ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿನ ವಾಣಿಜ್ಯ ವಿಭಾಗವು, ಜೆಸಿಐ ಮಂಗಳೂರು ಸಾಮ್ರಾಟ್ ಸಹಯೋಗದೊಂದಿಗೆ ʼಭವಿಷ್ಯದ ತರಬೇತಿ ಕಾರ್ಯಕ್ರಮʼವನ್ನು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ಆಯೋಜಿಸಿತ್ತು.
ಜೆಸಿಐ ಇಂಡಿಯಾ ವಲಯ ತರಬೇತುದಾರ (ವಲಯ XV) ಜೆಸಿ ಕಾರ್ತಿಕ್ ಶಾಸ್ತ್ರಿ ಅವರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ಆಧಾರಿತ ಸಂದರ್ಶನ ಕುರಿತು ತರಬೇತಿ ನೀಡಿದರು. ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ವ್ಯಕ್ತಿತ್ವ, ನಾಯಕತ್ವದ ಗುಣ ಮತ್ತು ಸಂವಹನ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕೆಂದು ಕರೆ ನೀಡಿದರು. ಜೆಸಿಐ ಮಂಗಳೂರು ಕಾರ್ಯದರ್ಶಿ ಅನೀಶ್ ಚಂದ್ರ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಇದಕ್ಕೂ ಮುನ್ನ ಪ್ರಾಂಶುಪಾಲೆ ಡಾ.ಅನಸೂಯಾ ರೈ, ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ನೆರವಾಗುವ ಇಂತಹ ಕಾರ್ಯಕ್ರಮಗಳ ಗರಿಷ್ಠ ಪ್ರಯೋಜನ ಪಡೆಯುವಂತೆ ಕರೆ ನೀಡಿದರು . ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಸುಧಾ ಎನ್.ವೈದ್ಯ ತಮ್ಮ ಮುನ್ನುಡಿಯಲ್ಲಿ, ಕೆಲಸದಲ್ಲಿ ಸ್ಮಾರ್ಟ್ನೆಸ್ ಕೂಡ ಮುಖ್ಯ. ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಕಾರ್ಪೊರೇಟ್ ಕೌಶಲ್ಯಗಳು ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳುವಿಕೆ ಕೂಡ ಮುಖ್ಯವಾಗಿದೆ, ಎಂದರು.
ಕಾಮರ್ಸ್ ಅಸೋಸಿಯೇಷನ್ ಮತ್ತು ಗ್ರಾಹಕ ಕ್ಲಬ್ ಸಹಾಯಕ ನಿರ್ದೇಶಕ ಡಾ. ಎ ಸಿದ್ದಿಕ್ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ, ಮೃದು ಕೌಶಲ್ಯ ಮತ್ತು ಸಂದರ್ಶನಕ್ಕೆ ಸಾಕಷ್ಟು ಜ್ಞಾನವನ್ನು ಹೊಂದಿರುವುದರ ಮಹತ್ವವನ್ನು ಒತ್ತಿ ಹೇಳಿದರು. ಅರ್ತಿಕಾ ಕಾರ್ಯಕ್ರಮ ನಿರೂಪಿಸಿ, ಪ್ರೀತಿಕಾ ವಂದಿಸಿದರು.