ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳ ವಿಚಾರ ಮಂಡನೆ
ಪುತ್ತೂರು: ಬಂಧನದ ಅನುಭವಗಳು ಸ್ವಾತಂತ್ರ್ಯದ ಅರಿವನ್ನು ಮೂಡಿಸುತ್ತದೆ. ಭಾರತ ದೇಶ ನೂರಾರು ವರ್ಷಗಳಿಂದ ಇಂತಹ ಬಂಧನಕ್ಕೆ ಸಾಕ್ಷಿಯಾಗಿತ್ತು. ಅನೇಕ ದೇಶಭಕ್ತರ ತ್ಯಾಗ ಬಲಿದಾನಗಳ ಫಲವಾಗಿ ನಾವಿಂದು ಬಂಧ ಮುಕ್ತರಾಗಿ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ಆಚರಿಸುವ ಹೊಸ್ತಿಲಲ್ಲಿದ್ದೇವೆ. ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದವರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಎಂದು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ವಿಭಾಗದ ಸಂಯೋಜಕಿ ಡಾ.ವಿಜಯ ಸರಸ್ವತಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿವಿಧ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಡೆದ ವಿದ್ಯಾರ್ಥಿಗಳ ವಿಚಾರ ಮಂಡನೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.
ಪ್ರಸ್ತುತ ನವಭಾರತದ ಪರಿಕಲ್ಪನೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ದೇಶದ ಯುವಶಕ್ತಿಯ ಮೇಲಿದೆ. ಇಂದಿನ ವಿದ್ಯಾರ್ಥಿಗಳು ಭಾರತ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವಕ್ಕೆ ಸಾಕ್ಷಿಯಾಗುವ ಪೀಳಿಗೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಸಂಕಲ್ಪವನ್ನು ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ದ್ವಿತೀಯ ಎಂ.ಸಿ.ಜೆ ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ ಭಾರತದ ಸ್ವಾತಂತ್ರ ಹೋರಾಟದ ಮಜಲುಗಳು, ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿ ಮನೀಷಾ ಶೆಟ್ಟಿ ಸ್ವಾತಂತ್ರ್ಯೋತ್ತರ ಭಾರತದ ಕನಸುಗಳು ಮತ್ತು ಸವಾಲುಗಳು, ಪ್ರಥಮ ಎಂ.ಕಾಂ ವಿದ್ಯಾರ್ಥಿನಿ ಸೌಮ್ಯ ಸ್ವಾತಂತ್ರ್ಯಾ ನಂತರದ ಭಾರತ, ಪ್ರಥಮ ಎಂ.ಕಾಂ ವಿದ್ಯಾರ್ಥಿನಿ ರಮ್ಯ ಸ್ವಾತಂತ್ರೋತ್ಸವ ಆಚರಣೆ ಮತ್ತು ಪ್ರಾಮುಖ್ಯತೆ, ದ್ವೀತಿಯ ಎಂ.ಎಸ್ಸಿ ರಸಾಯನಶಾಸ್ತ್ರ ವಿದ್ಯಾರ್ಥಿನಿ ಚೇತನಾ ಇಂಡಿಯಾ 2047, ದ್ವಿತೀಯ ಎಂ.ಎಸ್ಸಿ ರಸಾಯನಶಾಸ್ತ್ರ ವಿದ್ಯಾರ್ಥಿನಿ ಶುಭ ಲಕ್ಷ್ಮಿ ಕೆ. ಬಿ. ಆಜಾದಿ ಕಾ ಅಮೃತ ಮಹೋತ್ಸವದ ಒಂದುನೋಟ ಹಾಗೂ ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿ ಕವನ ಪೈ ಆಜಾದಿ ಕಾ ಅಮೃತ್ ಮಹೋತ್ಸವ್ ಅವರ್ ಜರ್ನಿ ಆಫ್ 75 ಇಯರ್ಸ್ ಎಂಬ ವಿಷಯಗಳ ಕುರಿತು ವಿಚಾರ ಮಂಡಿಸಿದರು.
ವಿವೇಕಾನಂದ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ರಚನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ನಾತಕೋತರ ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರತೀಕ್ ಸ್ವಾಗತಿಸಿ, ಸ್ನಾತಕೋತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ತಾರಾ ಕರುಣ್ ವಂದಿಸಿದರು. ವಿದ್ಯಾರ್ಥಿನಿಯರಾದ ರೂಪ, ಅನುಶ್ರೀ, ಸ್ವಪ್ನ ಪ್ರಾರ್ಥಿಸಿದರು.
ಸ್ನಾತೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಲಕ್ಷ್ಮಿ ಭಟ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ