ಪುತ್ತೂರು: ನಗರದ ತೆಂಕಿಲದ ಕೋಡಿಜಾಲು ನಿವಾಸಿ, ಯುವಚಿತ್ರ ಕಲಾವಿದೆ ಅದಿತಿ ಎಂ.ಎಸ್ ಅವರ ಆನ್ಲೈನ್ ಚಿತ್ರಕಲಾ ವೀಕ್ಷಣಾ ಮತ್ತು ಮಾರಾಟ ತಾಣ msadithi.in ಜೂನ್ 5ರಂದು ಅಸ್ತಿತ್ವಕ್ಕೆ ಬರಲಿದೆ. ಈ ವೆಬ್ ಸೈಟ್ನಲ್ಲಿ ಅದಿತಿ ರೂಪಿಸಿರುವ ಹತ್ತು ಹಲವು ಚಿತ್ರಕಲಾ ಮಾದರಿಗಳಿದ್ದು ಆಸಕ್ತರು ಆನ್ಲೈನ್ ಮುಖಾಂತರ ಖರೀದಿ ಮಾಡಬಹುದಾಗಿದೆ.
ಬೆಳ್ತಂಗಡಿ ಪುರಸಭೆಯ ಮುಖ್ಯ ಅಧಿಕಾರಿ ಸುಧಾಕರ್ ಎಂ.ಎಚ್ ಹಾಗೂ ಗೃಹಿಣಿ ಪೂರ್ಣಿಮಾ ಎಂ.ಎಸ್ ದಂಪತಿ ಪುತ್ರಿಯಾಗಿರುವ ಅದಿತಿ, ಪ್ರಸ್ತುತ ಪುತ್ತೂರಿನ ಅಂಬಿಕಾ ಪದವಿ ಕಾಲೇಜಿನ ಅಂತಿಮ ವರ್ಷದ ಬಿ.ಎ ವಿದ್ಯಾರ್ಥಿನಿಯಾಗಿದ್ದು, ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹಾಗೂ ಸಾಧನೆ ಮಾಡಿದ್ದಾರೆ. ವಿವಿಧ ಬಗೆಯ ಚಿತ್ರರಚನೆಯಲ್ಲಿ ಪಾರಮ್ಯ ಹೊಂದಿದ್ದಾರೆ. ಮಂದಲ ಆರ್ಟ್, ಝೆಂಟಾಂಗಲ್ ಆರ್ಟ್, ಮಧುಬನಿ ಆರ್ಟ್, ಕಲಂಕರಿ ಆರ್ಟ್, ಡಾಟ್ ವರ್ಕ್, ಚಾರ್ಕೋಲ್ ಪೈಂಟಿಂಗ್ ಹೀಗೆ ನಾನಾ ಬಗೆಯ ಕಲಾಪ್ರಕಾರಗಳನ್ನು ಒಲಿಸಿಕೊಂಡು ಈಗಾಗಲೇ ಅಸಂಖ್ಯಾತ ಚಿತ್ರಗಳನ್ನು ರಚಿಸಿರುತ್ತಾರೆ. ಇವರ ಹಲವಾರು ಚಿತ್ರಕಲೆಗಳನ್ನು ಈಗಾಗಲೇ ಹಲವಾರು ಮಂದಿ ಖರೀದಿಸಿರುವುದು ಪುತ್ತೂರಿನ ಈ ಕಲಾವಿದೆಯ ಕಲಾನೈಪುಣ್ಯವನ್ನು ಅನಾವರಣಗೊಳಿಸಿದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಪ್ರಸ್ತುತ ಲೋಕಾರ್ಪಣೆಗೊಳ್ಳುತ್ತಿರುವ ವೆಬ್ಸೈಟ್ನ ಮೂಲಕ ಗ್ರಾಹಕರು ತಮಗೆ ಬೇಕಾದ ಪ್ರಕಾರದ ಚಿತ್ರಕಲೆಯನ್ನು ಆಯ್ಕೆ ಮಾಡಿ ಖರೀದಿ ಮಾಡಬಹುದಲ್ಲದೆ, ತಮ್ಮ ಕಲ್ಪನೆಯ ಚಿತ್ರದ ಬಗೆಗೆ ಮಾಹಿತಿನೀಡಿ ಅಂತಹ ಚಿತ್ರಗಳನ್ನೇ ಮಾಡಿಸಿ ಪಡೆದುಕೊಳ್ಳುವುದಕ್ಕೂ ಅವಕಾಶವಿದೆ. ಖರೀದಿಸುವ ಗ್ರಾಹಕರಿಗೆ ಉಚಿತ ಅಂಚೆವೆಚ್ಚದೊಂದಿಗೆ ಚಿತ್ರಕಲೆಯನ್ನು ಕಳುಹಿಸಿಕೊಡಲಾಗುತ್ತದೆ.
ವೆಬ್ ಸೈಟ್ ಅನಾವರಣ ಸಮಾರಂಭ:
ಜೂನ್ 5ರಂದು ನಗರದ ಶಾರದಾ ಕಲಾಕೇಂದ್ರದಲ್ಲಿ ನಡೆಯುವ ವೆಬ್ ಸೈಟ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ನಟ್ಟೋಜ ಫೌಂಟೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಅಖಿಲಾ ಪಜಿಮಣ್ಣು ವೆಬ್ ಸೈಟ್ ಅನ್ನು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಮಾಧವ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.