ಉಜಿರೆ: ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿದಾನ ಎಂಬ ಚತುರ್ವಿಧ ದಾನ ಪರಂಪರೆಯೊಂದಿಗೆ ಜಾತಿ-ಮತ ಬೇಧವಿಲ್ಲದೆ ಡಿ. ವೀರೇಂದ್ರ ಹೆಗ್ಗಡೆಯವರು ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಂಡ ಬಹುಮುಖಿ ಸೇವಾಕಾರ್ಯಗಳನ್ನು ಪರಿಗಣಿಸಿ ಹೆಗ್ಗಡೆಯವರನ್ನು ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿನಂದಿಸಿ ಹೆಗ್ಗಡೆಯವರ ನಾಮನಿರ್ದೇಶನದಿಂದ ಜೈನಸಮಾಜಕ್ಕೆ ವಿಶೇಷ ಗೌರವ ಬಂದಿದೆ. ಇದು ಸತ್ಕಾರ್ಯಗಳಿಗೆ, ಸಹೃದಯಗಳಿಗೆ ಸಂದ ಗೌರವವಾಗಿದೆ ಎಂದು ಸ್ವಾಮೀಜಿ ಹಾರೈಸಿದ್ದಾರೆ.
ಚಾಮರಾಜನಗರ ಕನಕಗಿರಿ ಜೈನಮಠದ ಪೂಜ್ಯ ಭುವನಕೀರ್ತಿ ಸ್ವಾಮೀಜಿ ಶುಭ ಹಾರೈಸಿ ಪ್ರಧಾನಿ ನರೇಂದ್ರ ಮೋದಿಗೂ, ಹೆಗ್ಗಡೆಯವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕರು ತಮ್ಮ ಸಂದೇಶದಲ್ಲಿ ಹೆಗ್ಗಡೆಯವರು ರಾಜ್ಯಸಭೆಗೆ ಆಯ್ಕೆಯಾಗಿರುವುದು ಸಕಲ ಕನ್ನಡಿಗರಿಗೆ ಅತೀವ ಸಂತಸವಾಗಿದೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಹಂಡೆ ಹಾಲು ಕುಡಿದಷ್ಟು ಆನಂದವಾಯಿತು. ಹೆಗ್ಗಡೆಯವರು ಭಾರತರತ್ನ ಭೂಷಿತರಾದಾಗ ಅಮೃತಪಾನದ ದಿವ್ಯಾನುಭೂತಿ ಆಗುತ್ತದೆ. ಹೆಗ್ಗಡೆಯವರಿಗೆ ಅಭಿನಂದನೆಗಳು ಎಂದು ನಾಡೋಜ ಹಂಪನಾ ಮತ್ತು ಕಮಲಾ ಹಂಪನಾ ತಮ್ಮ ಸಂತಸ ವ್ಯಕ್ತ ಪಡಿಸಿದ್ದಾರೆ.
ಧರ್ಮಸ್ಥಳದ ಹಲವು ಮಂದಿ ಅಭಿಮಾನಿಗಳು, ಭಕ್ತರು ಹೆಗ್ಗಡೆಯವರಿಗೆ ದೂರವಾಣಿ ವಿದ್ಯದಂಚೆ, ಟ್ವೀಟ್ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.
ಸದ್ಯ ಹೆಗ್ಗಡೆಯವರು ಬೆಂಗಳೂರಿನಲ್ಲಿ ಈಗಾಗಲೇ ಒಪ್ಪಿಕೊಂಡ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದು ಇದೇ ಹತ್ತರಂದು ಭಾನುವಾರ ಧರ್ಮಸ್ಥಳಕ್ಕೆ ಬರುತ್ತಾರೆ.
ಸರ್ಕಾರ ಒಳ್ಳೆಯ ಜನರ ಸತ್ಕಾರ್ಯವನ್ನು ಗುರುತಿಸಿದ್ದಾರೆ. ಮಹಿಳಾ ಸಬಲೀಕರಣವಾದಾಗ, ಎಲ್ಲಾ ಮಹಿಳೆಯರು ಸ್ವಾವಲಂಬಿಗಳಾದಾಗ ದೇಶ ಸದೃಢವಾಗಿ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ಹೇಮಾವತಿ ವೀ. ಹೆಗ್ಗಡೆಯವರು ಅಭಿಪ್ರಾಯಪಟ್ಟಿದ್ದಾರೆ.
ಶಾಸಕ ಹರೀಶ್ ಪೂಂಜ ಕೂಡಾ ಹೆಗ್ಗಡೆಯವರಿಗೆ ಭಕ್ತಿಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕೂಡಾ ಹೆಗ್ಗಡೆಯವರನ್ನು ಅಭಿನಂದಿಸಿ ಇನ್ನಷ್ಟು ಜನಮಂಗಲ ಕಾರ್ಯಗಳು ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯಲಿ ಎಂದು ಹಾರೈಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ