ಕುಂಬ್ಳೆ: "ಪ್ರಾಚೀನ ಕಾವ್ಯಗಳಿಗೆ ತಿಲಕಪ್ರಾಯವಾದುದು ಶ್ರೀಮದ್ವಾಲ್ಮೀಕೀ ಮಹರ್ಷಿ ವಿರಚಿತ ರಾಮಾಯಣ. ಆದಿಕಾವ್ಯವಾದ ಅದು ಸಾರ್ವಕಾಲಿಕ ಸತ್ಯ ಮಾತ್ರವಲ್ಲ ನಿಚ್ಚಂಪೊಸತೆನಿಪ ಹಾಡುಗಬ್ಬ. ಪ್ರತಿದಿನವೂ ಭಕ್ತಿಯಿಂದ ಪಾರಾಯಣ ಮಾಡಬೇಕಾದ ಮಹಾಕಾವ್ಯವದು. ಶ್ರಾವಣ ಮಾಸದಲ್ಲಿ ರಾಮಾಯಣ ವಾಚನ-ವ್ಯಾಖ್ಯಾನಕ್ಕೆ ವಿಶೇಷ ಔಚಿತ್ಯವಿದೆ" ಎಂಬುದಾಗಿ ಸಾಹಿತಿ, ಶಿಕ್ಷಣತಜ್ಞ ಶ್ರೀ ವಿ.ಬಿ. ಕುಳಮರ್ವ ಅಭಿಪ್ರಾಯ ಪಟ್ಟರು.
ಆದಿ ಗಮಕಿಗಳಾದ ಕುಶ ಲವರ ಜನ್ಮ ಮಾಸವಾಗಿರುವ ಶ್ರಾವಣ ಮಾಸದಲ್ಲಿ ಕಾಸರಗೋಡಿನ ಹಲವು ಕೇಂದ್ರಗಳಲ್ಲಿ ಕರ್ನಾಟಕ ಗಮಕ ಕಲಾಪರಿಷತ್ತು (ರಿ) ಮತ್ತು ಸಿರಿಗನ್ನಡ ವೇದಿಕೆ (ರಿ) ಎಂಬ ಉಭಯ ಸಂಸ್ಥೆಗಳ ಕೇರಳ ಗಡಿನಾಡ ಘಟಕಗಳ ಆಶ್ರಯದಲ್ಲಿ ಕಾಸರಗೋಡಿನ ವಿವಿಧ ಕೇಂದ್ರಗಳಲ್ಲಿ ರಾಮಾಯಣ ಕಾವ್ಯದ ವಾಚನ-ವ್ಯಾಖ್ಯಾನಗಳ ಸರಣಿ ಕಾರ್ಯಕ್ರಮಗಳನ್ನು ದಶಕಗಳಿಂದ ನಡೆಸಿಕೊಂಡು ಬರುತ್ತಿರುವುದು ಸಂಪ್ರದಾಯವಾಗಿದೆ.
ಅದರ ಅಂಗವಾಗಿ ಮೀಯಪದವಿನ ಶ್ರೀ ವಿದ್ಯಾವರ್ಧಕ ಹಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ಜರಗಿದ 'ಗಮಕ ಶ್ರಾವಣ' ಕಾರ್ಯಕ್ರಮದಲ್ಲಿ ಪ್ರಸ್ತಾವನೆಯೊಂದಿಗೆ ಸಮಾರಂಭದ ಔಚಿತ್ಯವನ್ನು ವಿಶದಪಡಿಸಿ ಅವರು ಮಾತನಾಡಿದರು. ದೀಪ ಬೆಳಗುವುದರೊಂದಿಗೆ ಸಮಾರಂಭವನ್ನು ಉದ್ಘಾಟಿಸಿದ ಶಾಲಾ ಸಂಚಾಲಕರಾದ ಶ್ರೀಮತಿ ಪ್ರೇಮಾ ತೊಟ್ಟೆತ್ತೋಡಿ ಅವರು ಚಂದ್ರಹಾಸನ ಬಾಲಲೀಲೆಗೆ ಸಂಬಂಧಿಸಿದ ಕಾವ್ಯಭಾಗವನ್ನು ಸುಶ್ರಾವ್ಯವಾಗಿ ಹಾಡಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಕಾಂತ ರಾವ್ ಮಾತನಾಡುತ್ತಾ ಗಮಕಶ್ರಾವಣದ ಮಹತ್ವವನ್ನು ಸಭೆಗೆ ತಿಳಿಸಿದರು. ಗಮಕಕಲಾ ಪರಿಷತ್ತಿನ ಅಧ್ಯಕ್ಷ ಶ್ರೀ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ತೊರವೆ ರಾಮಾಯಣ ಮಹಾಕಾವ್ಯದಿಂದಾಯ್ದ "ಸೀತಾಪಹರಣ" ಎಂಬ ಭಾಗವನ್ನು ಗಮಕಿ ಶ್ರೀ ಶೇಖರ ಶೆಟ್ಟಿ ಬಾಯಾರು ಅವರು ಸುಶ್ರಾವ್ಯವಾಗಿ ವಾಚನ ಗೈದರು. "ಗಮಕ ಕಲಾಧರೆ" ಕುಮಾರಿ ಶ್ರದ್ಧಾ ಭಟ್ ನಾಯರ್ಪಳ್ಳ ಅವರು ಸೋದಾಹರಣವಾಗಿ ವ್ಯಾಖ್ಯಾನ ಗೈದರು.
ಶಾಲಾ ಸಾಹಿತ್ಯ ಕ್ಲಬ್ ನ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಕು| ಅನನ್ಯ ಮತ್ತು ಕು|ಹರ್ಷಿತಾ ಪ್ರಾರ್ಥನೆ ಗೈದರು. ಕು|ವಿಶಾಲಾಕ್ಷಿ ಸ್ವಾಗತಿಸಿ ಶ್ರೀ ನಿಶಾಂತ್ ವಂದನಾರ್ಪಣೆ ಮಾಡಿದರು.ಡಾ|ಜಯಪ್ರಕಾಶ್ ತೊಟ್ಟೆತ್ತೋಡಿ ಹಾಗೂ ಮುಖ್ಯೋಪಾಧ್ಯಾಯ ಶ್ರೀ ಶಿವಶಂಕರ ಭಟ್ ಅವರು ಗಮಕಿಗಳಿಗೆ ಗೌರವಾರ್ಪಣೆ ಮಾಡಿದರು. ವಿದ್ಯಾರ್ಥಿನಿ ಕು|ಲಿಖಿತ ಅವರು ಕಾರ್ಯಕ್ರಮದ ನಿರೂಪಣೆ ಗೈದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ