ಮೂಡುಬಿದಿರೆ: ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ವೈದ್ಯಶಾಸ್ತ್ರ ಹಾಗೂ ಆಯುರ್ವೇದ ವೈದ್ಯ ಶಾಸ್ತ್ರ ಉದ್ದೇಶ ಒಂದೇ ಆಗಿದ್ದರೂ ರೋಗವನ್ನು ಬಗೆಹರಿಸುವ ವಿಧಾನದಲ್ಲಿ ವ್ಯತ್ಯಾಸವಿದೆ ಎಂದು ಉಡುಪಿ ಎಸ್. ಡಿ. ಎಂ ಆಯುರ್ವೇದ ಕಾಲೇಜಿನ ವಿಶ್ರಾಂತ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮ ಹೇಳಿದರು.
ಆಳ್ವಾಸ್ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಹಾಗು ಆಸ್ಪತ್ರೆ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರಗೋಷ್ಠಿ ‘’ತೇಜಸ್ -2022’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ಹಿಂದಿನ ಕಾಲದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯು ವಿರಳವಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ವ್ಯಾಯಾಮದ ಕೊರತೆ ಹಾಗೂ ಅತಿಯಾದ ಜಂಕ್ ಫುಡ್ ಸೇವನೆ ಭಾರತೀಯರನ್ನು ಗಂಭೀರ ಸಮಸ್ಯೆಯಿಂದ ಬಳಲುವಂತೆ ಮಾಡಿದೆ. ನಿಯಮಿತ ಆಹಾರ, ಪಥ್ಯೆ ಹಾಗು ಆರೋಗ್ಯದ ಮೇಲೆ ಸ್ವ-ನಿಯಂತ್ರಣ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಲು ಸಹಾಯಕ ಎಂದರು.
ವೈಜ್ಞಾನಿಕ ಗೋಷ್ಠಿಗಳಲ್ಲಿ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ಕಾಯಚಿಕಿತ್ಸಾ ಹಾಗು ಮಾನಸರೋಗ ವಿಭಾಗದ ಮುಖ್ಯಸ್ಥೆ ಡಾ. ಶ್ರೀಲತಾ ಕಾಮತ್,"ಅನ್ರಿವಿಲಿಂಗ್ ದಿ ಎಟಿಪತೋಜೆನೆಸಿಸ್ ಆಫ್ ಗ್ರಹಣಿ ರೋಗ" ಎಂಬ ವಿಷಯದ ಕುರಿತು, ಕೇರಳದ ಕಣ್ಣೂರಿನ ಸರ್ಕಾರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಆರೋಗ್ಯಾಧಿಕಾರಿ ಡಾ. ಗೋಪಕುಮಾರ್.ಎಸ್, "ಪ್ರಿನ್ಸಿಪಲ್ಸ್ ಆಂಡ್ ಪ್ರಾಕ್ಟೀಸಸ್ ಆಫ್ ಗ್ರಹಣಿ ರೋಗ" ಎಂಬ ವಿಷಯದ ಕುರಿತು, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ರವಿಪ್ರಸಾದ್ ಹೆಗ್ಡೆ "ಎಮರ್ಜೆನ್ಸ್ ಆಫ್ ಸತ್ವವಜಯ ಚಿಕಿತ್ಸಾ ಇನ್ ದಿ ಮ್ಯಾನೇಜ್ಮೆಂಟ್ ಆಫ್ ಗ್ರಹಣಿ ರೋಗ", ಉಡುಪಿ ಆದರ್ಶ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನ ಡಾ.ಸತೀಶ್ ನಾಯಕ್ "ಇರಿಟೇಬಲ್ ಬೊವೆಲ್ ಸಿಂಡ್ರೋಮ್ -ಆ್ಯನ್ ಅಪ್ಡೇಟ್" ಎಂಬ ವಿಷಯದ ಕುರಿತು ಮಾತನಾಡಿದರು.
ರಾಷ್ಟೀಯ ವಿಚಾರಗೋಷ್ಠಿಯಲ್ಲಿ ಒಟ್ಟು 350 ಕ್ಕಿಂತಲೂ ಅಧಿಕ ಪೇಪರ್ ಪ್ರೆಸೆಂಟೇಷನ್ಗಳು ನೆರವೇರಿದವು. ’ತೇಜಸ್ -2022’ರ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ 35 ಪೋಸ್ಟರ್ ಪ್ರೆಸೆಂಟೇಷನ್, 25 ಲೋಗೋಗಳು, 4 ಪ್ರಮೋಷನಲ್ ವೀಡಿಯೋಗಳು ಭಾಗಿಯಾಗಿದ್ದವು.
ರಾಜಸ್ತಾನ್, ತಮಿಳುನಾಡು, ಕೇರಳ, ಗೋವಾ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಆಯುರ್ವೇದ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ವೈದ್ಯರು, ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು. ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಸಜಿತ್ ಎಂ, ಉಡುಪಿ ಆದರ್ಶ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ನ ಡಾ.ಸತೀಶ್ ನಾಯಕ್ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಶೀಲ್ ಶೆಟ್ಟಿ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ರವಿಪ್ರಸಾದ್ ಹೆಗ್ಡೆ, ಕಾರ್ಯಕ್ರಮ ಸಂಯೋಜಕ ಡಾ ಪ್ರಶಾಂತ್ ಜೈನ್ ಉಪಸ್ಥಿತರಿದ್ದರು.
ಆಳ್ವಾಸ್ ಆಯುರ್ವೇದ ಕಾಲೇಜಿನ ರೋಗ ನಿದಾನ ವಿಭಾಗದ ಪ್ರಾಧ್ಯಾಪಕಿ ಡಾ. ಗೀತಾ.ಬಿ. ಮಾರ್ಕಂಡೇಯ ನಿರೂಪಿಸಿ ಡಾ. ವಿನಿತಾ ಡಿಸೋಜಾ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ