ಧರ್ಮಸ್ಥಳ: ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂಗೀತ ಕೃತಿಗಳ ಲೋಕಾರ್ಪಣೆ

Upayuktha
0

ಉಜಿರೆ: ಪುರಾಣ ವಾಚನ, ವೇದಘೋಷ, ಸಂಗೀತ ನೃತ್ಯ, ಸ್ತುತಿ ಮೊದಲಾದ ಸೇವೆಗಳಿಂದ ನಾವು ದೇವರನ್ನು ಸಾಕ್ಷಾತ್ಕರಿಸಿ ಆರಾಧನೆ ಮಾಡಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಸುರತ್ಕಲ್‌ನ ಮಣಿಕೃಷ್ಣಅಕಾಡೆಮಿ ಆಶ್ರಯದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ರಚಿಸಿ ಪ್ರಕಟಿಸಿದ “ಮಂಜುನಾದ” ಕೃತಿಗಳನ್ನು ಭಾನುವಾರ ಧರ್ಮಸ್ಥಳದಲ್ಲಿ ವಸಂತ ಮಹಲ್‌ನಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.


ಸಂಗೀತ ಮತ್ತು ಸ್ತುತಿ ಸೇವೆ ದೇವರಿಗೆ ಅತ್ಯಂತ ಪ್ರಿಯವಾಗಿದ್ದು ಸುಶ್ರಾವ್ಯವಾಗಿ ಇವುಗಳನ್ನು ಹಾಡಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು. ಭಕ್ತರಿಗೆ ತೃಪ್ತಿ ಆದರೆ ಭಗವಂತನಿಗೂ ತೃಪ್ತಿಯಾಗುತ್ತದೆ. ಖ್ಯಾತ ಸಂಗೀತ ಕಲಾವಿದರಾದ ಡಾ. ರಾಜ್‌ಕುಮಾರ್ ಭಾರತಿ ಅವರು ಗೌರವಯುತ ಸಾಹಿತ್ಯದ ಮೂಲಕ ಸುಶ್ರಾವ್ಯವಾದ ರಾಗ ಸಂಯೋಜನೆಯೊಂದಿಗೆ ಶ್ರೀ ಮಂಜುನಾಥ ಸ್ವಾಮಿ ಬಗ್ಗೆ ರಚಿಸಿದ ಶಾಸ್ತ್ರೀಯ ಗೀತೆಗಳು ಉತ್ತಮವಾಗಿ ಮೂಡಿ ಬಂದಿವೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಅಕಾಡೆಮಿಯ ಮುಂದಿನ ಕೃತಿಗಳ ಪ್ರಕಾಶನಕ್ಕೂ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


ಕನ್ನಡದಲ್ಲೇ ರಚಿಸಿದ ಶಾಸ್ತ್ರೀಯ ಸಂಗೀತ ಕೃತಿಗಳು ಶ್ರೀ ಸ್ವಾಮಿಗೆ ಸಂದ ಅಪೂರ್ವ ಸೇವೆಯಾಗಿದೆ ಎಂದು ಹೇಳಿ ಸುಶ್ರಾವ್ಯವಾಗಿ ಶಾಸ್ತ್ರೀಯ ಸಂಗೀತ ಹಾಡಿದ ಎಲ್ಲಾ ಕಲಾವಿದರನ್ನು ಹೆಗ್ಗಡೆಯವರು ಅಭಿನಂದಿಸಿ ಗೌರವಿಸಿದರು.


ಈ ಬಗ್ಗೆ ವಿಶೇಷ ಶ್ರಮ ವಹಿಸಿದ ಅಕಾಡೆಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್‌ ಅವರ ಸೇವೆ ಸ್ತುತ್ಯಾರ್ಹವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಉಡುಪಿಯ ಪ್ರೊ. ಅರವಿಂದ ಹೆಬ್ಬಾರ್ ಮತ್ತು ಡಾ. ರಾಜಕುಮಾರ್ ಭಾರತಿ ಶುಭಾಶಂಸನೆ ಮಾಡಿದರು.


ಅಧ್ಯಕ್ಷತೆ ವಹಿಸಿದ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, ಪುಣ್ಯಕ್ಷೇತ್ರಗಳ ಬಗ್ಗೆ ಶಾಸ್ತ್ರೀಯ ಸಂಗೀತದ ಕೃತಿಗಳನ್ನು ಪ್ರಕಟಿಸುವುದು ಸ್ತುತ್ಯಾರ್ಹವಾಗಿದೆ. ಧರ್ಮಸ್ಥಳ ಕ್ಷೇತ್ರದಿಂದ ಶುಭಾರಂಭಗೊಂಡ ಈ ಕಾರ್ಯ ಯಶಸ್ವಿಯಾಗಲೆಂದು ಹಾರೈಸಿದರು. ಪ್ರೀತಿ-ವಿಶ್ವಾಸ ಹಾಗೂ ದೃಢ ಭಕ್ತಿಯಿಂದ ಶಾಸ್ತ್ರೀಯ ಸಂಗೀತ ಹಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವರ್ಧನೆಯೊಂದಿಗೆ ಶಾಂತಿ, ನೆಮ್ಮದಿ ಸಿಗುತ್ತದೆ.


ಸುಶ್ರಾವ್ಯ ಸಂಗೀತವನ್ನುಎಲ್ಲರೂಇಲ್ಲಿ ಕೇಳಿ, ಆನಂದಿಸಿ ಅನುಭವಿಸಿದ್ದೇವೆ ಎಂದುಅವರು ಸಂಗೀತ ಕಲಾವಿದರನ್ನು ಶ್ಲಾಘಿಸಿ ಅಭಿನಂದಿಸಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಗೀತ ಅಭ್ಯಾಸಕ್ಕೆ ಅವಕಾಶ ನೀಡಲಾಗಿದ್ದು. ಯುವಜನತೆ ಕೇವಲ ವಿದ್ಯಾವಂತರಾದರೆ ಸಾಲದು. ಪ್ರಜ್ಞಾವಂತರೂ ಆಗಬೇಕು ಎಂದುಅವರು ಸಲಹೆ ನೀಡಿದರು.


ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಮತ್ತು ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು. ಮಣಿಕೃಷ್ಣಅಕಾಡೆಮಿ ಅಧ್ಯಕ್ಷ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್ ಸ್ವಾಗತಿಸಿದರು. ಕಾರ್ಕಳದ ಡಾ. ಎಸ್.ಆರ್. ಅರುಣ ಕುಮಾರ್‌ ಧನ್ಯವಾದವಿತ್ತರು. ಉಡುಪಿಯ ರಾಮಾಂಜನೇಯ ಮತ್ತು ಶ್ರೀನಿವಾಸರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top