
ಸಮಾಜ ಬರಿ ಬೇರೆಯವರ ಬಗ್ಗೆ ಯೋಚಿಸುತ್ತದೆ, ಟೀಕಿಸುತ್ತಿದೆ ಎನ್ನುವ ನಾವು ಸಮಾಜವೇ ನಾವು ಎಂದು ತಿಳಿದುಕೊಳ್ಳುವಲ್ಲಿ ಯಾಕೋ ವಿಫಲವಾಗುತ್ತಿದ್ದೇವೆ. ಸಮಾಜದ ತುಂಬೆಲ್ಲಾ ಇರುವ ನಾವು ಬೇರೆಯವರ ಬಗ್ಗೆ ಯೋಚಿಸುವುದರಲ್ಲಿ ನಮ್ಮ ಅರ್ಧ ಜೀವಮಾನವನ್ನೇ ಕಳೆದು ಬಿಡುತ್ತೆವೆ.
ನಮಗೆಲ್ಲಾ ನಮ್ಮ ಮನೆಯ ದೋಸೆಗಿಂತ ಬೇರೆಯವರ ಮನೆಯಲ್ಲಿ ಮಾಡಿದ ದೋಸೆಯಲ್ಲಿ ಎಷ್ಟು ತೂತಿದೆ ಎಂದು ಲೆಕ್ಕ ಮಾಡುವುದೇ ಆಸಕ್ತಿಕರ ವಿಷಯ. ವ್ಯಕ್ತಿಗೆ ಸರ್ಕಾರ ಅದೆಷ್ಟೇ ಸ್ವಾತಂತ್ರ್ಯದ ಹಕ್ಕನ್ನು ನೀಡಿದರೂ ಅವನ್ನೆಲ್ಲಾ ಅನುಭವಿಸಲು ಸಮಾಜ ಬಿಗಿಯಾದ ಬೇಲಿಯನ್ನು ರಚಿಸಿ ನಮ್ಮೆಲ್ಲರನ್ನೂ ಆ ಸಂಕೋಲೆಯೊಳಗೆ ಬಂಧಿಸಿಟ್ಟಿದೆ.
ಯಾವುದೇ ವ್ಯಕ್ತಿ ಹೊಸದಾಗಿ ಏನನ್ನಾದರೂ ಮಾಡಲು ಹೊರಟರೆ ಅದನ್ನು ಟೀಕಿಸಲೆಂದೇ ಒಂದಷ್ಟು ಜನ ಸಿದ್ಧರಾಗಿರುತ್ತಾರೆ. ಅವರ ಬಗ್ಗೆ ಮಾತನಾಡುತ್ತಾ, ಅವರ ಹೊಸ ಅನ್ವೇಷಣೆಗೆ ಮಾತಿನ ಮೂಲಕವೇ ಬೀಗ ಜಡಿಯುತ್ತಾರೆ. ಇದರಿಂದ ಅದೆಷ್ಟೋ ಪ್ರತಿಭೆಗಳು ಇನ್ನೂ ಹೊರಹೊಮ್ಮದೆ ಆಕಾಶದೊಳಗಿನ ಮೋಡದೊಳಗೆ ಹುದುಗಿಹೋಗಿದೆ.
ಮಾತನಾಡುವ ಜನಗಳಿಗೆ ತಿಳಿಯುವುದೇ ಇಲ್ಲ, ನಮ್ಮ ಮಾತಿನಿಂದ ಇನ್ನೊಬ್ಬರ ವೈಯಕ್ತಿಕ ಜೀವನಕ್ಕೆ ಪೆಟ್ಟು ಬೀಳುತ್ತದೆ ಎಂದು. ಇನ್ನೂ ಕೆಲವು ಚುಚ್ಚು ಮಾತುಗಳು ಅನೇಕರ ಪ್ರಾಣವನ್ನೇ ತೆಗೆದುಕೊಂಡಿದೆ. ಸಮಾಜದಲ್ಲಿ ಬದುಕಲು ಸ್ವಾತಂತ್ರ್ಯರು ಎಂದುಕೊಂಡಿರುವ ನಾವು, ಸಮಾಜದ ನೀತಿನಿಯಮಗಳ ಸಂಕೋಲೆಯಲ್ಲಿ ಬಂಧಿತರಾಗಿರುವುದಂತು ನಿಜ.
ಯಾವುದೊ ಕೆಲಸ ಇಷ್ಟವಾಯಿತೆಂದು ಮಾಡಲು ಹೊರಟರೆ, ಸಮಾಜವನ್ನು ಎದುರಿಸುವ ಭಯ ಎದುರಾಗುತ್ತದೆ. ಬೇರೆಯವರ ಮನೆ ವಿಷಯದಲ್ಲಿ ಮೂಗು ತೂರಿಸುವ ಜನಗಳು, ಅನೇಕ ಜನರ ಉಜ್ವಲ ಭವಿಷ್ಯಕ್ಕೆ ತಡೆಗೋಡೆಯನ್ನೇ ನಿರ್ಮಿಸಿದ್ದಾರೆ.
ಇನ್ನೊಬ್ಬರ ವಿಷಯಕ್ಕೆ ಹೋಗಿ ಅವರಿಗೆ ಇಷ್ಟೊಂದೆಲ್ಲಾ ತೊಂದರೆಗಳನ್ನು ನೀಡುವ ಬದಲು ಇನ್ನಾದರೂ ನಮ್ಮ ಬದುಕಿನ ಬಗ್ಗೆ ಚಿಂತಿಸೋಣ.
-ದೀಕ್ಷಿತಾ ಜೇಡರಕೊಡಿ
ವಿವೇಕಾನಂದ ಕಾಲೇಜು ಪುತ್ತೂರು
Post a Comment