ಧರ್ಮಜ್ಯೋತಿಯನ್ನು ಬೆಳಗಲು ನಮ್ಮ ಕರ್ತವ್ಯವನ್ನು ಮಾಡೋಣ: ರವೀಶ ತಂತ್ರಿ ಕುಂಟಾರು

Upayuktha
0

ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಮಹಾಸಭೆ



ಬದಿಯಡ್ಕ: ನಾವು ಮಾಡುವ ಪ್ರತಿಯೊಂದು ಕೆಲಸವೂ ದೇವರ ಪುಸ್ತಕದಲ್ಲಿ ದಾಖಲಾಗುತ್ತದೆ. ನಾವು ಮಾಡಿದ ಸೇವೆ, ಕರ್ತವ್ಯ, ಕಾರ್ಯಗಳು ದೇವರಲ್ಲಿ ಸೇರ್ಪಡೆಯಾದರೆ ಅದಕ್ಕೆ ತಕ್ಕುದಾದ ಪ್ರತಿಫಲ ಒದಗಿಬರುತ್ತದೆ. ಧರ್ಮಜ್ಯೋತಿಯನ್ನು ಬೆಳಗಲು ನಾವು ನಮ್ಮ ಕರ್ತವ್ಯವನ್ನು ಮಾಡಬೇಕಾಗಿದೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.


ಭಾನುವಾರ ಕುಂಬ್ಡಾಜೆ ಗ್ರಾಮದ ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಉಪಸಮಿತಿಗಳ ರೂಪೀಕರಣದ ಮಹಾಸಭೆಯಲ್ಲಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಊರಿನ ಕ್ಷೇತ್ರ, ವಿದ್ಯಾಲಯ ಸುವ್ಯವಸ್ಥಿತವಾಗಿದ್ದರೆ ಆ ಪ್ರದೇಶವು ಉತ್ತಮವಾಗಿರುತ್ತದೆ ಎಂಬುದು ಹಿರಿಯರ ಕಲ್ಪನೆ. ಆ ದೃಷ್ಟಿಯಿಂದ ನಮ್ಮ ಪೂರ್ವಜರು ಈ ಮಣ್ಣಿನಲ್ಲಿ ಧರ್ಮ ಭದ್ರವಾಗಿ ನೆಲೆಯೂರಲು ಮೂರ್ತಿಯ ಆರಾಧನಾ ಪದ್ಧತಿಯನ್ನು ಜ್ಯಾರಿಗೆ ತಂದಿರುತ್ತಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದಾಗ ನೆನೆದ ಕಾರ್ಯಗಳು ಕೈಗೂಡುತ್ತವೆ. ನಮ್ಮ ಪರಿಸರದ ದೇವಾಲಯವು ವ್ಯವಸ್ಥಿತವಾದ ಆರಾಧನೆಯನ್ನು ಪಡೆದುಕೊಂಡಿರಬೇಕು ಎಂದರು.


ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಯು.ಬಿ. ಕುಣಿಕುಳ್ಳಾಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಉದ್ಯಮಿ ಮಧುಸೂದನ ಆಯರ್ ಮಂಗಳೂರು ಅವರು ಮಾತನಾಡಿ ಹಿರಿಯರು ಓಡಾಡಿದ ಮಣ್ಣಿನಲ್ಲಿ ದೇವರ ಸೇವೆಯನ್ನು ಮಾಡಲು ಹೆಮ್ಮೆಯಿದೆ. ಬಡಗು ಶಬರಿಮಲೆ ಎಂದು ಖ್ಯಾತಿ ಪಡೆದ ಈ ದೇವಸ್ಥಾನವು ವೈಭವದಿಂದ ಮೆರೆಯಬೇಕು ಎಂದರು.


ನಮ್ಮ ಪಾಲಿಗೊದಗಿದ ಪುಣ್ಯಕಾರ್ಯವನ್ನು ಪೂರೈಸೋಣ: ಬಿ.ವಸಂತ ಪೈ

ಧಾರ್ಮಿಕ ಮುಂದಾಳು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಬಿ. ವಸಂತ ಪೈ ಬದಿಯಡ್ಕ ಅವರು ಮಾತನಾಡಿ ಉಬ್ರಂಗಳವೆಂಬ ಹೆಸರಿಗೆ ವಿಶೇಷ ಮಹತ್ವವಿದೆ. ಅನೇಕ ಸಾಧಕರನ್ನು ನಾಡಿಗೆ ನೀಡಿದ ಊರು ಇದಾಗಿದೆ. ದೇವರ ಅನುಗ್ರಹವಿದ್ದರೆ ಮಾತ್ರ ನಮ್ಮ ಯಾವುದೇ ಕಾರ್ಯವು ನಿರ್ವಿಘ್ನವಾಗಿ ಕೈಗೂಡಲು ಸಾಧ್ಯವಿದೆ. ನಾವು ಕೇವಲ ನಿಮಿತ್ತವಾಗಿ ಮುಂದೆ ನಿಲ್ಲುತ್ತೇವೆ. ಎಲ್ಲವನ್ನೂ ನೀಡಿದ ದೇವರಿಗೆ ನಾವು ಋಣಿಯಾಗಿರಬೇಕು. ಆತನ ಸೇವೆಯನ್ನು ಮಾಡಲು ನಾವು ಮುಂದೆ ಬರಬೇಕು. ಆತನ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ದೇವರ ಸೇವೆಗಾಗಿ ನಮಗೆ ಮಾನವ ಜನ್ಮಸಿಕ್ಕಿದೆ. ನಮ್ಮ ಪಾಲಿಗೊದಗಿದ ಪುಣ್ಯದ ಕೆಲಸವನ್ನು ಪೂರೈಸಿ ಜೀವನವನ್ನು ಸಾರ್ಥಕಪಡಿಸಿಕೊಳ್ಳೋಣ ಎಂದರು.


ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ| ಕಿಶೋರ್ ಕುಮಾರ್ ಕುಣಿಕುಳ್ಳಾಯ, ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಉಪ್ಪಂಗಳ ವಾಸುದೇವ ಭಟ್, ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ, ಡಾ| ಶ್ರೀನಿಧಿ ಸರಳಾಯ ಬದಿಯಡ್ಕ, ಡಾ| ವೇಣುಗೋಪಾಲ ಕಳೆಯತ್ತೋಡಿ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರಕ ದಿನೇಶ್ ಕೊಕ್ಕಡ, ಕೂಪನ್ ಸಮಿತಿಯ ಅಧ್ಯಕ್ಷ ವಿಶ್ವನಾಥ ಬಳ್ಳಪದವು, ಯುವ ಸಮಿತಿಯ ಅಧ್ಯಕ್ಷ ರಾಜೇಶ್ ಮಾಸ್ತರ್ ಅಗಲ್ಪಾಡಿ, ಧರ್ಮಶಾಸ್ತಾ ಸೇವಾಸಂಘದ ಅಧ್ಯಕ್ಷ ಸುರೇಶ್ ಉಬ್ರಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಕಿರಣ್ ಕುಮಾರ್ ಕುಣಿಕುಳ್ಳಾಯ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣದ ಮಾಹಿತಿಯನ್ನು ನೀಡಿದರು. ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಪ್ರಾರ್ಥನೆ ಹಾಡಿದರು.


ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಬು ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಕೋಶಾಧಿಕಾರಿ ಈಶ್ವರ ರಾವ್ ಮೈಲ್ತೊಟ್ಟಿ ವಂದಿಸಿದರು. ರಮೇಶ್ ಕೃಷ್ಣ ಪದ್ಮಾರು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಉದ್ಯಮಿ ಮಧುಸೂದನ ಆಯರ್ ಅವರು ಸೇರಿದ ಎಲ್ಲಾ ಭಗವದ್ಭಕ್ತರ ಮನೆಗಳಿಗೆ ಆಯ್ದ ವಿಶೇಷ ಹಣ್ಣಿನ ಗಿಡಗಳು, ವಿವಿಧ ಜಾತಿಯ ಮರಗಳ ಗಿಡಗಳನ್ನು ವಿತರಿಸಿದರು. ಬೆಳಗ್ಗೆ 12 ನಾಳಿಕೇರ ಮಹಾಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ಮಹಾಪೂಜೆ ಜರಗಿತು. ಮಧ್ಯಾಹ್ನ ಪ್ರಸಾದ ಭೋಜನ ನೀಡಲಾಯಿತು. ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top