ಸ್ವೀಕಾರ ಭಾವನೆಯಿಂದ ಕನ್ನಡ ಸುಧೃಢ

Upayuktha
0

ಉಳ್ಳಾಲ ಕಸಾಪದ 'ಕನ್ನಡದ ಕಲರವ'ದಲ್ಲಿ ಡಾ. ಚೇತನ್ ಸೋಮೇಶ್ವರ



ಉಳ್ಳಾಲ: ಕನ್ನಡವೆಂದರೆ  ಹಲವು ಭಾಷಿಗರನ್ನು, ಹಲವು ಸಂಸ್ಕೃತಿಗಳನ್ನು ಒಳಗೊಂಡಂತಹ ಒಂದು ಜೀವನ ಕ್ರಮ. ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ಕೊಟ್ಟ ಅನೇಕ ಮಹನೀಯರ ಮನೆಮಾತು ಮರಾಠಿ, ತಮಿಳು, ಮಲಯಾಳಂ ಅಥವಾ ಇನ್ನಿತರ ಬೇರೆ ಭಾಷೆಯಾಗಿತ್ತು, ಹೀಗೆ ಹಲವು ಭಾಷೆ, ಸಂಸ್ಕೃತಿಯ ಮೂಲಗಳಿಂದ ಬಂದಂತಹ ಒಳಿತುಗಳನ್ನು ಸ್ವೀಕರಿಸಿದ ಫಲವಾಗಿ ಕನ್ನಡವು ಇಂದು ಸುದೃಢವಾಗಿ ಬೆಳೆದು ನಿಂತಿದೆ. ಈ ಕೊಡುಕೊಳ್ಳುವಿಕೆ ಭಾವನೆಯ ಕನ್ನಡ ನಾಡು ನುಡಿಯ ಕುರಿತಾದ ನಮ್ಮ ಪ್ರೀತಿಯು ನಿರಂತರವಾಗಿರಬೇಕು ಎಂದು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ, ಕವಿ ಡಾ. ಚೇತನ್ ಸೋಮೇಶ್ವರ ಹೇಳಿದರು. 


ಅವರು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಘಟಕ, ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರ, ಕೊಲ್ಯ ಸೋಮೇಶ್ವರ ಮತ್ತು ಪರಿಜ್ಞಾನ ಪದವಿ ಪೂರ್ವ ಕಾಲೇಜು ಸೋಮೇಶ್ವರ ಇವರ ಸಹಯೋಗದಲ್ಲಿ ಸೋಮೇಶ್ವರದ ಪರಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಶನಿವಾರ  ನಡೆದ 'ಕನ್ನಡ ಕಲರವ' - ಕನ್ನಡ ವಿಕಸನ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ 'ಕನ್ನಡವೆಂದರೆ ಬರಿ ನುಡಿಯಲ್ಲ' ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು.


ಕನ್ನಡದ ಮನಸ್ಸು ಎಲ್ಲವನ್ನು ಸ್ವೀಕರಿಸುವ, ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ ಮಾತ್ರವಲ್ಲ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಆಶಯಕ್ಕನುಗುಣವಾಗಿ ಶತಮಾನಗಳಿಂದ ಬೆಳೆದಿದೆ ಎಂದರು.


ಕನ್ನಡ ಸಾಹಿತ್ಯ ಪರಿಷತ್ ನ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಅಧ್ಯಕ್ಷತೆ ವಹಿಸಿ, ನಾವು ಬಹು ಭಾಷಿಕ ವಲಯದಲ್ಲಿ ಬೆಳೆಯುತ್ತಿರುವವರು, ಭಾಷಾ ದ್ವೇಷವನ್ನು ಮಾಡದೇ  ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು, ಸಾಹಿತ್ಯವನ್ನು ಉಳಿಸಿ ಬೆಳೆಸೋಣ ಎಂದರು.


ಪರಿಜ್ಞಾನ ಕಾಲೇಜಿನ ಸಂಚಾಲಕರು ಮಹೇಶ್ ಎಲ್ ಬೋಂಡಾಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿಗಳಾದ ಶ್ರೀಮತ್ತಾಡಿ ಮತ್ತು ಕಾಲೇಜಿನ ಪ್ರಾಂಶುಪಾಲರಾದ ವಿಕ್ರಮ್ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಹಿರಿಯ ಕಲಾವಿದ, ಸೋಮೇಶ್ವರದ ಕಸಾಪ ಸಂಚಾಲಕ ತೋನ್ಸೆ ಪುಷ್ಕಳ ಕುಮಾರ್ ಇವರನ್ನು ಸನ್ಮಾನಿಸಲಾಯಿತು


ಉಳ್ಳಾಲ ಕಸಾಪ ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕ ತೋನ್ಸೆ ಪುಷ್ಕಳ್ ಕುಮಾರ್ ನಿರೂಪಿಸಿದರು. ಶಾಲಾ ಅಧ್ಯಾಪಿಕೆ ಜಯಲಕ್ಷ್ಮಿ ಅವರು ವಂದಿಸಿದರು. ತಾಲೂಕು ಘಟಕದ ಸದಸ್ಯ ಆನಂದ ಕೆ. ಅಸೈಗೋಳಿ, ಕಾರ್ಯದರ್ಶಿ ಎಡ್ವರ್ಡ್ ಲೋಬೋ, ಸದಸ್ಯ ರಮೇಶ್ ಕೆ ಉಪಸ್ಥಿತರಿದ್ದರು.  


ಕಾರ್ಯಕ್ರಮದ ಅಂಗವಾಗಿ 'ಅಮೃತ ಭಾರತಿಗೆ ಕನ್ನಡದಾರತಿ' ಕಲ್ಪನೆಯೊಂದಿಗೆ ತೋನ್ಸೆ ಪುಷ್ಕಳ್ ಕುಮಾರ್ ಮತ್ತು ಬಳಗದವರಿಂದ ದೇಶಭಕ್ತಿಗೀತೆ ಗಾಯನ ನಡೆಯಿತು ಪಲ್ಲವಿ ಪ್ರಭು, ಸತೀಶ್ ಸುರತ್ಕಲ್, ದೀಪಕ್ ರಾಜ್ ಉಳ್ಳಾಲ್, ನವಗಿರಿ ಗಣೇಶ್ ಹಾಗೂ ಪರಿಜ್ಞಾನ ಕಾಲೇಜು ವಿದ್ಯಾರ್ಥಿಗಳಾದ ಸುವಿಕ್ಷ ,ಪವಿತ್ರ, ವೈಶಾಖ್ ಭಾಗವಹಿಸಿದರು. ರಿತೇಶ್ ಮತ್ತು ಅಭಿಷೇಕ್ ಸ್ವರಚಿತ ಕವನ ವಾಚಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top