ಬೆಳ್ಳಾರೆ: ತಂಟೆಪ್ಪಾಡಿ ಶಂಭಟ್ಟರು ಓರ್ವ ಹಿರಿಯ ಯಕ್ಷಗಾನ ಮದ್ದಳೆ ಕಲಾವಿದರು. ದಾಮೋದರ ಮಂಡೆಚ್ಚ, ಅಜ್ಜನಗದ್ದೆ ಗಣಪಯ್ಯ ಭಾಗವತರ ಸಮಕಾಲೀನರು. ಅವರಿಗೆ ಹಿಮ್ಮೇಳ ವಾದಕರಾಗಿಯೂ ಕಲಾ ಸೆವೆ ಮಾಡಿದವರು. ಯಕ್ಷಗಾನ ಕಲಾವಿದರಾದ ಇವರ ಜನ್ಮ ಶತಮಾನೋತ್ಸವದ ವಿಶೇಷ ಸಂದರ್ಭದಲ್ಲಿ "ತಂಟೆಪ್ಪಾಡಿ ಶಂಭಟ್ಟ" ಎಂಬ ನೆನಪಿನ ಗ್ರಂಥ ಬಿಡುಗಡೆ ಸಮಾರಂಭವು ಆಗಸ್ಟ್ 31ರಂದು ಬುಧವಾರ ಚೌತಿ ದಿನದಂದು ತಂಟೆಪ್ಪಾಡಿ ಮನೆಯಲ್ಲಿ ಜರಗಲಿದೆ.
ಸಮಾರಂಭದಲ್ಲಿ ಗ್ರಂಥದ ಅನಾವರಣವನ್ನು ಖ್ಯಾತ ಕವಿಗಳೂ ಹಿರಿಯ ಸಾಹಿತಿಗಳೂ ಆದ ಸುಬ್ರಾಯ ಚೊಕ್ಕಾಡಿಯವರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾ ಪೋಷಕರು, ಹವ್ಯಕ ವಿಭಾಗದ ಗುರಿಕ್ಕಾರರೂ ಆಗಿರುವ ಮುಂಡುಗಾರರು ಸುಬ್ರಹ್ಮಣ್ಯರವರು ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ತಂಟೆಪ್ಪಾಡಿ ಮನೆತನದ ಗುರುಗಳಾದ ವಡ್ಯ ಶ್ರೀಕೃಷ್ಣ ಭಟ್ಟರು ಉಪಸ್ಥಿತರಿರುತ್ತಾರೆ ಎಂದು ತಂಟೆಪ್ಪಾಡಿ ಶಂಭಟ್ಞರ ಮಗ ಹಾಗೂ ಕಾರ್ಯಕ್ರಮದ ಸಂಯೋಜಕರೂ ಆಗಿರುವ ಶಿವರಾಮ ಭಟ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕೃತಿಯಲ್ಲಿ ಶಂಭಟ್ಟರ ವ್ಯಕ್ತಿತ್ವ, ಸಾಧನೆ ಮತ್ತು ಜೀವನ ಚಿತ್ರಣಗಳ ಜೊತೆಗೆ ತಂಟೆಪ್ಪಾಡಿ, ಕಾಯಾರ, ಚೂಂತಾರು ಮತ್ತು ಪಾರೆ ದೀಕ್ಷಿತ ಕುಟುಂಬಗಳ ಚರಿತ್ರೆಯ ಸಂಗ್ರಹ ಕೃತಿಯೂ ಆಗಿದೆ.
"ತಂಟೆಪ್ಪಾಡಿ ಶಂಭಟ್ಟ" ಕೃತಿಯು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಡಶಾಲೆಯ ಮುಖ್ಯ ಶಿಕ್ಷಕರೂ ತಂಟೆಪ್ಪಾಡಿ ಕುಟುಂಬದ ಸದಸ್ಯರೂ ಆಗಿರುವ ರಾಮಕೃಷ್ಣ ಭಟ್ ಚೂಂತಾರ್ ರವರಿಂದ ಸಂಗ್ರಹಿಸಲ್ಪಟ್ಟಿದ್ದು, ಡಾ. ಮುರಲೀಮೋಹನ ಚೂಂತಾರು ರವರ ನೇತೃತ್ವದ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಮೂಲಕ ಪ್ರಕಾಶನಗೊಳ್ಳುತ್ತಿದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ