ಸ್ವಾತಂತ್ರ್ಯ ಹೇಗೆ ಕಳೆದುಕೊಂಡೆವು, ಪಡೆದುಕೊಂಡೆವು ಎಂದು ಅವಲೋಕಿಸುವ ಸಮಯ: ಪ್ರೊ. ವಾದಿರಾಜ ಗೋಪಾಡಿ ಅಭಿಮತ
ಮಂಗಳೂರು: ಭಾರತ ಸ್ವತಂತ್ರವಾಗಿ 75 ವರ್ಷಾಚರಣೆ ಸಂಧರ್ಭದಲ್ಲಿ ಯಾರಿಂದ ಸ್ವತಂತ್ರ ಬಂತು, ಯಾರಿಂದ ಹೇಗೆ ಸ್ವತಂತ್ರವನ್ನು ಹೇಗೆ ಕಳೆದುಕೊಂಡೆವು ಎಂಬುದನ್ನು ಅವಲೋಕಿಸಬೇಕು. ಸ್ವಾತಂತ್ರ ಯಾರೋ ಕೊಟ್ಟು ಹೋದ ಬಿಟ್ಟಿ ವಸ್ತುವಲ್ಲ. ಅದರ ಹಿಂದೆ ಸುಧೀರ್ಘ ತಪಸ್ಸು ಇದೆ. ಇತಿಹಾಸವನ್ನು ತಿಳಿದುಕೊಂಡು ದೇಶ ವಿಭಜಕ ಶಕ್ತಿಗಳನ್ನು ಅರಿತುಕೊಂಡು ಮಟ್ಟ ಹಾಕುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು, ಎಂದು ಮಣಿಪಾಲದ ಎಂ.ಐ.ಟಿ ಪ್ರಾಧ್ಯಾಪಕ ಪ್ರೊ. ವಾದಿರಾಜ ಗೋಪಾಡಿ ಕರೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠ, ತುಳು ಅಧ್ಯಯನ ಪೀಠ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ (ರಿ) ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ಸಹಯೋಗದಲ್ಲಿ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ನಡೆದ ಅಮೃತ ಭಾರತಿ- ವಿಶ್ವ ಸಾರಥಿ ಸರಣಿ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪ್ರೊ. ಜಯಪ್ಪ, ಒಂದು ತುತ್ತಿನ ಅನ್ನಕ್ಕೂ ಕಷ್ಟಪಡುತ್ತಿದ್ದ ಹಿರಿಯರು ಹೋರಾಟ ಮಾಡಿ ಜೀವತ್ಯಾಗ ಮಾಡಿ ಈ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಇಂದಿಗೂ ಗಡಿಭಾಗದಲ್ಲಿ ದೇಶ ಕಾಯುವ ಸೈನಿಕರು ಪರರ ಆಕ್ರಮಣಗಳನ್ನು ತಡೆಯೊಡ್ಡಿ ನಾವು ಸ್ವತಂತ್ರರಾಗಿರಲು ಸಾಧ್ಯ ಮಾಡಿಕೊಟ್ಟಿದ್ದಾರೆ, ಎಂದರು.
ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಉಪಸ್ಥಿತರಿದ್ದು, ಮಹಾಭಾರತದಲ್ಲಿ ಕೃಷ್ಣನ ಸಾರಥ್ಯ ಮತ್ತು ಮಾತು ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಿದ್ದು, ಭಾರತ ವಿಶ್ವಸಾರಥ್ಯ ಮತ್ತೆ ಸ್ಥಾಪಿಸುವ ನಿಟ್ಟಿನಲ್ಲಿ ಯುವಮನಸ್ಸುಗಳು ರಾಷ್ಟ್ರಪ್ರಜ್ಞೆ ಜಾಗೃತಗೊಳಿಸಬೇಕೆಂದು ಹೇಳಿದರು.
ಕೊಂಕಣಿ ಅಧ್ಯಯನ ಪೀಠದ ಸಂಯೋಜಕ ಡಾ. ಜಯವಂತ ನಾಯಕ್ ಸರಣಿ ಉಪನ್ಯಾಸದ ವರದಿ ಮಂಡಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ (ರಿ), ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗದ ಕಾರ್ಯದರ್ಶಿ ವೆಂಕಟೇಶ ನಾಯಕ್ ಸ್ವಾಗತಿಸಿದರು, ಉಪನ್ಯಾಸಕಿ ಆಶಾಲತಾ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ತುಳು ಅಧ್ಯಯನ ಪೀಠದ ಡಾ. ಮಾಧವ ಎಂ. ಕೆ , ಕಾವ್ಯಾ ಪಿ ಹೆಗ್ಡೆ, ಡಾ. ದೇವದಾಸ ಪೈ, ಡಾ.ಜಗದೀಶ ಬಿ ಮೊದಲಾದವರು ಉಪಸ್ಥಿತರಿದ್ದರು.