ಉಜಿರೆ: ವಿದ್ಯಾರ್ಥಿ ದೆಸೆಯಲ್ಲೇ ಅವಕಾಶ ಬಂದಾಗ ಅಂತಃಸತ್ವದ ಶಕ್ತಿಯಿಂದ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅವಕಾಶಗಳನ್ನು ಸೃಷ್ಟಿಮಾಡಿಕೊಂಡು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಮಾಜಿಕ ಬದ್ಧತೆಯಿಂದ ಪರಿಶ್ರಮಪಟ್ಟರೆ ನಾಯಕನಾಗಲು ಸಾಧ್ಯ. ಜ್ಞಾನದ ಜತೆಗೆ ಕೌಶಲವಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ನುಡಿದರು.
ಅವರು ಜು.19 ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರತ್ನತ್ರಯ ಸಭಾಭವನದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಪದಪ್ರದಾನ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಸ್ವಚ್ಛತಾ ಸೇನಾನಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳ ಸ್ವಪ್ರಯತ್ನ, ಶಿಕ್ಷಕರ ಮಾರ್ಗದರ್ಶನದ ಸದ್ವಿನಿಯೋಗದಿಂದ ಅವರ ಪ್ರತಿಭೆ ಮತ್ತು ಸಾಧನೆ ಗೌರವ ತಂದಿದೆ. ವರ್ತಮಾನದ ನಿರಂತರತೆ, ನಿರಂತರ ಯಶಸ್ಸಿನತ್ತ ದಿಟ್ಟ ಹೆಜ್ಜೆಯಿರಿಸಿ ಮುನ್ನಡೆಯಬೇಕು ಎಂದರು. ಇದೇ ಸಂದರ್ಭದಲ್ಲಿ ಕಳೆದ ಪಿ.ಯು.ಸಿ. ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಸಾಧನೆಗೈದ 11 ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿ ಪ್ರತಿನಿಧಿಗಳಿಗೆ ಗುರುತುಪತ್ರ ವಿತರಿಸಿ,ಸ್ವಚ್ಛತಾ ಸೇನಾನಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ವಿದ್ಯಾರ್ಥಿಗಳು ಶಿಸ್ತು, ಬದ್ಧತೆ, ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣದ ಜತೆಗೆ ಜೀವನ ಮೌಲ್ಯಗಳನ್ನು ಉಳಿಸಿ ಕಾಪಾಡಿಕೊಂಡು ಬರಬೇಕು. ಬದುಕಿನಲ್ಲಿ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ದುಶ್ಚಟ, ದುರಭ್ಯಾಸಗಳಿಗೆ ಬಲಿಬೀಳದೆ ಸಂಸ್ಥೆಯ ಗೌರವ ಹೆಚ್ಚಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ದಿನೇಶ್ ಚೌಟ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ನೆರವೇರಿಸಿ ನಿರ್ಧಿಷ್ಟ ಗುರಿ, ಛಲದ ಸಾಧನೆಯಿಂದ ಕಾಲೇಜಿನ 9 ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ 10ರೊಳಗಿನ ಸ್ಥಾನ ಪಡೆದು ಸಂಸ್ಥೆಯ ಹಿರಿಮೆ ಹೆಚ್ಚಿಸಿದ್ದಾರೆ. ಶಿಲೆ ಶಿಲ್ಪವಾಗಲು ಉಳಿಯಿಂದ ಕೆತ್ತಬೇಕು. ಅಂತೆಯೇ ಸಾಧನೆಗೆ ಪರಿಶ್ರಮದ ಛಲವಿರಬೇಕು. ಜೀವನದಲ್ಲಿ ತಾಳ್ಮೆ, ಜವಾಬ್ದಾರಿ, ಶ್ರದ್ಧೆ, ಶಿಸ್ತು ಅಳವಡಿಸಿಕೊಂಡರೆ ಯಶಸ್ಸು ಪಡೆಯಬಹುದು ಎಂದರು.
ಉಪನ್ಯಾಸಕ ಮಹಾವೀರ ಜೈನ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಹನಾ ಶೆಟ್ಟಿ ಸ್ವಾಗತಿಸಿ, ಧರಿತ್ರಿ ಭಿಡೆ ಮತ್ತು ಮಾನ್ಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಣಮ್ಯ ಜೈನ್ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ