ಅಂಬಿಕಾ ಮಹಾವಿದ್ಯಾಲಯದಲ್ಲಿ ಕಾಲೇಜು ವಾರ್ಷಿಕೋತ್ಸವ – ಉದ್ಘೋಷ

Upayuktha
0

ಅನುಕರಣೆರಹಿತವಾದ ಸ್ವಂತ ಬದುಕನ್ನು ಕಟ್ಟಿಕೊಳ್ಳಬೇಕು : ಡಾ.ಯು.ಪಿ. ಶಿವಾನಂದ


ಪುತ್ತೂರು: ಒಳ್ಳೆಯತನವನ್ನು ಗುರುತಿಸಲು ಒಳ್ಳೆಯ ಮನಸ್ಸಿರಬೇಕು. ಯಾರನ್ನೂ ಅನುಕರಿಸದೆ ನಮ್ಮದೇ ಸ್ವಂತ ನಿರ್ಧಾರಗಳ ಸ್ಪಷ್ಟ ಹಾದಿಯಲ್ಲಿ ನಾವು ನಡೆಯಬೇಕು. ಹಣ ಸಂಪಾದನೆ ಮಾತ್ರ ಉದ್ದೇಶವಾಗಿರದೆ, ಮಾನವೀಯ ಮೌಲ್ಯಗಳನ್ನು ಹೊಂದಿದ ಉತ್ತಮ ಚಾರಿತ್ರ‍್ಯದ ನಿರ್ಮಾಣವನ್ನು ಮಾಡಬೇಕು ಎಂದು ಪುತ್ತೂರಿನ ಸುದ್ದಿ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಯು. ಪಿ ಶಿವಾನಂದ ಹೇಳಿದರು.


ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಬುಧವಾರದಂದು ಕಾಲೇಜು ವಾರ್ಷಿಕೋತ್ಸವ – ಉದ್ಘೋಷ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಒಳ್ಳೆಯತನವನ್ನು ಗುರುತಿಸಬೇಕು. ಅದು ನಮ್ಮೆಲ್ಲರ ಜವಾಬ್ದಾರಿ. ಹಾಗೆಂದು ಹೊಗಳಿಕೆಯೇ ಜೀವನದ ಬಂಡವಾಳವಾಗಿರಬಾರದು. ಇರುವುದನ್ನು ಇದ್ದಂತೆ ಹೇಳುವ ಶೈಲಿಯನ್ನು ಬೆಳೆಸಿದಾಗ ಮನಸ್ಸು ಸ್ವಚ್ಛಂದವಾಗಿರಲು ಸಾಧ್ಯ. ಇಂತಹ ಒಳ್ಳೆಯ ಜೀವನ ಮೌಲ್ಯಗಳನ್ನು ಬೆಳೆಸಬೇಕು. ಕಾಲೇಜಿನ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಪಾಠದ ಮೂಲಕ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸುವುದನ್ನು ಅರಿತಾಗ ಮಾತ್ರ ಯಶಸ್ಸು ದೊರಕುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರಿನ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಬಿ. ವಿ ಶಗ್ರಿತ್ತಾಯ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ವಿದ್ಯೆಯನ್ನು ಕಲಿಸುವುದರ ಜೊತೆ ಜೊತೆಗೆ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿ ಬೆಳೆಸಬೇಕು. ದೇಶಕ್ಕೆ ಕೊಡುಗೆ ಕೊಡುವ ವಿದ್ಯಾರ್ಥಿಗಳನ್ನು ಸೃಷ್ಟಿಗೊಳಿಸಬೇಕು. ವಿದ್ಯಾರ್ಥಿಗಳು ಯಾವತ್ತೂ ಸರ್ವಾಂಗ ಪ್ರವೀಣರಾಗಿ ಬೆಳೆಯಬೇಕು. ಅಂತಹ ಉತ್ಸಾಹಿ ಯುವ ಜನಾಂಗದಿAದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.


ಪರಿಸರವನ್ನು ಬೆಳೆಸುವ ಕಾಳಜಿ, ನೀರನ್ನು ಸಂರಕ್ಷಿಸುವ ಯೋಜನೆ ಯೋಚನೆಗಳು ವಿದ್ಯಾರ್ಥಿ ಜೀವನದಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠವಾಗಬೇಕು. ನೆಲ ಜಲ ಪರಿಸರ ಸಂರಕ್ಷಣೆಯ ಹೊಣೆಯನ್ನು ವಿದ್ಯಾರ್ಥಿಗಳು ಹೊತ್ತಾಗ ಪರಿಸರದ ಒಟ್ಟಾರೆ ಬೆಳವಣಿಗೆಯಾಗುತ್ತದೆ. ಇದರಿಂದ ಸಮಾಜದಲ್ಲಿ ಜನರಿಗೆ ಪ್ರಯೋಜನವಾಗುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಭಾರತೀಯ ಸಂಸ್ಕೃತಿಯು ಶ್ರೇಷ್ಠವಾದುದು. ಪುರಾತನ ಸಂಸ್ಕ್ರತಿಯನ್ನು ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ಆದರ್ಶಪುರುಷರು ನಾವಾಗಬೇಕು. ಭಾರತೀಯ ಸತ್ವ ತತ್ತ್ವ ಚಿಂತನೆಗಳನ್ನು ಪಸರಿಸುವುದಕ್ಕಾಗಿಯೇ ಅಂಬಿಕಾ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.


ಕಾಲೇಜಿನ ವಾರ್ಷಿಕ ಕ್ರೀಡೋತ್ಸವದಲ್ಲಿ ವೈಯಕ್ತಿಕ ಛಾಂಪಿಯನ್ ಶಿಪ್ ಪಡೆದ ವಿದ್ಯಾರ್ಥಿಗಳಾದ ನವನೀತ್, ಕೀರ್ತಿ, ರಾಹುಲ್ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗೆದ್ದ ತಂಡಗಳಿಗೆ ತಂಡ ಛಾಂಪಿಯನ್ ಶಿಪ್ ಪ್ರಶಸ್ತಿಯನ್ನೂ ನೀಡಲಾಯಿತು. ವಾರ್ಷಿಕವಾಗಿ ಸಾಂಸ್ಕೃತಿಕವಾಗಿ ಸಾಧನೆಗೈದವರಿಗೆ ಕೊಡಮಾಡುವ ಸಾಂಸ್ಕೃತಿಕ ಛಾಂಪಿಯನ್ ಶಿಪ್ ಪ್ರಶಸ್ತಿಯನ್ನು ಪ್ರಥಮ ಬಿ.ಕಾಂ ವಿದ್ಯಾರ್ಥಿ ಅನ್ಮಯ್ ಭಟ್‌ಗೆ ನೀಡಲಾಯಿತು.


ಕಾಲೇಜಿನ ಸಂಸ್ಕ್ರತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ಟ ಗಾಳಿಮನೆ ಅವರ ಮಾರ್ಗದರ್ಶನದಲ್ಲಿ ಪ್ರತಿದಿನ ರೂಪಿಸಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರಗೊಳ್ಳುತ್ತಿರುವ ದಿನದರ್ಶಿಕೆ, ಭಗವದ್ಗೀತೆ ವಾಚನ, ವಿವೇಕ ವಾಣಿ ಈ ಮೂರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳಾದ ಕಾರ್ತಿಕ್ ಕೆದಿಮಾರು, ವೈಷ್ಣವೀ ಜೆ ರಾವ್, ಅಂಕಿತಾ ಎ, ಅನನ್ಯಾ ಹಾಗೂ ಮೋಹನ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ರಂಗದಲ್ಲಿ ಸಾಧನೆಗೈದ ಅದಿತಿ ಎಂ. ಎಸ್ ಅವರನ್ನು ಅಭಿನಂದಿಸಲಾಯಿತು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪಿ.ಜೆ ಜಗನ್ನಿವಾಸ ರಾವ್, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ, ಪ್ರಸನ್ನ ಭಟ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪಂಚಮಿ ಪ್ರಾರ್ಥಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸಾಯಿಶ್ವೇತ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ವಾರ್ಷಿಕ ವರದಿಯನ್ನು ಮಂಡಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನಘಾ ವಂದಿಸಿ, ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top