|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತೆರೆಮರೆಯ ಶ್ರಮವೇ ತೆರೆಯ ಮೇಲಿನ ಯಶಸ್ಸನ್ನು ನಿರ್ಧರಿಸುತ್ತದೆ: ಧೀರಜ್ ನೀರುಮಾರ್ಗ

ತೆರೆಮರೆಯ ಶ್ರಮವೇ ತೆರೆಯ ಮೇಲಿನ ಯಶಸ್ಸನ್ನು ನಿರ್ಧರಿಸುತ್ತದೆ: ಧೀರಜ್ ನೀರುಮಾರ್ಗ

ವಿವೇಕಾನಂದ ಕಾಲೇಜಿನಲ್ಲಿ ಮೌನ ಕಿರು ಚಿತ್ರ ಬಿಡುಗಡೆ



ಪುತ್ತೂರು: ಸಿನಿಮಾ ಎಂಬ ಮಾಯಾಲೋಕ ಎಲ್ಲರ ಕನಸು. ಕಾಲೇಜು ವಿದ್ಯಾರ್ಥಿಗಳು ಸಿನಿಮಾ ಲೋಕದ ಕನಸಿಗೆ ನೀರೆರೆದು ಪೋಷಿಸಿದ್ದಾರೆ. ಯಾವುದೇ ಗೆಲುವು ಸಿಗಬೇಕಾದರೆ ಅಲ್ಲಿ ಶ್ರಮ ಮುಖ್ಯವೇ ಹೊರತು ಸರಳ ಹಾದಿಯಲ್ಲ. ಅದೇ ರೀತಿ ಸಿನಿಮಾ ಕ್ಷೇತ್ರದಲ್ಲಿ ಹಲವರು ತಮ್ಮ ಪರಿಶ್ರಮದ ಮೂಲಕವೇ ಸಾಧಕರಾಗಿ ಹೊರಹೊಮ್ಮಿದ್ದಾರೆ. ಈ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳನ್ನು ನೀಡುತ್ತಿರುವುದು ಸಂತಸದ ಸಂಗತಿ. ಈ ಅವಕಾಶಗಳನ್ನು ಸಧ್ವಿನಿಯೋಗಿಸಿಕೊಳ್ಳಬೇಕು. ಶ್ರದ್ಧೆ ಮತ್ತು ಪರಿಶ್ರಮದಿಂದ ಏನನ್ನು ಬೇಕಾದರು ಸಾಧಿಸಬಹುದು ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ಧೀರಜ್ ನೀರುಮಾರ್ಗ ಹೇಳಿದರು.


ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಮೌನ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಕಿರುಚಿತ್ರ ಬಿಡುಗಡೆಗೊಳಿಸಿ ಗುರುವಾರ ಮಾತನಾಡಿದರು.

ಸಿನಿಮಾದಲ್ಲಿ ಕಲಾವಿದರು ಜನರಿಂದ ಸದಾ ಗುರುತಿಸಲ್ಪಡುತ್ತಾರೆ. ಆದರೆ ನಿಜವಾಗಿಯೂ ಸಿನಿಮಾದ ಯಶಸ್ಸು ನಿಂತಿರುವುದು ತೆರೆ ಹಿಂದಿನ ಶ್ರಮದ ಮೇಲೆ. ಒಂದೊಳ್ಳೆ ತಂಡ ಬೆನ್ನೆಲುಬಾಗಿ ನಿಂತ ಕಾರಣ ಮೌನ ಉತ್ತಮ ರೀತಿಯಲ್ಲಿ ಮೂಡಿಬರಲು ಕಾರಣವಾಗಿದೆ. ವಿದ್ಯಾರ್ಥಿಗಳ ಪರಿಶ್ರಮ ಈ ಸಿನಿಮಾದಲ್ಲಿ ಎದ್ದು ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಮಾತನಾಡಿದ ರಾಜ್ ಸೌಂಡ್ಸ್ ಅ್ಯಂಡ್ ನೈಟ್ಸ್ ಖ್ಯಾತಿಯ ಹಾಸ್ಯನಟ ರವಿ ರಾಮಕುಂಜ, ಮೌನ ಕಿರುಚಿತ್ರ ಅದ್ಭುತವಾಗಿ ಮೂಡಿ ಬಂದಿದ್ದು, ಇನ್ನು ಮುಂದೆಯು ವಿದ್ಯಾರ್ಥಿಗಳು ಇಂತಹ ಪ್ರಯತ್ನಗಳಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.


ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಜಗತ್ತಿನಲ್ಲಿ ತಪ್ಪುಗಳನ್ನ ಹುಡಕುವವರು ಹಲವರಿದ್ದಾರೆ. ಆದರೆ ಪ್ರೋತ್ಸಾಹಿಸುವವರ ಸಂಖ್ಯೆ ಬಹಳ ವಿರಳ. ಅದೇ ರೀತಿ ತಪ್ಪುಗಳೂ ನಮಗೆ ಕಲಿಸುವ ಪಾಠಗಳು ಹಲವು. ಹೀಗಾಗಿ ವಿದ್ಯಾರ್ಥಿಗಳು ಸೂಕ್ತ ವೇದಿಕೆ ಸಿಕ್ಕಾಗ ಅದನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಆಸಕ್ತಿ ವಹಿಸಿದಾಗ ಸಂಸ್ಥೆ ಸದಾ ಬೆಂಬಲವಾಗಿ ನಿಲ್ಲುತ್ತದೆ. ಆ ಮೂಲಕ ಯಾವುದೇ ಕ್ಷೇತ್ರದಲ್ಲಾದರೂ ಪರಿಣಿತಿ ಹೊಂದುವತ್ತ ಯೋಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಕೋರಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಕಾಲೇಜಿನ ಎಂಸಿಜೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನ ತೋರುತ್ತಿದ್ದಾರೆ. ಕಲಿಕೆಯ ಜೊತೆಗೆ ಪ್ರಾಯೋಗಿಕವಾಗಿ ವಿಕಸನ ಟಿವಿ, ವಿಕಾಸ ಪತ್ರಿಕೆ, ವಿನೂತನ ಮ್ಯಾಗಜಿನ್‍ಗಳನ್ನೂ ಹೊರತರುವ ಮೂಲಕ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಅಸೈನ್‍ಮೆಂಟ್ ಒಂದನ್ನು ಮೌನ ಕಿರುಚಿತ್ರವಾಗಿ ತೆರೆಗೆ ತಂದಿರುವುದು ವಿಶೇಷ. ಈ ಸಾಧನೆಗೆ ಬೆಂಬಲವಾಗಿ ನಿಂತಿರುವ ಪ್ರಾಧ್ಯಾಪಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ನುಡಿದರು.


 ಈ ಸಂದರ್ಭ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ ವಿಕಾಸದ ‘ಐದರ ಸಂಭ್ರಮ ವಿಶೇಷ ಸಂಚಿಕೆ’ಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕ ಹಾಗೂ ಅಧ್ಯಾಪಕೇತರ ವೃಂದದವರು ಉಪಸ್ಥಿತರಿದ್ದರು.


ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ತಾರ ಕರುಣ್ ಸ್ವಾಗತಿಸಿ, ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಆರ್ ನಿಡ್ಪಳ್ಳಿ ವಂದಿಸಿದರು. ದ್ವಿತೀಯ ಎಂಸಿಜೆ ವಿದ್ಯಾರ್ಥಿನಿ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.

web counter

0 Comments

Post a Comment

Post a Comment (0)

Previous Post Next Post