ತಾರೀಕು 26. 8. 2022 ರಂದು ಗೋಕರ್ಣದ ಅಶೋಕೆಯಲ್ಲಿ ನಡೆದ ನಮ್ಮ ಗುರುಗಳ ಚಾತುರ್ಮಾಸ್ಯ ಸಮಾರಂಭದ ಗುರು ಭಿಕ್ಷಾ ಸೇವೆಗಾಗಿ ನಮ್ಮ ವಲಯದಿಂದ ಪಯಣಿಸಿದವರು ನಾವು 21 ಮಂದಿ. ಹೆಚ್ಚಿನವರು ಪ್ರಥಮಬಾರಿಗೆ ಅಶೋಕೆಯನ್ನು ವೀಕ್ಷಿಸಲು ಹೋಗುವವರು. ಪ್ರತಿಯೊಬ್ಬರ ಮನದಿಂಗಿತ ಮತ್ತು ಕುತೂಹಲ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಪರಿಸರ ಹೇಗಿದೆ? ನಾವೆಲ್ಲರೂ ತೆತ್ತ ಗುರು ಕಾಣಿಕೆಯ ಪ್ರತೀಕ ಸೇವಾಸೌಧ ಇಂದು ಯಾವ ಹಂತದಲ್ಲಿದೆ? ಎಂಬುದನ್ನು ನೋಡುವುದೇ ಆಗಿತ್ತು.
ಬೆಳಗ್ಗೆ 6 ಗಂಟೆಗೆ ತಲುಪಿದ ನಾವು ನಿತ್ಯ ವಿಧಿಗಳನ್ನು ಪೂರೈಸಿ ಗುರುಮಂದಿರದತ್ತ ಸಾಗಿದೆವು. ಎಂದಿನ ಪೂಜಾವಿಧಿಗಳು, ಯಾಗಶಾಲೆಯ ತಯಾರಿಗಳು, ಪಾರಾಯಣದ ನಿನಾದ ನಮ್ಮನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ದಿತ್ತು. ಅಲ್ಲೇ ಎದುರಿಗೆ ಆಕರ್ಷಿಸಿದ್ದು ಪೂರ್ತಿಯಾಗಲು ಕೆಲವೇ ಹೆಜ್ಜೆ ಬಾಕಿ ಇರುವ ಸೇವಾ ಸೌಧ.
ಆಹಾ ಆಹಾ ಭದ್ರವಾದ ಕಲ್ಲಿನ ಗೋಡೆ, ಶಾಶ್ವತವಾದ ಮರಮುಟ್ಟುಗಳಿಂದ ನಡೆದ ಮಾಡಿನ ರಚನೆ, ಕಲಾ ಸೌಂದರ್ಯದಿಂದ ಕೂಡಿದ ಮುಚ್ಚಿಗೆ, ಯಾವುದರಲ್ಲೂ ರಾಜಿಯಿಲ್ಲದ ಮರದ ಬಾಗಿಲುಗಳು, ಸುಂದರ ಸ್ಥಂಭ ವಿನ್ಯಾಸಗಳು, ಸುಸಜ್ಜಿತ ಅಡುಗೆ ಕೋಣೆ, ಚಿಕ್ಕ-ಚೊಕ್ಕ ಲಿಫ್ಟ್ ವ್ಯವಸ್ಥೆ, ಬಹಳ ಅನುಕೂಲಕರ ಪೂಜಾ ಮಂದಿರ, ಮಂದಿರಕೊಂದು ಭವ್ಯ ಹೆಬ್ಬಾಗಿಲು, ಮಂದಿರದ ಎದುರಿನ ಅಲಂಕಾರ ಮಂಟಪ ಎಲ್ಲವೂ ಬಹುವಾಗಿ ಆಕರ್ಷಿಸಿತು. ನಾವು ಸಮರ್ಪಿಸಿದ ಗುರುಕಾಣಿಕೆ ಸಾಕಾರಗೊಂಡಿದೆ ಎಂಬ ಭಾವ ಮನದ ಮೂಲೆಯಲ್ಲಿ ಸ್ಫುರಿಸಿತ್ತು. ಸಂಪೂರ್ಣ ಶಿಷ್ಯವರ್ಗದ ಸ್ಪಂದನೆ ಪೂರ್ಣವಾಗಿ ನಡೆದಿದ್ದರೆ, "ಚಾತುರ್ಮಾಸ್ಯದ ಪೂಜಾ ಕೈಂಕರ್ಯಗಳು ಅದೇ ಮಂದಿರದಲ್ಲಿ ನಡೆಯುತ್ತಿತ್ತು" ಎಂಬ ಭಾವ ಮನಸ್ಸಿನ ಮೂಲೆಯಲ್ಲಿ ತೇಲಿಹೋಗಿತ್ತು.
ಶ್ರೀಕರಾರ್ಚಿತ ಪೂಜಾವಿಧಿಗಳನ್ನು ವೀಕ್ಷಿಸಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಗುರುಗಳಿಂದ ಆಸ್ಥಾನ ಕಾರುಣ್ಯದ ಬಗ್ಗೆ ಸುಂದರ ವಿಶ್ಲೇಷಣೆ. ಹೌದಲ್ಲ ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ತರದ ಭಾವಕ್ಕೆ ಒಳಗೊಳ್ಳುತ್ತೇವೆ. ಆಕಾಲದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತೇವೆ. ಕೆಲವು ಸಂದರ್ಭದಲ್ಲಿ ಸ್ಥಾನ ಕಾರುಣ್ಯದ ಅರಿವನ್ನೂ ಕಳಕೊಂಡಿರುತ್ತೇವೆ. ಎಚ್ಚರಗೊಳಿಸಲು ನಮ್ಮ ಬಳಿ ಶ್ರೀಕೃಷ್ಣನಿಲ್ಲದಿದ್ದರೂ, ಶ್ರೀ ಗಳಿದ್ದಾರೆ ಎಂಬ ಸಂದೇಶ ಗುರುಮುಖೇನ ಬಂದಿತ್ತು. ಸಂಪೂರ್ಣ ಗುರುಕುಲ ಒಂದರ ಖರ್ಚಿನ ಬಗ್ಗೆ ರೂ 12 ಲಕ್ಷದಷ್ಟು ದಾನವನ್ನು ಭಕ್ತರೊಬ್ಬರು ಸಲ್ಲಿಸಿ, ಭಾರತೀಯ ಪಾರಂಪರಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಬಲುದೊಡ್ಡ ಕೊಡುಗೆಯನ್ನು ನೀಡಿದ್ದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಐನೂರರಷ್ಟಿದ್ದ ಮಕ್ಕಳು ಇಂದು 1000ದ ಆಸುಪಾಸಿಗೆ ತಲುಪಿದ್ದಾರೆ. ಬೆಳಗ್ಗಿನ ಹೊತ್ತು ಆಧುನಿಕ ವಿದ್ಯಾಭ್ಯಾಸ ಮಾಡಿ, ಮಧ್ಯಾಹ್ನ ನಂತರ ಪಾರಂಪರಿಕ ಜ್ಞಾನವನ್ನು ಪಡೆಯುತ್ತಿರುವ ಬಾಲಕನೊಬ್ಬ ದೊರಕಿದ. ಕುತೂಹಲಿಗಳಾದ ನಾವು ಮಾತಿಗೆಳೆದೆವು. ಉಷಃಕಾಲದಲ್ಲಿ ಏಳಿಸಿ (5 ಗಂಟೆಗೆ) ಉಷಾಪಾನವನ್ನು ಮಾಡಿಸಿ ಯೋಗಾಭ್ಯಾಸದೊಂದಿಗೆ ದಿನಚರಿ ಆರಂಭ. ಮಧ್ಯಾಹ್ನ ನಂತರ ವೇದಾಭ್ಯಾಸ, ಸಂಗೀತ-ನೃತ್ಯ ವಾದನ ಜ್ಯೋತಿಷ್ಯ ಆಯುರ್ವೇದ, ಮೌಲ್ಯ ಶಿಕ್ಷಣ, ಸ್ತೋತ್ರ ಪಾಠ ಮುಂತಾಗಿ ಅವರವರ ಆಸಕ್ತಿಗನುಗುಣವಾದ ಪಾಠ ವೈವಿಧ್ಯಗಳು, 9:30 ಕ್ಕೆ ವಿಶ್ರಾಂತಿಗೆ. 4 ಹೊತ್ತು ರುಚಿಕಟ್ಟಾದ ಆಹಾರ ಕ್ರಮ ಮಕ್ಕಳನ್ನು ಬಹಳ ಉತ್ಸಾಹದಿಂದ ಇರುವಂತೆ ಮಾಡಿದೆ ಎಂಬ ಮಾತುಗಳು ವಿದ್ಯಾರ್ಥಿಯಿಂದ ಬಂದಿತ್ತು.
ಭೋಜನಾನಂತರ ಪರಿಸರವನ್ನೆಲ್ಲಾ ಸುತ್ತಾಡಿ ಊರಿನತ್ತ ಪಯಣಿಸಲು ಸಿದ್ಧರಾಗಿ ನಮ್ಮ ವಸ್ತ್ರದ ಚೀಲಕ್ಕಾಗಿ ಉಳಕೊಂಡ ಕೋಣೆಯಲ್ಲಿ 10 ನಿಮಿಷ ಕುಳಿತಿದ್ದೆವು. ಪ್ರಥಮ ಬಾರಿಗೆ ಗುರುಕುಲ ಪರಿಸರವನ್ನು ವೀಕ್ಷಿಸಲು ಬಂದ ಮಿತ್ರರ ಮಾತುಗಳು ತುಂಬಾ ಗಮನಾರ್ಹ. ಅರ್ಧ ವಯಸ್ಸಿನ ಹೆಚ್ಚಿನವರ ಮನದಮೂಲೆಯಲ್ಲಿರುವ ನೋವು ಏನೆಂದರೆ, ಮಕ್ಕಳಲ್ಲಿ ಸಂಸ್ಕಾರವನ್ನು ತುಂಬಲು ನಾವು ಸೋಲುತ್ತಿದ್ದೇವೆ. ಭಾರತೀಯ ಸಂಸ್ಕೃತಿಯ ಮೌಲ್ಯಗಳು ಆಧುನಿಕ ವಿದ್ಯಾಭ್ಯಾಸ ಪದ್ಧತಿಯಲ್ಲಿ ನಶಿಸಿಹೋಗುತ್ತಿದೆ. ಸಮೂಹ ಸನ್ನಿಗೆ ಒಳಗಾದ ಮಕ್ಕಳಿಗೆ ಮಾತಾಪಿತೃಗಳ ಮಾತು ಕ್ಷುಲ್ಲಕವಾಗಿ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತೀಯತೆಯ ಜ್ಞಾನ ಬೇಕು ಎನಿಸುವವರಿಗೆ ಪ್ರಶಸ್ತವಾದ ವಿದ್ಯಾಪೀಠ ಒಂದು ಉದಯವಾಗಿದೆಯಲ್ಲಾ, ಹೊಸ ಬೆಳಕೊಂದು ಕಾಣಿಸುತ್ತಿದೆಯಲ್ಲಾ ಇದಕ್ಕಾಗಿ ನಾವು ಹೆಮ್ಮೆ ಪಡಬೇಕು. ಪ್ರತಿಯೊಬ್ಬರೂ ಒಮ್ಮೆ ಹೋಗಿ ನೋಡಲೇಬೇಕು. ಅನುಭವಿಸಿ ಆ ಕುರಿತು ಮಾತನಾಡಬೇಕು. ನಮ್ಮ ಗುರುಗಳು ಹೊತ್ತಿಸಿದ ಜ್ಯೋತಿಯನ್ನು ಮತ್ತಷ್ಟು ಬೆಳಗುವಂತೆ ಮಾಡಬೇಕು ಎಂಬ ಮಾತುಗಳು ಮನೆಮನೆಗೆ ತಲುಪಲಿ ಮತ್ತು ಸಂದರ್ಶಿಸಲು ಪ್ರೇರಣೆ ಸಿಗಲಿ ಎಂಬುದೇ ನಮ್ಮೆಲ್ಲರ ಆಶಯ.
ಭಾರತೀಯ ಸಂಸ್ಕೃತಿಯನ್ನು, ಹಿಂದೂ ಸಂಸ್ಕೃತಿಯನ್ನು ಬೆಳಗಿದ ಜಗದ್ಗುರು ಪೀಠದ ಮೂವತ್ತಾರನೇ ಯತಿವರ್ಯರಿಂದ ಆ ಕಾರ್ಯದ ಪುನರಾವರ್ತನೆ ನಮ್ಮ ಕಾಲದಲ್ಲಿ ನಡೆಯುತ್ತಿದೆ ಎಂಬುದಕ್ಕೆ ನಾವೆಲ್ಲರೂ ಹೆಮ್ಮೆ ಪಡುತ್ತಾ ನಮ್ಮ ಜವಾಬ್ದಾರಿಯನ್ನು ನೆನೆಸಿಕೊಂಡು ಊರಿನತ್ತ ಪಯಣಿಸಿದೆವು.
ಗುರುಚಿತ್ತ ಸದಾ ವಿದ್ಯಾಪೀಠದತ್ತ, ಶಿಷ್ಯವೃಂದದತ್ತ. ಶಿಷ್ಯಚಿತ್ತ ಸದಾ ಗುರುವಿನತ್ತಿರಲಿ.
ಹರೇರಾಮ.
- ಎ.ಪಿ.ಸದಾಶಿವ ಮರಿಕೆ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ