ಸಾಗರ ಸಂಪತ್ತಿನ ರಕ್ಷಣೆಗೆ ವೈಜ್ಞಾನಿಕ ಜ್ಞಾನ ಅಗತ್ಯ: ಡಾ. ಕೆ.ಎಸ್.ಜಯಪ್ಪ
ಮೂಡುಬಿದಿರೆ: ಅತಿಯಾದ ಜನಸಂಖ್ಯೆ, ನಗರೀಕರಣ ಹಾಗೂ ಕೈಗಾರೀಕರಣದಿಂದ ಕರಾವಳಿಯಲ್ಲಿ ಮಾಲಿನ್ಯ ಉಂಟಾಗುತ್ತಿದೆ, ಸಾಗರ ಸಂಪತ್ತಿನ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿರುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮರೈನ್ ಜಿಯೊಲಜಿ ವಿಭಾಗದ ಮುಖ್ಯಸ್ಥ ಡಾ. ಕೆ.ಎಸ್.ಜಯಪ್ಪ ಅಭಿಪ್ರಾಯಪಟ್ಟರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸೃಷ್ಟಿ ಕ್ಲಬ್ ಹಾಗು ಪಿಲಿಕುಳ ರೀಜಿನಲ್ ಸೈನ್ಸ್ ಸೆಂಟರ್ ಜಂಟಿಯಾಗಿ ಆಯೋಜಿಸಿದ್ದ 'ಓಷಿಯನ್ ರಿಸೊರ್ಸಸ್ ಆ್ಯಂಡ್ ಕೋಸ್ಟಲ್ ಪೊಲ್ಯುಷನ್' ಎಂಬ ವಿಷಯದ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಇವರು, ಕರ್ನಾಟಕವು 300 ಕಿ. ಮೀ.ನಷ್ಟು ಕರಾವಳಿ ತೀರ ಪ್ರದೇಶವನ್ನು ಹೊಂದಿದ್ದು, ದಕ್ಷಿಣ ಕನ್ನಡದಲ್ಲಿ ವರ್ಷಕ್ಕೆ ಸರಾಸರಿ 3,900 ಮಿಲೀಮೀಟರ್ನಷ್ಟು ಮಳೆಯಾಗುತ್ತದೆ, ಈ ಸಾಗರ ಸಂಪತ್ತಿನ ರಕ್ಷಣೆಗೆ ವೈಜ್ಞಾನಿಕ ಜ್ಞಾನ ಅಗತ್ಯವಾಗಿದೆ ಎಂದರು.
ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಭೂಮಂಡಲದ ಯಾವುದೇ ಭಾಗಕ್ಕೂ ತೊಂದರೆ ಆದರೆ ಅದು ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಮನ ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗದ ವಿದ್ಯಾರ್ಥಿಗಳು ಹಾಗು ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರತಿಕ್ಷಾ.ಜೆ ನಿರೂಪಿಸಿದರು, ವಿದ್ಯಾರ್ಥಿನಿ ಇಂಚರ ವಂದಿಸಿದರು.