ಆಳ್ವಾಸ್ ಪ.ಪೂ ಕಾಲೇಜು: ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ

Upayuktha
0

ಮೂಡುಬಿದಿರೆ: ರಾಷ್ಟ್ರೀಯ ಪ್ರಜ್ಞೆಯಿಂದ ಕೂಡಿ ನಾವು ಮಾಡುವ ಸೇವೆಯು ಯೋಜನಾ ಬದ್ಧವಾಗಿದ್ದರೆ ಭಾರತ ದೇಶವು ಅಭಿವೃದ್ಧಿಶೀಲ ರಾಷ್ಟ್ರ ಎಂಬ ಉಪಾಧೇಯದಿಂದ ಬಿಡುಗಡೆ ಹೊಂದಿ ಅಭಿವೃದ್ಧಿ ರಾಷ್ಟ್ರವೆಂದು ಪರಿವರ್ತನೆಯಾಗುತ್ತದೆ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು. ಅವರು ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಉದ್ಘಾಟನೆ ಹಾಗೂ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಉಪನ್ಯಾಸ ನೀಡುತ್ತಿದ್ದರು.


ಶಿಕ್ಷಣ ಎಂದ ಕೂಡಲೇ ಧನ ಸಂಪಾದನೆಗೆ, ಕೌಟುಂಬಿಕ ನಿರ್ವಹಣೆಗೆ ಎಂಬ ಸರಳವಾದ ಧ್ಯೇಯವನ್ನು ನಾವೆಲ್ಲರು ತಿಳಿದಿದ್ದೇವೆ. ಅಷ್ಟೇ ಆದರೆ ಪ್ರಾಣಿಗಳ ಬದುಕಿಗೂ ಬುದ್ಧಿವಂತನಾದ ಮನುಷ್ಯನ ಬದುಕಿಗೂ ಏನೂ ವ್ಯತ್ಯಾಸವಿರುವುದಿಲ್ಲ. ಈ ರೀತಿಯ ವಿದ್ಯಾಭ್ಯಾಸದಿಂದಾಗಿಯೇ ಇಂದು ಪ್ರಕೃತಿಯಲ್ಲಿ ಸಂಸ್ಕೃತಿ ನಷ್ಟವಾಗಿ ವಿಕೃತಿ ಎದ್ದು ಕಾಣಿಸುತ್ತಿದೆ. ಒಟ್ಟು ಜೀವರಾಶಿಗಳಲ್ಲಿ ತೊಂಬತೊಂಬತ್ತು ಪತ್ರಿಶತ ಪ್ರಕೃತಿಗೆ ಒಗ್ಗಿಕೊಂಡು ಬದುಕಿದರೆ ಕೇವಲ ಒಂದು ಪ್ರತಿಶತ ಇರುವ ಮನುಷ್ಯನು ಮಾತ್ರ ತನ್ನ ಅತಿಯಾಸೆ ಮತ್ತು ಸ್ವಾರ್ಥದಿಂದಾಗಿ ಪ್ರಕೃತಿಯನ್ನು ನಾಶಮಾಡುತ್ತಿದ್ದಾನೆ. ವಿವಿಧ ಜಾತಿ, ಪಂಥ, ಪಂಗಡಗಳೆಂದು ಮೇಲು-ಕೀಳು, ಶ್ರೀಮಂತ-ಬಡವ, ಸ್ಪೃಶ್ಯ-ಅಸ್ಪೃಶ್ಯ ಎನ್ನುವ ತರತಮಗಳಿಂದ ದೇಶ ಅಲ್ಲೋಲ ಕಲ್ಲೋಲವಾಗುತ್ತಿದೆ. ಹಾಗಾಗದಂತೆ ಆಗಬೇಕಾದರೆ ಪ್ರತಿಯೊಬ್ಭ ಭಾರತೀಯನೂ ರಾಷ್ಟ್ರೀಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು. ಈ ಭೇದ ಭಾವಗಳನ್ನು ತ್ಯಜಿಸಿ ನಾವೆಲ್ಲರೂ ಭಾರತೀಯರಾಗಿ ರಾಷ್ಟ್ರೀಯ ಪ್ರಜ್ಞೆಯಿಂದ ಜಾಗೃತರಾದರೆ ನಮ್ಮ ದೇಶ ಶೀಘ್ರವಾಗಿ ಅಭಿವೃದ್ಧಿಹೊಂದುತ್ತದೆ ಎಂದರು.


ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್ ಮಾತನಾಡಿ ಶೈಕ್ಷಣಿಕ ಸೇವೆಯ ನಿಮಿತ್ತವಾಗಿ ವಿದ್ಯಾರ್ಥಿಗಳು ಸೈನಿಕರ ವ್ಯಕ್ತಿತ್ವವನ್ನು ರೂಪಿಸಿಕೊಂಡರೆ ಬದುಕಿನಲ್ಲಿ ಸಾಧನೆಯನ್ನು, ಸಾರ್ಥಕತೆಯನ್ನು ಪಡೆಯಬಹುದಾಗಿದೆ. ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸುವುದರ ಜೊತೆಗೆ ರಾಷ್ಟ್ರ ಪ್ರೇಮಿಗಳಾಗಿ ರೂಪುಗೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ವೇದಿಕೆಯಲ್ಲಿ ವಾಣಿಜ್ಯ ವಿಭಾಗ ಡೀನ್ ಪ್ರಶಾಂತ್ ಎಂ.ಡಿ ಮತ್ತು ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿಯವರು ಉಪಸ್ಥಿತರಿದ್ದರು. ಎನ್.ಎಸ್.ಎಸ್ ಘಟಕದ ಸಂಯೋಜಕಿ ಶೆಲೆಟ್ ಮೋನಿಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರೆ, ರೂಪ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಅಂಬರೀಷ್ ಚಿಪ್ಳೂಣ್ಕರ್ ನಿರ್ವಹಿಸಿದರು, ಮೇಘನಾ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top