ಹೊಸದಿಲ್ಲಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಖ್ಯಾತ ಕ್ರೀಡಾಪಟು ಪಿ.ಟಿ. ಉಷಾ, ಕಲಾವಿದ ವಿ. ವಿಜಯೇಂದ್ರ ಪ್ರಸಾದ್ ಮತ್ತು ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜಾ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ಗಳನ್ನು ಮಾಡಿ, ನಾಲ್ವರು ಗಣ್ಯರನ್ನೂ ಅಭಿನಂದಿಸಿದ್ದಾರೆ.
ಸರಣಿ ಟ್ವೀಟ್ಗಳಲ್ಲಿ ಪ್ರಧಾನಮಂತ್ರಿಯವರು, ವಿ. ವಿಜಯೇಂದ್ರ ಪ್ರಸಾದ್ ಅವರು ದಶಕಗಳಿಂದ ಸೃಜನಶೀಲ ಪ್ರಪಂಚದೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರ ಕೃತಿಗಳು ಭಾರತದ ವೈಭವಯುತ ಸಂಸ್ಕೃತಿಯನ್ನು ಪ್ರದರ್ಶಿಸುತ್ತವೆ ಮತ್ತು ಜಾಗತಿಕವಾಗಿ ಛಾಪು ಮೂಡಿಸಿವೆ ಎಂದಿದ್ದಾರೆ.
ವೀರೇಂದ್ರ ಹೆಗ್ಗಡೆಯವರ ಕೊಡುಗೆ ಕುರಿತು ಮಾತನಾಡಿದ ಮೋದಿ, ವೀರೇಂದ್ರ ಹೆಗ್ಗಡೆಯವರು ಅತ್ಯುತ್ತಮ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು ಅವರು ಖಂಡಿತವಾಗಿಯೂ ಸಂಸತ್ತಿನ ಕಲಾಪವನ್ನು ಶ್ರೀಮಂತಗೊಳಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇಳಯರಾಜರ ಸೃಜನಶೀಲ ಪ್ರತಿಭೆಯನ್ನು ಶ್ಲಾಘಿಸಿದ ಪ್ರಧಾನಿ, ಇಳಯರಾಜರು ತಲೆಮಾರುಗಳಿಂದಲೂ ಜನರನ್ನು ಆಕರ್ಷಿಸಿದ್ದಾರೆ ಮತ್ತು ಅವರ ಕೃತಿಗಳು ಅನೇಕ ಭಾವನೆಗಳನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ ಎಂದಿದ್ದಾರೆ.
ಪಿ.ಟಿ ಉಷಾ ಅವರ ಬಗ್ಗೆ, ಮೋದಿ ಅವರು ಪ್ರತಿ ಭಾರತೀಯರಿಗೆ ಸ್ಫೂರ್ತಿ ಮತ್ತು ಕ್ರೀಡೆಯಲ್ಲಿ ಅವರ ಸಾಧನೆಗಳು ವ್ಯಾಪಕವಾಗಿ ತಿಳಿದಿವೆ ಎಂದು ಅಭಿನಂದಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ