠಾನ ಸಹಯೋಗದ ಕೃಷಿಕೋದ್ಯಮ ಕಾರ್ಯಕ್ರಮ ಜಾರಿಗೊಳಿಸಲು ಮುಂದಾಗಿದೆ. ಕೃಷಿಯನ್ನು ಉದ್ಯಮವಾಗಿ ಬೆಳೆಸಬೇಕೆಂಬುದೇ ಸರಕಾರದ ಧೋರಣೆಯೂ ಕೂಡ. ಒಂದು ಸಂದರ್ಭದಲ್ಲಿ ಆಹಾರದ ಅಭಾವ ಇತ್ತು. ಆದರೆ ಇಂದಿಲ್ಲ. ಇಂದು ಆಹಾರ ಬೆಳೆ ಹೆಚ್ಚಾಗಿದೆ. ಆದ್ದರಿಂದ ಆಹಾರವನ್ನು ಹೆಚ್ಚು ಬೆಳೆಸಬೇಕೆಂಬುದು ಸರಕಾರದ ಗುರಿಯೂ ಅಲ್ಲ. ಅದಕ್ಕೆ ಬದಲಾಗಿ, ಆಹಾರದ ಜೊತೆಗೆ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವತ್ತ ಸರಕಾರ ಗಮನ ಕೊಡುತ್ತಿದೆ ಎಂದ ಅವರು, 1 ಎಕರೆ ಜಾಗದಲ್ಲಿ ವರ್ಷಕ್ಕೆ 4-5 ಲಕ್ಷ ರೂ. ಉಳಿಸಬಹುದು ಎನ್ನುವುದು ಯಶಸ್ವಿ ಕೃಷಿ ಎಂದು ಉದಾಹರಿಸಿದರು.
ಕೃಷಿಕರಿಗೆ ಸಮಸ್ಯೆ ಆಗಿದೆ ಎಂದರೆ ಸರಕಾರ ಗಮನ ಕೊಡುವುದಿಲ್ಲ ಎಂಬ ಆರೋಪ ಇದೆ. ನಿಜವಾಗಿಯೂ ಸರಕಾರಕ್ಕೆ ಇದು ಆಸಕ್ತಿಯ ವಿಷಯ ಅಲ್ಲ. ಸರಕಾರ ಗಮನ ಕೊಡುವುದು, 2 ಎಕರೆಯೊಳಗಿನ ಕೃಷಿಕನ ಬಗ್ಗೆ. ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿ ಪಡೆಯುವುದು ಹಾಗೂ ನಗದೀಕರಣ ಆಗಬೇಕು ಎನ್ನುವುದೇ ಸರಕಾರದ ಧೋರಣೆ ಎಂದು ವಿವರಿಸಿದರು.
ಶೇ. 100ರಷ್ಟು ಶ್ರಮ ಹಾಕಿದರೆ ಮಾತ್ರ ಕೃಷಿ:
ಮಾ ಇಂಟಿಗ್ರೇಟರ್ಸ್ನ ಫೌಂಡರ್ ಅಶೋಕ್ ಕುಮಾರ್ ಮಾತನಾಡಿ, ಇರುವ ಮೂಲಗಳನ್ನು ಎಷ್ಟರಮಟ್ಟಿಗೆ ಬಳಸಿಕೊಂಡು, ದುಡಿದುಕೊಂಡು ಬಳಸಬೇಕು. ಅದಕ್ಕೆ ಒಂದು ವ್ಯವಸ್ಥೆಯನ್ನು ಮಾಡಿ, ಮುಂದುವರಿಸಿಕೊಂಡು ಹೋದರೆ ಅದನ್ನು ವ್ಯವಹಾರ ಎನ್ನುತ್ತೇವೆ. ನಮ್ಮ ಅಂಗಡಿಯನ್ನು ನಡೆಸಿದಂತೆ ಕೃಷಿಯನ್ನು ನಡೆಸಲು ಸಾಧ್ಯವಿಲ್ಲ. ಶೇ. 100ರಷ್ಟು ಮೂಲಗಳನ್ನು ಬಳಸಿಕೊಳ್ಳಬೇಕು, ಬಂಡವಾಳ ಹಾಕಬೇಕು, ಹಾಕಿದ ಬಂಡವಾಳವನ್ನು ಸದ್ವಿನಿಯೋಗ ಪಡಿಸಿಕೊಳ್ಳಲು ತಿಳಿದಿರಬೇಕು. ವಾರದ 7 ದಿನದಲ್ಲಿ 24 ಗಂಟೆ ಅಂದರೆ 362 ದಿನವೂ ಕೆಲಸ ಮಾಡುವುದೇ ಕೃಷಿ. ಇದರ ನಡುವೆ ಕಾರ್ಯಕ್ರಮ, ಉಳಿದ ಕೆಲಸಗಳನ್ನು ಬಿಡಬೇಕು. ಕೃಷಿಕರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸಮಾರೋಪ:
ಕಾರ್ಯಕ್ರಮದಲ್ಲಿ ಸಾವಯವ ಕೃಷಿಯ ಬಗ್ಗೆ ಡಾ. ವೇಣು ಕಳೆಯತ್ತೋಡಿ, ಕೃಷಿ ತಂತ್ರಗಾರಿಕೆ ಬಗ್ಗೆ ಶ್ರೀಹರಿಭಟ್ ಸಜಂಗದ್ದೆ, ನರ್ಸರಿ ಬಗ್ಗೆ ವೇಣುಗೋಪಾಲ್, ಇನ್ಟ್ಸಾ ಬಾಸ್ಕೆಟ್ ಕೃಷಿ ಮಳಿಗೆ ಬಗ್ಗೆ ಶ್ರೀಕೃಷ್ಣ ಮೋಹನ್, ಆಯುರ್ವೇದ ಮೂಲಿಕೆಗಳ ಕೃಷಿ ಬಗ್ಗೆ ಡಾ. ಹರಿಕೃಷ್ಣ ಪಾಣಾಜೆ, ಸುರಂಗ ನೀರಾವರಿ ಬಗ್ಗೆ ಗೋವಿಂದ ಭಟ್ ಮಾಣಿಲ, ಹೈನುಗಾರಿಕೆ ಬಗ್ಗೆ ಕಸ್ತೂರಿ ಅಡ್ಯಂತಾಯ, ಬಸಳೆ ಕೃಷಿ ಬಗ್ಗೆ ಸುರೇಶ್ ಗೌಡ, ತರಕಾರಿ ಕೃಷಿ ಬಗ್ಗೆ ಶ್ರೀರಾಮ ಭಟ್ಟ ಚೆನ್ನಾಂಗೋಡು, ಕೃಷಿ ಸಂಘಟನೆ ಬಗ್ಗೆ ಮಹೇಶ್ ಪುಚ್ಚಪ್ಪಾಡಿ ಅಭಿಪ್ರಾಯ ಮಂಡಿಸಿದರು.
ವೇಣು ಶರ್ಮ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ