
ರಾಜಕೀಯದ ಹೊಲಸು ಗಬ್ಬೆದ್ದು ನಾರುತಿದೆ
ಪ್ರಜೆಗಳನು ಕಾಡುತ್ತ, ನಾಡನೊಡೆಯುತಿದೆ
ನಿಜ ಬಣ್ಣ ಮರೆಸಿಟ್ಟ ಸ್ವಾರ್ಥ ಸಾಧಕರಿಂಗೆ
ಸಜೆಯನೀವವ ಪ್ರಜೆಯು-ಕವಿತಾಕ್ಷರ
ಸಟೆ, ಮೋಸ, ದುರುಳತನವಿದ್ದರವ ನಾಯಕನು
ಪೀಠವನು ಪಡೆಯುವುದೆ ಅವನ ಗುರಿಯು
ಲೂಟಿ ಮಾಡುತ ಮೆರೆವ, ನಾಡಿನೇಳಿಗೆ ಮರೆವ
ಕೆಟ್ಟ ರಾಜಕರವರು - ಕವಿತಾಕ್ಷರ
ವಂಚಕರ ಗುಂಪಿನಲಿ ಸಜ್ಜನನು ತಬ್ಬಲಿಯು
ಹೊಂಚುತಿರುವುದು ಕೆಡುಕು ಬಲಿ ಪಡೆಯಲು
ಸಂಚುಗಳ ತಡೆತಡೆದು, ಒಳಿತನ್ನು ಪೋಷಿಸುವ
ಚಿಂತಕನು ನಿಜ ದೊರೆಯು-ಕವಿತಾಕ್ಷರ
ನಯವಿನಯವಿಲ್ಲದಿಹ ದುರುಳರಾಳುವ ಪಕ್ಷ
ನ್ಯಾಯವಿಯುವುದೇನು ಸಾಮಾನ್ಯಗೆ
ರಾಜ್ಯದೇಳಿಗೆಯಲ್ಲಿ ತನ್ನ ಏಳ್ಗೆಯ ಕಾಣ್ವ
ನಾಯಕನ ಬೆಂಬಲಿಸೋ-ಕವಿತಾಕ್ಷರ
-ಕವಿತಾ ಅಡೂರು, ಪುತ್ತೂರು
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ